ಅಭಿವೃದ್ಧಿಯ ಬದ್ಧತೆಗೆ ಮೋದಿ ಆಡಳಿತದ 11 ವರ್ಷಗಳೇ ಸಾಕ್ಷಿ: ಕಿಶೋರ್ ಕುಮಾರ್ ಕುಂದಾಪುರ

| Published : Jun 11 2025, 11:48 AM IST

ಅಭಿವೃದ್ಧಿಯ ಬದ್ಧತೆಗೆ ಮೋದಿ ಆಡಳಿತದ 11 ವರ್ಷಗಳೇ ಸಾಕ್ಷಿ: ಕಿಶೋರ್ ಕುಮಾರ್ ಕುಂದಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಸಿತ ಭಾರತದ ಅಮೃತ ಕಾಲ - ಸೇವೆ, ಸುಶಾಸನ, ಬಡವರ ಕಲ್ಯಾಣ - ಮೋದಿ ಸರಕಾರಕ್ಕೆ 11 ವರ್ಷ’ ಸಂಭ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕೇವಲ ರಾಜಕಾರಣ, ಅಧಿಕಾರ ಅನುಭವಿಸಲು ಸೀಮಿತವಾಗದ ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿಯ ಬದ್ಧತೆ ಹೊಂದಿದ್ದು, ಇದಕ್ಕೆ ಪ್ರಧಾನಿ ಮೋದಿ ನೇತೃತ್ವದ 11 ವರ್ಷಗಳ ಆಡಳಿತವೇ ಸಾಕ್ಷಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.ಅವರು ‘ವಿಕಸಿತ ಭಾರತದ ಅಮೃತ ಕಾಲ - ಸೇವೆ, ಸುಶಾಸನ, ಬಡವರ ಕಲ್ಯಾಣ - ಮೋದಿ ಸರಕಾರಕ್ಕೆ 11 ವರ್ಷ’ ಸಂಭ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೆಹರೂ ಬಳಿಕ ನಿರಂತರ ಮೂರು ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರೆ. ಪ್ರಣಾಳಿಕೆಯ ಗರಿಷ್ಠ ಭರವಸೆಗಳನ್ನು ಈಡೇರಿಸಿದ್ದಾರೆ. 2004ರಲ್ಲಿ ಕೇವಲ 7 ರಾಜ್ಯಗಳಲ್ಲಿದ್ದ ಬಿಜೆಪಿ ಅಧಿಕಾರ ಇಂದು 21 ರಾಜ್ಯಗಳಿಗೆ ವಿಸ್ತರಣೆಯಾಗಿದೆ. ದಿನಕ್ಕೆ 38 ಕಿ.ಮೀ. ಹೆದ್ದಾರಿ ನಿರ್ಮಾಣ ನಡೆಯುತ್ತಿದೆ. ಭಾರತ ಜಗತ್ತಿನ 4ನೇ ಅತೀ ದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದು ಮೊದಲ ಸ್ಥಾನಕ್ಕೆ ಏರುವ ಹಾದಿಯಲ್ಲಿದೆ ಎಂದರು.ಬಿಜೆಪಿ ಮಂಗಳೂರು ವಿಭಾಗ ಸಂಚಾಲಕ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ, ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ಧತಿ ಕನಸು ನನಸಾಗಿದೆ. 4 ಕೋಟಿ ವಸತಿ, 12 ಕೋಟಿ ಶೌಚಾಲಯ, 68 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು, ಮುದ್ರಾ ಯೋಜನೆಯಡಿ ಉದ್ಯಮಕ್ಕೆ ಸಾಲದ ನೆರವು ನೀಡಲಾಗಿದೆ ಎಂದು ಹೇಳಿದರು.ಜಿಲ್ಲಾ ಕಾರ್ಯಾಗಾರ ಜಿಲ್ಲಾ ಸಂಚಾಲಕ ರಾಜೇಶ್ ಕಾವೇರಿ ‘ಮೋದಿ ಸರ್ಕಾರಕ್ಕೆ 11 ವರ್ಷ’ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ನಡೆಯಲಿರುವ ವಿವಿಧ ಅಭಿಯಾನಗಳ ಕುರಿತು ವಿಸ್ತೃತ ಮಾಹಿತಿ ನೀಡಿದರು.ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ ವೇದಿಕೆಯಲ್ಲಿದ್ದರು.ಜಿಲ್ಲಾ ಹಿರಿಯ ನಾಗರಿಕರ ಪ್ರಕೋಷ್ಠದ ಸಂಚಾಲಕ ನಾರಾಯಣ ಮೂರ್ತಿ ಅವರಿಗೆ ಸಿಹಿ ತಿನ್ನಿಸಿ ಪ್ರಧಾನಿ ಮೋದಿ ಆಡಳಿತದ 11 ವರ್ಷವನ್ನು ಸಂಭ್ರಮಿಸಲಾಯಿತು.ಮೇ 25ರಂದು ನಡೆದ ಪ್ರಧಾನಿ ಮೋದಿ ‘ಮನ್ ಕೀ ಬಾತ್’ ಕಾರ್ಯಕ್ರಮದ ನೇರಪ್ರಸಾರವನ್ನು ಮಂಡಲದ ಶೇ.100 ಬೂತುಗಳಲ್ಲಿ ವೀಕ್ಷಿಸಿ ವರದಿ, ಫೋಟೋ ಅಪ್ಲೋಡ್ ಮಾಡಿದ ಉಡುಪಿ ನಗರ, ಗ್ರಾಮಾಂತರ ಹಾಗೂ ಬೈಂದೂರು ಅಧ್ಯಕ್ಷರನ್ನು ಅಭಿನಂದಿಸಲಾಯಿತು.ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ಶ್ರೀಕಾಂತ್ ನಾಯಕ್ ಸ್ವಾಗತಿಸಿದರು. ಜಿಲ್ಲಾ ಕಾರ್ಯಾಗಾರ ಸಹ ಸಂಚಾಲಕ ದಿಲೇಶ್ ಶೆಟ್ಟಿ ವಂದಿಸಿದರು.