ಸಾರಾಂಶ
ಕೊಪ್ಪಳ (ಯಲಬುರ್ಗಾ):
ಯಲಬುರ್ಗಾ ಪಟ್ಟಣದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಲು ಸಂಬಂಧಿಸಿದ ಇಲಾಖೆಗೆ ಶಿಫಾರಸು ಮಾಡಬೇಕು ಎಂದು ತಾಲೂಕು ವಕೀಲರ ಸಂಘದಿಂದ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿಗೆ ಮನವಿ ಸಲ್ಲಿಸಲಾಯಿತು.ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಹೊಂಬಳ ಮಾತನಾಡಿ, ಹೈಕೋರ್ಟ್ ಆದೇಶ ಹಾಗೂ ನಿಯಮಾವಳಿ ಪ್ರಕಾರ ಕೊಪ್ಪಳ ಜಿಲ್ಲೆಗೆ ಎರಡು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಸ್ಥಾಪಿಸಲು ಮಂಜೂರು ನೀಡಿದೆ. ಅದರ ಪ್ರಕಾರ ಒಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಕೊಪ್ಪಳದಲ್ಲಿ ಸ್ಥಾಪಿಸಲು ಅಂತಿಮ ಹಂತದಲ್ಲಿ ಇದ್ದು, ಮತ್ತೊಂದು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನು ಸ್ಥಾಪಿಸುವ ಪ್ರಕ್ರಿಯೆ ವಿಚಾರಣಾ ಹಂತದಲ್ಲಿದೆ. ಆದರಿಂದ ಯಲಬುರ್ಗಾ ಹಾಗೂ ಕುಕನೂರ ಅವಳಿ ತಾಲೂಕು ಪರಿಗಣಿಸಿ ಯಲಬುರ್ಗಾದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸುವುದು ಅವಶ್ಯವಿದೆ. ಇಲ್ಲಿ ಅದಕ್ಕೆ ಬೇಕಾದ ಎಲ್ಲ ಮೂಲಭೂತ ಸೌಕರ್ಯ, ಸುಸಜ್ಜಿತ ನಿಯೋಜಿತ ನೂತನ ಕಟ್ಟಡ ಸಂಕೀರ್ಣವಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಮನವಿ ಸ್ವೀಕರಿಸಿದ ರಾಯರಡ್ಡಿ, ಈ ಕುರಿತು ಕಾನೂನು ಸಚಿವರೊಂದಿಗೆ ಚರ್ಚಿಸುತ್ತೇನೆ. ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ವಕೀಲರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾದ ಎಸ್.ಎಸ್. ಹೊಂಬಳ ಅವರನ್ನು ಸನ್ಮಾನಿಸಲಾಯಿತು. ಅಪರ ಸರ್ಕಾರಿ ವಕೀಲ ಎಂ.ಎಸ್. ಪಾಟೀಲ, ವಕೀಲರಾದ ಯು.ಎಸ್. ಮೆಣಸಗೇರಿ, ಬಿ.ಎಂ. ಶಿರೂರು, ರಾಮಣ್ಣ ಸಾಲಭಾವಿ, ಆನಂದ ಉಳ್ಳಾಗಡ್ಡಿ, ರಾಜಶೇಖರ ನಿಂಗೋಜಿ, ಸಿ.ಎಸ್. ಬನ್ನಪ್ಪಗೌಡ್ರ, ಮಹಾಂತೇಶ ಈಟಿ, ಹುಚ್ಚೀರಪ್ಪ, ಹಸನಸಾಬ್ ನದಾಫ್, ನಾಗರಾಜ ಹವಲ್ದಾರ್, ರಫಿ, ಬಸವರಾಜ ತುರಕಾಣಿ, ಬಸವರಾಜ ಬಂಡಿ, ಎ.ಎಂ. ಪಾಟೀಲ್, ಮಂಜು ಕಮ್ಮಾರ, ಜಗದೀಶ ಹೂಗಾರ, ಅಂಬರೀಶ ಹುಬ್ಬಳ್ಳಿ ಇದ್ದರು.