ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಂಡು ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ಸಾಧಿಸಲು ಯೋಗ ಸಹಕಾರಿಯಾಗಿದೆ ಎಂದು ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ಎನ್.ಎಸ್.ಎಸ್. ಘಟಕ ಮತ್ತು ಕ್ರೀಡಾ ವಿಭಾಗ ಜಂಟಿಯಾಗಿ ಐಕ್ಯೂಎಸಿ ಅಡಿಯಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಾಚೀನ ಕಾಲದ ಆಚಾರ್ಯರು, ಮುನಿಗಳು, ದಾರ್ಶನಿಕರು ಯೋಗದಿಂದಲೇ ಸಕಲ ಜ್ಞಾನಗಳಲ್ಲಿ ಪಾಂಡಿತ್ಯ ಸಂಪಾದಿಸಿ ವಿಶ್ವವಂದಿತ ಯೋಗಿಗಳಾಗಿದ್ದಾರೆ. ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಭೌತಿಕವಾಗಿ ಸದೃಢವಾಗಲು ಹಾಗೂ ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸಲು ಯೋಗ ಮೊದಲ ಸೋಪಾನವಾಗಿದ್ದು, ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇತಿಹಾಸ ಪ್ರಾಧ್ಯಾಪಕ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದಲ್ಲಿ ಯೋಗದ ಪ್ರಾಚೀನತೆ, ಇತಿಹಾಸ, ಬೆಳವಣಿಗೆ, ಪುರಾಣ-ಕೃತಿ-ಕಾವ್ಯಗಳಲ್ಲಿ ಯೋಗದ ಪ್ರಸ್ತಾಪಗಳು, ಯೋಗದ ಪ್ರಸ್ತುತತೆ ಕುರಿತು ವಿವರಿಸಿ, ಭೋಗದಲ್ಲಿ ಮೈಮರೆತು ಅನಾಚಾರದಲ್ಲಿ ತೊಡಗಿರುವ ಮನಸ್ಸು ಮತ್ತು ದೇಹಕ್ಕೆ ಯೋಗ ತುಂಬಾ ಅವಶ್ಯವಾಗಿದೆ ಎಂದು ಹೇಳಿದರು.ಕ್ರೀಡಾ ವಿಭಾಗದ ನಿರ್ದೇಶಕ ಡಾ. ಬಸವರಾಜ ಅಂಬಿಗೇರ ಯೋಗದ ವಿವಿಧ ಪ್ರಕಾರಗಳು, ಯೋಗದಿಂದಾಗುವ ಪರಿಣಾಮಗಳು, ಭಾರತದ ಯೋಗ ಪದ್ಧತಿ ವಿಶ್ವದಾದ್ಯಂತ ಪ್ರಸಾರದ ಕುರಿತು ವಿವರಿಸಿ, ವಿದ್ಯಾರ್ಥಿಗಳಿಗೆ ಹಲವು ಯೋಗಾಸನಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.