ಯಕ್ಷಶಿಕ್ಷಣ ಮಹಾಭಿಯಾನದ ಅಂಗವಾಗಿ ಬ್ರಹ್ಮಾವರದಲ್ಲಿ ನಡೆದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪಾಲ್ಗೊಂಡು ಪ್ರಮಾಣ ಪತ್ರ ವಿತರಿಸಿದರು.

ಬ್ರಹ್ಮಾವರ: ಯಕ್ಷಗಾನ ಸರ್ವಾಂಗ ಸುಂದರ ಕಲೆ. ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಈ ನಾಲ್ಕೂ ಅಂಶಗಳೂ ಪೂರ್ಣ ಪ್ರಮಾಣದಲ್ಲಿ ವಿಕಾಸ ಹೊಂದಿರುವ ಏಕೈಕ ಕಲಾಪ್ರಕಾರ ಯಕ್ಷಗಾನ. ಹಿಂದೆ ಶಾಲೆಗೇ ಹೋಗದ ಕಲಾವಿದರು ಸಮಾಜ ತಿದ್ದುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.

ಯಕ್ಷಶಿಕ್ಷಣ ಮಹಾಭಿಯಾನದ ಅಂಗವಾಗಿ ಬ್ರಹ್ಮಾವರದಲ್ಲಿ ನಡೆದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಯಕ್ಷಶಿಕ್ಷಣ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಕೆ. ರಘುಪತಿ ಭಟ್ ಅವರು ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ಆರಂಭಿಸಲು ಕಾರಣವಾದ ಸಂಗತಿ, ಅದರ ಪ್ರಯೋಜನ ವಿವರಿಸಿ ಈ ಅಭಿಯಾನದ ಯಶಸ್ಸಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಕೊಡುಗೆ ಅಗಾಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಾದ ಮಹೇಶ್ವರೀ, ಲಾಸ್ಯ, ದಿಗ್ಗಜ್ ಡಿ. ಶೆಟ್ಟಿ, ನವ್ಯಾ ಹಾವಂಜೆ, ತನುಶ್ರೀ ಯಕ್ಷಶಿಕ್ಷಣದಿಂದ ತಮಗಾದ ಧನಾನತ್ಮಕ ಪ್ರಯೋಜನ ಮತ್ತು ಸ್ಮರಣೀಯ ಅನುಭವ ಹಂಚಿಕೊಂಡರು. ಪ್ರಸಾಧನ ತಂಡದ ನೇತೃತ್ವ ವಹಿಸಿದ ಕೃಷ್ಣಸ್ವಾಮಿ ಜೋಶಿ ಮತ್ತು ಮಿಥುನ ನಾಯಕ್‌ರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಅಭ್ಯಾಗತರಾಗಿ ದಿನಕರ ಹೇರೂರು, ರಾಜು ಕುಲಾಲ, ಬೈಕಾಡಿ ಸುಪ್ರಸಾದ ಶೆಟ್ಟಿ, ಎಂ. ಗಂಗಾಧರ ರಾವ್, ಸತೀಶ್ ಶೆಟ್ಟಿ, ಚಂದ್ರಶೇಖರ ಎಂ. ನಾಯರಿ, ಶ್ರೀಧರ್ ಬಿ. ಶೆಟ್ಟಿ, ದಿನೇಶ್ ನಾಯರಿ, ಗುರುರಾಜ ರಾವ್ ಉಪಸ್ಥಿತರಿದ್ದರು.ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಇದರ ಯಶಸ್ಸಿನಲ್ಲಿ ಬ್ರಹ್ಮಾವರದ ಸಂಘಟನಾ ಸಮಿತಿಯ ಶ್ರಮವನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಸಂಘಟನಾ ಸಮಿತಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಸಂಘಟನಾ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯ ಪೂಜಾರಿ ವಂದಿಸಿದರು. ಟ್ರಸ್ಟಿನ ಕೋಶಾಧಿಕಾರಿ ಗಣೇಶ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.

ಕಲಾರಂಗದ ಸದಸ್ಯರಾದ ಎಸ್. ವಿ. ಭಟ್, ನಾರಾಯಣ ಎಂ. ಹೆಗಡೆ, ಡಾ. ರಾಜೇಶ್ ನಾವುಡ, ನಟರಾಜ ಉಪಾಧ್ಯ, ನಾಗರಾಜ ಹೆಗಡೆ, ಎಚ್. ಎನ್. ವೆಂಕಟೇಶ ಉಪಸ್ಥಿತರಿದ್ದರು. ಸಭೆಯ ಪೂರ್ವದಲ್ಲಿ ಸರ್ಕಾರಿ ಪ್ರೌಢಶಾಲೆ ನಾಲ್ಕೂರು ಇಲ್ಲಿಯ ವಿದ್ಯಾರ್ಥಿಗಳಿಂದ ವರಾನ್ವೇಷಣೆ, ಬಳಿಕ ಎಸ್.ಎಂ.ಎಸ್. ಕನ್ನಡ ಮಾಧ್ಯಮ ಪ್ರೌಢಶಾಲೆ ಬ್ರಹ್ಮಾವರ ಇದರ ವಿದ್ಯಾರ್ಥಿಗಳಿಂದ ಗಯಾಭಯ ಯಕ್ಷಗಾನ ಪ್ರದರ್ಶನಗೊಂಡಿತು.