ಯತೀಂದ್ರರ ಕಾಲಜ್ಞಾನ ಕೃತಿ ಸರ್ವಕಾಲಕ್ಕೂ ಪ್ರಸ್ತುತ: ಎಚ್.ಎ. ವೆಂಕಟೇಶ್

| Published : Mar 15 2025, 01:05 AM IST

ಸಾರಾಂಶ

ಸಮಾಜದಲ್ಲಿ ಶ್ರೀಮಂತಿಕೆಯೇ ಶ್ರೇಷ್ಠವಲ್ಲ.‌ ‌ಶ್ರೀಮಂತರಿಂದಲೇ ಎಲ್ಲವೂ ಅಲ್ಲ. ಮನುಷ್ಯ ತನ್ನ ಅಂತರಂಗವನ್ನು ಶುದ್ಧಿಯಾಗಿ ಇಟ್ಟುಕೊಳ್ಳಬೇಕು. ಮನುಷ್ಯ ಯಾವ ರೀತಿ ಬದುಕಬೇಕೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರಳ ಜೀವನವು ಸಾರ್ಥಕ ಬದುಕು ಎಂಬುದನ್ನು ಯತೀಂದ್ರರೂ ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆ ಅದನ್ನು ಅಂದೆ ಅವರ ಕಾಲಜ್ಞಾನ ಕೃತಿಯಲ್ಲಿ ಯತೀಂದ್ರರ ವಾಣಿಯಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಯತೀಂದ್ರರವರು ರಚಿಸಿದ ಕಾಲಜ್ಞಾನದ ಕೃತಿಯಲ್ಲಿ ಎಲ್ಲಾ ಸಂದೇಶವು ಅಡಗಿದ್ದು, ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಅದನ್ನು ಜನರಿಗೆ ತಿಳಿಸಿಕೊಡುವ ನಿರಂತರ ಪ್ರಯತ್ನ ಎಲ್ಲರೂ ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಹಾಗೂ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಗೌರವಾಧ್ಯಕ್ಷ ಎಚ್.ಎ. ವೆಂಕಟೇಶ್ ತಿಳಿಸಿದರು.

ನಗರದ ಸರಸ್ವತಿಪುರಂನಲ್ಲಿ ರಾಧಾಕೃಷ್ಣ ಮಾರ್ಗದಲ್ಲಿರುವ ಶ್ರೀ ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಶ್ರೀಮಂತಿಕೆಯೇ ಶ್ರೇಷ್ಠವಲ್ಲ.‌ ‌ಶ್ರೀಮಂತರಿಂದಲೇ ಎಲ್ಲವೂ ಅಲ್ಲ. ಮನುಷ್ಯ ತನ್ನ ಅಂತರಂಗವನ್ನು ಶುದ್ಧಿಯಾಗಿ ಇಟ್ಟುಕೊಳ್ಳಬೇಕು. ಮನುಷ್ಯ ಯಾವ ರೀತಿ ಬದುಕಬೇಕೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರಳ ಜೀವನವು ಸಾರ್ಥಕ ಬದುಕು ಎಂಬುದನ್ನು ಯತೀಂದ್ರರೂ ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆ ಅದನ್ನು ಅಂದೆ ಅವರ ಕಾಲಜ್ಞಾನ ಕೃತಿಯಲ್ಲಿ ಯತೀಂದ್ರರ ವಾಣಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ವಚನಕಾರರಾಗಿ, ಸಮಾಜ ಚಿಂತಕರಾಗಿ ಅವರ ಜೀವನ‌ಅನುಕರಣೀಯವಾಗಿದೆ. ಇಂದಿನ ಸಮಾಜ ಯಾವುದರ ಹಿಂದೆ ಸಾಗುತ್ತಿದೆ. ಹಣ ಸಂಪಾದನೆ, ರಾಜಕೀಯ ಅಧಿಕಾರಕ್ಕೆ ಯಾವೆಲ್ಲ ಮಟ್ಟಕ್ಕೆ ಮನುಷ್ಯ ಇಳಿಯಬಹುದೆಂಬದನ್ನು ಅಂದೆ ಯತೀಂದ್ರರೂ ಬರೆದಿಟ್ಟಿದ್ದಾರೆ ಎಂದು ಹೇಳಿದರು.

ಯೋಗಿನಾರಾಯಣ ಯತೀಂದ್ರರು ಮೂಲತಃ ಬಳೆಗಾರರಾಗಿದ್ದರು. ಅದೊಂದು ಶ್ರೇಷ್ಠ ವೃತ್ತಿಯಾಗಿತ್ತು. ‌ಆದರೂ ವೃತ್ತಿಯನ್ನು ಲಾಭಕ್ಕಾಗಿ ಅವರು ನೋಡಲಿಲ್ಲ. ಬದಲಿಗೆ ಸಾಂಸರಿಕ ಜೀವನ ತ್ಯಜಿಸಿ ವಚನಕಾರರಾಗಿ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಭಾಗದಲ್ಲಿ ಹೆಚ್ಚು ಪ್ರಚಾರ ಇಲ್ಲದಿದ್ದರೂ ಆಂಧ್ರ ಗಡಿ ಭಾಗದಲ್ಲಿ ಹೆಚ್ವು ಪ್ರಚಾರದಲ್ಲಿದ್ದಾರೆ. ಇಲ್ಲಿಯೂ ಅವರ ಚಿಂತನೆ ತಲುಪಿಸಬೇಕೆಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ ಅವರ ವಿಚಾರಧಾರ ಪಸರಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಖಜಾಂಚಿ ಕೆ. ಚಂದ್ರಶೇಖರ್, ಲೆಕ್ಕಪರಿಶೋಧಕ ಡಿ. ನಾಗರಾಜ, ನಿರ್ದೇಶಕರಾದ ಎಚ್.ಕೆ. ಜಗನ್ನಾಥ್, ಗೋವಿಂದರಾಜು, ಎಚ್.ಕೆ. ಜಗನ್ನಾಥ, ಎಂ.ವಿ. ವೆಂಕಟೇಶ್, ರಮೇಶ್, ನಿವೃತ್ತ ಪ್ರಾಂಶುಪಾಲ ಚಿನ್ಯ ಜಗದೀಶ್, ಉಪನ್ಯಾಸಕ ಹೇಮಕುಮಾರ್, ವ್ಯವಸ್ಥಾಪಕ ಎಚ್.ಆರ್. ವೆಂಕಟೇಶ್, ರಘು ಶೆಟ್ಟಿ ಮೊದಲಾದವರು ಇದ್ದರು.

ಯತೀಂದ್ರರು ಬಳೆ ಮಾರುವ ಸಮಾಜದಲ್ಲಿ ಜನಿಸಿದರು, ಅವರು ಕೊಟ್ಟ ಸಮಾಜದ ಸುಧಾರಣಾ ಸಂದೇಶ ಎಲ್ಲರಿಗೂ ಅತ್ಯವಶ್ಯಕ ಆಗಿವೆ. ಸಮಾಜ ಸುಧಾರಕರೆಲ್ಲರನ್ನೂ ಒಂದು ಜಾತಿಗೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ. ಅವರ ಜ್ಞಾನ, ಜೀವನ ಎಲ್ಲವನ್ನೂ ಎಲ್ಲರೂ ಅರಿತು, ಅವರ ಸಂದೇಶ ಪಾಲನೆ ಮಾಡಬೇಕಿದೆ. ಹೀಗಾಗಿ, ಈ ಜಾಗದಲ್ಲಿ ಯತೀಂದ್ರರ ಪ್ರತಿಮೆ ಹಾಗೂ ಒಂದು ಆಧ್ಯಾತ್ಮ ಕೇಂದ್ರ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.

- ಎಚ್.ಎ. ವೆಂಕಟೇಶ್, ಮೈಲ್ಯಾಕ್ ಮಾಜಿ ಅಧ್ಯಕ್ಷ