ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಲ್ಲಿ ಯೋಗ ದಿನಾಚರಣೆ

| Published : Jun 26 2024, 12:35 AM IST

ಸಾರಾಂಶ

ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಯೋಗ ದಿನಾಚರಣೆ ನಡೆಯಿತು. ಆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಲ್ಲಿನ ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಬೆಳಗ್ಗೆ ಕಾಲೇಜಿನ ರಾಷ್ಟ್ರೀಯ ಸೇವಾ ಘಟಕ ಹಾಗೂ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ಯೋಗ ತರಬೇತಿ ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಯೋಗ ಶಿಕ್ಷಕ ಮಂಜುನಾಥ ಬಿಜೂರು, ಯೋಗ ಎಂದರೆ ಕೇವಲ ಆಸನಗಳಲ್ಲ, ಅದಕ್ಕೂ ಹೊರತಾಗಿ ನಾವು ಪಾಲಿಸಬೇಕಾದ ನಿಯಮಗಳನ್ನು ಯೋಗ ಎನ್ನುತ್ತೇವೆ ಎಂದವರು ವಿವರವಾಗಿ ತಿಳಿಸಿಕೊಟ್ಟಿದ್ದಲ್ಲದೆ ದಿನನಿತ್ಯ ಮಾಡಬಹುದಾದ ಕೆಲವು ಸರಳ ಆಸನಗಳನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು.

ಮಧ್ಯಾಹ್ನ ಮಂಗಳೂರಿನ ಈಶಾ ಹಠ ಯೋಗ ಶಿಕ್ಷಕ ಪ್ರವೀಣ ಕುಮಾರ್, ಯೋಗದ ಬಗ್ಗೆ ತಮ್ಮ ಅನುಭವದ ಜೊತೆಗೆ ಹೇಗೆ ಒಬ್ಬ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಅಭಿವೃದ್ಧಿಗೆ ಕಾರಣ ಎಂದು ವಿವರಿಸಿದ್ದಲ್ಲದೆ ಓಂಕಾರದ ಪ್ರಾತ್ಯಕ್ಷಿಕೆ ವಿದ್ಯಾರ್ಥಿಗಳಿಗೆ ನೀಡಿದರು.

ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದರು. ಕಾರ್ಯಕ್ರಮ ಸಂಯೋಜಕರಾದ ಪ್ರೊ. ಬಾಲನಾಗೇಶ್ವರ್ ಸ್ವಾಗತಿಸಿದರು. ಡಾ.ರಾಮಕೃಷ್ಣ ಹೆಗ್ಡೆ ವಂದಿಸಿದರು. ಪ್ರೊ. ಸೂಕ್ಷ್ಮ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.