ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಂದು ಯಕ್ಷಗಾನಕ್ಕೆ ಅನೇಕ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದು ಅಕಾಡೆಮಿಯ ಕೆಲಸವನ್ನು ಬಹಳಷ್ಟು ಹಗರುವಾಗಿಸಿದೆ. ಮಕ್ಕಳ, ಮಹಿಳಾ ಯಕ್ಷಗಾನ ಸಂಸ್ಥೆಗಳು ಆರಂಭಗೊಳ್ಳುತ್ತಿರುವುದು ಯಕ್ಷಗಾನಕ್ಕೆ ಭವಿಷ್ಯ ಭದ್ರವಾಗಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಂತಸ ವ್ಯಕ್ತಪಡಿದರು.ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಕಾರ್ಕಳದ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಹಮ್ಮಿಕೊಂಡ 9ನೇ ವರ್ಷದ ಯಕ್ಷಗಾನ ‘ರಾಜಾ ದಿಲೀಪ’ ಪ್ರಸಂಗದ ಪ್ರದರ್ಶನ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.ಯಕ್ಷಗಾನದಲ್ಲಿ ಸಾಧಕರ ಕೊರತೆಯಿಲ್ಲ. ಯೋಗ್ಯ ಗುರುಗಳಿಂದ ತರಬೇತು ಪಡೆದ ಕಲಾಸಂಸ್ಥೆಗೆ ಉತ್ತಮ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ಸಂಘದ ಸಾಧನೆ ಮಾದರಿಯಾಗಿದೆ. ಇಲ್ಲಿ ಮಕ್ಕಳಿಂದ ಹಿಡಿದು 84ರ ಮಹಿಳೆಯರು ಕೂಡಾ ಯಕ್ಷಗಾನ ಕಲಿತಿರುವುದನ್ನು ಕೇಳಿ ಸಂತೋಷಪಟ್ಟಿದ್ದೇನೆ. ಈ ಕಲಾಸಂಘಕ್ಕೆ ಆಶ್ರಯ ಪ್ರೋತ್ಸಾಹ ನೀಡುತ್ತಿರುವ ಶೋಧನ್ ಕುಮಾರ್ ಶೆಟ್ಟಿ ಮತ್ತು ರೂಪಾರಾಣಿ ದಂಪತಿಯ ಕಲಾಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಅವರು ಹಾರೈಸಿದರು.ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಯಕ್ಷಗಾನ ರಾಜ್ಯ ಕಲೆಯಾಗಿ ಘೋಷಣೆಯಾಗಬೇಕು. ಇದಕ್ಕೆ ಅಕಾಡೆಮಿ, ಕಲಾವಿದರು, ವಿಮರ್ಶಕರು ಎಲ್ಲರೂ ಪ್ರಯತ್ನಿಸಬೇಕು ಎಂದು ಆಶಿಸಿದರು.ವೇ.ಮೂ.ವಿಘ್ನೇಶ್ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಾಲಿಗ್ರಾಮ ಮೇಳದ ಸಂಚಾಲಕ ಪಿ.ಕಿಶನ್ ಹೆಗ್ಡೆ, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಸುಗ್ಗಿ ಸುಧಾಕರ ಶೆಟ್ಟಿ, ಉದಯ ಶೆಟ್ಟಿ ಹಾಗೂ ಉಡುಪಿಯ ಸಂಗೀತ ವಿದ್ವಾನ್ ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶೋಧನ್ ಕುಮಾರ್ ಶೆಟ್ಟಿ- ರೂಪಾರಾಣಿ ದಂಪತಿಯನ್ನು ಗೌರವಿಸಲಾಯಿತು. ಗುರು ಬಡಾನಿಡಿಯೂರು ಕೇಶವ ರಾವ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಕಲಾವಿದೆ ಪೂರ್ಣಿಮಾ ಯತೀಶ್ ರೈ ಅವರಿಗೆ ಗುರುವಂದನೆ ನಡೆಯಿತು.ಶಶಿಕಲಾ ಉದಯ ಶೆಟ್ಟಿ ಸ್ವಾಗತಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘದಿoದ ‘ರಾಜಾ ದಿಲೀಪ’ ಯಕ್ಷಗಾನ ಪ್ರಸ್ತುತಿಗೊಂಡಿತು.