ಸಾರಾಂಶ
ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಹಣ- ಅಂತಸ್ತು ಇದ್ದವರು ಶ್ರೀಮಂತರಲ್ಲ. ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು. ಎಲ್ಲರೂ ಉತ್ತಮ ಆರೋಗ್ಯ ಬೇಕು ಎನ್ನುತ್ತಾರೆ. ಆದರೆ, ಯಾರೂ ಕೂಡ ಆರೋಗ್ಯದ ಸೂತ್ರಗಳನ್ನು ಪಾಲನೆ ಮಾಡುತ್ತಿಲ್ಲ. ಶಿಸ್ತು ಬದ್ಧ ಜೀವನದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮನುಷ್ಯನ ಜೀವನದಲ್ಲಿ ಆರೋಗ್ಯ ತುಂಬಾ ಮುಖ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯೋಗ ಅತ್ಯಂತ ಅವಶ್ಯಕ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಕಚೇರಿಯಲ್ಲಿ ಪಟ್ಟಣದ ಬುದ್ಧ -ಬಸವ - ಅಂಬೇಡ್ಕರ್ ಯೋಗ ಕೇಂದ್ರ ಹಾಗೂ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿ ಬಳಗದಿಂದ ಆಯೋಜಿಸಿರುವ ಒಂದು ತಿಂಗಳ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಹಣ- ಅಂತಸ್ತು ಇದ್ದವರು ಶ್ರೀಮಂತರಲ್ಲ. ದೈಹಿಕ, ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು. ಎಲ್ಲರೂ ಉತ್ತಮ ಆರೋಗ್ಯ ಬೇಕು ಎನ್ನುತ್ತಾರೆ. ಆದರೆ, ಯಾರೂ ಕೂಡ ಆರೋಗ್ಯದ ಸೂತ್ರಗಳನ್ನು ಪಾಲನೆ ಮಾಡುತ್ತಿಲ್ಲ. ಶಿಸ್ತು ಬದ್ಧ ಜೀವನದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಯೋಗವು ಎಲ್ಲ ಒತ್ತಡಗಳನ್ನು ಹೋಗಲಾಡಿಸಿ ವ್ಯಕ್ತಿಯನ್ನು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ. ಯೋಗದ ಎಂಟು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ನಮ್ಮ ಜೀವನ ಕ್ರಮದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತವೆ. ಹಾಗಾಗಿ ಯೋಗ ಬಹಳ ಮಹತ್ವದ್ದಾಗಿದೆ. ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಅಧ್ಯಾತ್ಮ ಸಮತೋಲನ ಸ್ಥಿತಿ ಉಂಟು ಮಾಡುವ ಯೋಗವನ್ನು ವಿಶ್ವದ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ವಿಶ್ವಮಾನ್ಯತೆ ಪಡೆದುಕೊಂಡಿದೆ ಎಂದರು.ಲೇಖಕ ಬಲ್ಲೆನಹಳ್ಳಿ ಮಂಜುನಾಥ್ ಮಾತನಾಡಿ, ದೇಶ ವಿಶ್ವಕ್ಕೆ ನೀಡಿದ ಕೊಡುಗೆಗಳಲ್ಲಿ ಯೋಗವೂ ಒಂದು. ಯೋಗಾಭ್ಯಾಸ ಮಾಡಿದರೆ ಯಾವುದೇ ಕಾಯಿಲೆಗಳು ಬರಲಿಕ್ಕೆ ಸಾಧ್ಯವಿಲ್ಲ ಎಂದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್ ಮಾತನಾಡಿ, ನಮ್ಮ ಪ್ರಾಚೀನ ಯೋಗ ಪದ್ಧತಿಯ ಮಹತ್ವವನ್ನು ತಿಳಿಸಿದರು. ಯೋಗ ಜಗತ್ತಿನ ಮನುಕುಲದ ಆರೋಗ್ಯಕ್ಕೆ ಭಾರತೀಯರು ಕೊಟ್ಟ ಕೊಡುಗೆ. ಜಗತ್ತು ಭಾರತೀಯರ ಯೋಗದ ಮಹತ್ವವನ್ನು ತಡವಾಗಿಯಾದರೂ ಅರ್ಥಮಾಡಿಕೊಂಡಿದೆ. ಯೋಗವನ್ನು ವಿಶ್ವ ಸಂಸ್ಕೃತಿಯೊಂದಿಗೆ ಮಿಳಿತಗೊಳಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.ಅಂತಾರಾಷ್ಟ್ರೀಯ ಯೋಗಪಟು ಯೋಗ ಗುರು ಎಂ.ಎಸ್ ಅಲ್ಲಮಪ್ರಭು, ಕಾಡುಮೆಣಸ ಚಂದ್ರು, ಲಕ್ಷ್ಮೀಪುರ ಮಹೇಶ್, ಯೋಗ ಕೇಂದ್ರದ ಮುಖ್ಯಸ್ಥ ವೀರಭದ್ರಯ್ಯ, ಅಣ್ಣಯ್ಯ, ಶಿಕ್ಷಕಿ ಕುಮಾರಿ, ಚೆಸ್ಕಾಂ ತಿಮ್ಮಪ್ಪ, ರಘು ಹೊಸಹೊಳಲು, ಮಂಜುನಾಥ್ ಕಾಮನಹಳ್ಳಿ, ಮುಖಂಡರಾದ ಬಸವರಾಜ್, ವಿಜಯಕುಮಾರ್, ಆರ್ಟಿಒ ಅಭಿಮಾನಿ ಬಳಗ ಅಧ್ಯಕ್ಷ ಗಂಜಿಗೆರೆ ಮಹೇಶ್ ಇತರರಿದ್ದರು.