ಸಾರಾಂಶ
ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ಸಂಭಾಷಣೆಯಲ್ಲಿ ಏನು ಮಾತನಾಡುತ್ತಿದ್ದಾರೆ, ಯಾರ ಜೊತೆ ಮಾತನಾಡುತ್ತಿದ್ದಾರೆ, ಏನು ನಿರ್ದೇಶನ ಕೊಡುತ್ತಿದ್ದಾರೆ, ಈ ಎಲ್ಲವೂ ಗೊತ್ತಾಗಬೇಕು
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ಸಂಭಾಷಣೆಯಲ್ಲಿ ಏನು ಮಾತನಾಡುತ್ತಿದ್ದಾರೆ? ಯಾರ ಜೊತೆ ಮಾತನಾಡುತ್ತಿದ್ದಾರೆ? ಏನು ನಿರ್ದೇಶನ ಕೊಡುತ್ತಿದ್ದಾರೆ? ಈ ಎಲ್ಲವೂ ಗೊತ್ತಾಗಬೇಕು. ತಂದೆಯ ಅಧಿಕಾರಿದಲ್ಲಿ ಮಗ ಮೂಗು ತೂರಿಸಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 136 ಸ್ಥಾನಗಳು ಸಿಕ್ಕಿದೆ ಎಂಬ ಕಾರಣಕ್ಕೆ ಏನು ಮಾಡಿದರೂ ನಡೆಯುತ್ತದೆ ಎಂದು ಹೇಗೆ ಬೇಕೆಂದರೆ ಹಾಗೆ ಅಧಿಕಾರ ನಡೆಸಿದರೆ ಆಗುವುದಿಲ್ಲ. ತಂದೆ ಸಿದ್ದರಾಮಯ್ಯ ಅವರಿಗೆ ಅಧಿಕಾರದ ಹಕ್ಕು ಇದೆ. ಆದರೆ, ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅದರಲ್ಲಿ ಮೂಗು ತೂರಿಸಿದ್ದಾರೆ. ಇದು ರಾಜ್ಯದ ಜನರ ಅರಿವಿಗೆ ಬರಬೇಕು. ಈ ಬಗ್ಗೆ ತನಿಖೆ ನಡೆಸಬೇಕು. ಏನಾಗಿದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ 6 ಪೈಸೆ ಕೂಡ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಆದರೆ, 6 ತಿಂಗಳಲ್ಲಿ ಇಷ್ಟು ಕೆಟ್ಟ ಹೆಸರು ಪಡೆದಂತಹ ಸರ್ಕಾರ ಇನ್ನೊಂದಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ 40 ಪರ್ಸೆಂಟ್ ಸರ್ಕಾರ ಎಂದು ಬೊಬ್ಬೆ ಹೊಡೆದು, ಅಧಿಕಾರಕ್ಕೆ ಬಂದ ತಾವು ಮಾಡುತ್ತಿರುವುದೇನು? ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲದರಲ್ಲೂ, ಎಲ್ಲರೂ ಮೂಗು ತೂರಿಸುತ್ತಿದ್ದಾರೆ. ಇದು ರಾಜ್ಯ ಸರ್ಕಾರ ತಲೆತಗ್ಗಿಸುವಂತಹ ವಿಚಾರ ಎಂದು ಛೇಡಿಸಿದರು.
- - - (-ಫೋಟೋ: ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ)