ಪರಿಪೂರ್ಣ ಆರೋಗ್ಯಕ್ಕೆ ಯೋಗ ಸಹಕಾರಿ : ರಾಜ್ಯಪಾಲ

| N/A | Published : Jun 22 2025, 01:19 AM IST / Updated: Jun 22 2025, 08:08 AM IST

ಸಾರಾಂಶ

ಯೋಗಾಭ್ಯಾಸ ನಮ್ಮನ್ನು ಅಹಿಂಸೆ, ಕರುಣೆ, ಶಾಂತಿ ಕಡೆಗೆ ಕೊಂಡೊಯ್ಯುತ್ತದೆ. ಪರಿಪೂರ್ಣ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಥ್‌ ಅಭಿಪ್ರಾಯಪಟ್ಟರು.

 ಬೆಂಗಳೂರು :  ಯೋಗಾಭ್ಯಾಸ ನಮ್ಮನ್ನು ಅಹಿಂಸೆ, ಕರುಣೆ, ಶಾಂತಿ ಕಡೆಗೆ ಕೊಂಡೊಯ್ಯುತ್ತದೆ. ಪರಿಪೂರ್ಣ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಥ್‌ ಅಭಿಪ್ರಾಯಪಟ್ಟರು.

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧ ಮುಂಭಾಗ ಆಯುಷ್‌ ಇಲಾಖೆ ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಧ್ಯೇಯ ವಾಕ್ಯದಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯೋಗ ಮಾಡುವುದರಿಂದ ನಿರೋಗಿಯಾಗಬಹುದು. ಯೋಗಾಭ್ಯಾಸವು ನಮ್ಮನ್ನು ಅಹಿಂಸೆ, ಕರುಣೆ, ಶಾಂತಿಯ ಕಡೆಗೆ ಕೊಂಡೊಯ್ಯುತ್ತದೆ. ಯೋಗ ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಿ ಪರಿಪೂರ್ಣ ಆರೋಗ್ಯ ನೀಡುತ್ತದೆ. ಯೋಗ ಅಳವಡಿಸಿಕೊಳ್ಳುವುದು ಇಂದಿನ ಅತಿ ದೊಡ್ಡ ಅಗತ್ಯ ಎಂದು ಪ್ರತಿಪಾದಿಸಿದರು.

ಮಾನವೀಯತೆಗೆ ಭರವಸೆಯ ಕಿರಣ:

ಯೋಗವು ಎಲ್ಲರನ್ನೂ ಒಗ್ಗೂಡಿಸುವ, ಎಲ್ಲರಿಗೂ ಒಳ್ಳೆಯದನ್ನು ಮಾಡುವ ಮೂಲ ಮನೋಭಾವ ಹೊಂದಿದೆ. ಯೋಗವು ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಒಂದು ಉತ್ತಮ ಮಾರ್ಗ. ಇದು ನಮ್ಮ ಋಷಿಮುನಿಗಳು ಮತ್ತು ಸಂತರು ನೀಡಿದ ವಿಶಿಷ್ಟ ಕೊಡುಗೆಯಾಗಿದ್ದು, ಇಂದು ಪ್ರಪಂಚದಾದ್ಯಂತ ಮಾನವೀಯತೆಗೆ ಭರವಸೆಯ ಕಿರಣ ಎಂದು ವಿವರಿಸಿದರು.

ಹವಾಮಾನ ಬದಲಾವಣೆ, ಮಾನಸಿಕ ಒತ್ತಡ, ಜೀವನಶೈಲಿಯ ರೋಗಗಳು ಮತ್ತು ಪರಿಸರ ಅಸಮತೋಲನದಿಂದ ಜಗತ್ತು ಬಳಲುತ್ತಿದೆ. ಯೋಗವು ಆರೋಗ್ಯ ಬಲಪಡಿಸುವುದಲ್ಲದೆ, ಭೂಮಿಯೊಂದಿಗಿನ ನಮ್ಮ ಸಂಪರ್ಕ ಗಾಢವಾಗಿಸುತ್ತದೆ. ನಾವೆಲ್ಲರೂ ಒಟ್ಟಾಗಿ ಯೋಗವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳೋಣ . ಆರೋಗ್ಯಕರ, ಶಾಂತಿಯುತ ಮತ್ತು ಸಮತೋಲಿತ ಜಗತ್ತನ್ನು ಸೃಷ್ಟಿಸೋಣ ಎಂದು ಕರೆ ನೀಡಿದರು.

ವಿಧಾನ ಪರಿಷತ್‍ ಸಭಾಪತಿ ಬಸವರಾಜ ಹೊರಟ್ಟಿ, ಸದಸ್ಯ ಟಿ.ಎ.ಶರವಣ, ನಟರಾದ ಅನಿರುದ್ಧ್‌, ಶೈನ್‌ ಶೆಟ್ಟಿ, ನಟಿ ಸಾನಿಯಾ ಅಯ್ಯರ್‌ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್‌.....

ಸಾವಿರಾರು ಆಸಕ್ತರು ಭಾಗಿ

ವಿಧಾನಸೌಧದ ಮೆಟ್ಟಿಲುಗಳ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು, ಸಾವಿರಾರು ಆಸಕ್ತರು ಯೋಗಾಸನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಸೇರಿ ಯೋಗಾಸಕ್ತರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಅವಕಾಶವಂಚಿತ ನೂರಾರು ವಿದ್ಯಾರ್ಥಿಗಳು

ವಿಧಾನಸೌಧದ ಮುಂಭಾಗ ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು, ಯೋಗಾಸನಗಳನ್ನು ಪ್ರದರ್ಶಿಸಬೇಕು ಎಂದು ಆಸಕ್ತಿಯಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಸ್ಥಳಾವಕಾಶದ ಕೊರತೆಯಿಂದಾಗಿ ಹಾಗೆಯೇ ಹಿಂದಿರುಗಬೇಕಾಯಿತು. ದಿ ಇನ್ಸ್‌ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ, ನಂದಿನಿ ಲೇಔಟ್‌ನ ಎಸ್‌.ಜಿ.ಇಂಟರ್‌ನ್ಯಾಷನಲ್‌ ಸ್ಕೂಲ್‌ ಸೇರಿ ಹಲವು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಹಿಂದಿರುಗಿದ್ದು ಕಂಡುಬಂತು.ಆಸ್ಪತ್ರೆಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ: ದಿನೇಶ್‌ ಗುಂಡೂರಾವ್‌

ರಾಜ್ಯದಲ್ಲಿ ಹೆಚ್ಚಿನ ಜನರಿಗೆ ಯೋಗ ಪರಿಚಯಿಸಲು ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ‘ಯೋಗ ಮಂದಿರ’ ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ವಿಧಾನಸೌಧ ಆವರಣದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು, ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹಸಿರು ಯೋಗ ಕಾರ್ಯಕ್ರಮದಡಿ 1 ಲಕ್ಷ ಸಸಿಗಳನ್ನು ನೆಡಲಾಗುವುದು. ಯೋಗ ಪರಿಚಯಿಸಲು ಆಸ್ಪತ್ರೆಗಳಲ್ಲಿ ಯೋಗ ಮಂದಿರ ಸ್ಥಾಪಿಸಲಾಗುವುದು. ಮೈಸೂರು ಜಿಲ್ಲೆಯನ್ನು ಯೋಗ ಜಿಲ್ಲೆಯಾಗಿ ನಿರ್ಮಿಸುವತ್ತ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಮನೆಯಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಲಾಗಿದೆ. ದೇಶದಲ್ಲಿಯೇ ಇದು ಹೊಸ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.ಶಾಲೆಯಲ್ಲಿ ಯೋಗ ಕಡ್ಡಾಯಕ್ಕೆ ಸಚಿವರ ಜೊತೆ ಚರ್ಚೆ: ದಿನೇಶ್‌ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಯೋಗ ತರಬೇತಿ ನೀಡುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ ಮಾಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಉತ್ತಮ ಸಲಹೆ ನೀಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದಲೂ ಇದು ಒಳ್ಳೆಯ ಕಾರ್ಯಕ್ರಮ. ಶಾಲೆಗಳಲ್ಲಿ ಈಗಾಗಲೇ ಇರುವ ದೈಹಿಕ ಶಿಕ್ಷಕರಿಗೆ ಯೋಗದ ಬಗ್ಗೆ ತರಬೇತಿ ನೀಡಬೇಕು. ಬಳಿಕ ಈ ಶಿಕ್ಷಕರು ಮಕ್ಕಳಿಗೆ ಕಲಿಸಬೇಕಿದೆ. ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಯೋಗದಿಂದ ಬಹಳಷ್ಟು ಉಪಯೋಗವಿದೆ. ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಯೋಗ ಕಲಿಸಿಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗುವುದು. ರಾಜ್ಯದಲ್ಲಿ ದೈಹಿಕ ಶಿಕ್ಷಕರು ಸೇರಿ 29 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು ಭರ್ತಿ ಮಾಡುವ ಸಂಬಂಧ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.ಲಡಾಕ್‌ನಲ್ಲಿ ವಚನಾನಂದ ಶ್ರೀ ಯೋಗ ದಿನಾಚರಣೆ

ಕೇಂದ್ರ ಆಯುಷ್‌ ಇಲಾಖೆ, ಲಡಾಕ್‌ ಕೇಂದ್ರಾಡಳಿತ ಪ್ರದೇಶ ವತಿಯಿಂದ ಲೇಹ್‌ ಲಡಾಕ್‌ನ ಅಸ್ಟ್ರಾಟರ್ಪ್‌ ಕ್ರೀಡಾಂಗಣದಲ್ಲಿ ಶನಿವಾರ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹರಿಹರ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ಹಾಗೂ ಶ್ವಾಸಯೋಗ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಪ್ರದರ್ಶನ ನಡೆಸಲಾಯಿತು.

ಈ ವೇಳೆ ವಚನಾನಂದ ಸ್ವಾಮೀಜಿ ಅವರು ಪ್ರಸಕ್ತ ಸಾಲಿನ ಯೋಗ ದಿನಾಚರಣೆಯ ಧ್ಯೇಯವಾಗಿರುವ ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ವಿಶ್ವಶಾಂತಿಯ ಸಂದೇಶ ಹರಡಿದರು. ಯೋಗ ಎಂಬುದು ಶ್ವಾಸದ ಶುದ್ಧತೆ, ಶಾಂತಿಯ ಸ್ಪರ್ಶ, ಮಾತುಗಳಿಲ್ಲದ ತುದಿಯಲ್ಲಿ ಒಂದಾಗುವ ಆತ್ಮಸಾನ್ನಿಧ್ಯ ಎಂದು ಹೇಳಿದರು.ಈ ವೇಳೆ ಭಿಕ್ಕು ಸಂಘ ಸೇನಾಜೀ, ಸದ್ಗುರು ಬೃಹ್ಮೆಶಾನಂದ ಸ್ವಾಮೀಜಿ, ಕೇಂದ್ರ ಸಚಿವರಾದ ಅರ್ಜುನ ರಾಮ್ ಮೇಘವಾಲ್, ಮಾಜಿ ಲೆಫ್ಟಿನೆಂಟ್‌ ಗವರ್ನರ್ ಡಾ.ಕಿರಣ್ ಬೇಡಿ ಹಾಗೂ ಲಡಾಕ್ ಸರ್ಕಾರದ ಸಚಿವರು, ಅಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮೊದಲು ಶುಕ್ರವಾರವೂ ಶ್ವಾಸಯೋಗ ಸಂಸ್ಥೆ ಕೇಂದ್ರ ಆಯುಷ್ ಇಲಾಖೆ, ಮಹಾಬೋಧಿ ಅಂತರಾಷ್ಟ್ರೀಯ ಧ್ಯಾನ ಕೇಂದ್ರದ ಸಹಯೋಗದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಲೇಹ್ ಲಡಾಕ್‌ನ ಪ್ಯಾಂಗಾಂಗ್ ಸರೋವರ ತಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ಪ್ರದರ್ಶನ ನಡೆಸಲಾಗಿತ್ತು. ಈ ವೇಳೆಯೂ ಡಾ.ಕಿರಣ್‌ ಬೇಡಿ ಹಾಗೂ ಭಿಕ್ಕು ಸಂಘಸೇನಾ ಅವರು ಸೇರಿದಂತೆ ನೂರಾರು ಮಂದಿ ಯೋಗಪಟುಗಳು ಯೋಗಾಭ್ಯಾಸ ಮಾಡಿದ್ದರು.

Read more Articles on