ಸಾರಾಂಶ
ಬ್ಯಾಡಗಿ: ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕನ್ನು ಸಾಗಿಸುತ್ತಿರುವ ಪ್ರತಿಯೊಬ್ಬರೂ ಆರೋಗ್ಯಕ್ಕೆ ಒತ್ತು ನೀಡುತ್ತಿಲ್ಲ. ಇದರ ಪರಿಣಾಮ ಪ್ರತಿದಿನ ಆಹಾರದ ಜತೆಗೆ ಔಷಧಿಗಳನ್ನು ಸೇವಿಸಲಾಗುತ್ತಿದೆ. ದಣಿದ ದೇಹ ಮತ್ತು ಮನಸ್ಸುಗಳಲ್ಲಿ ಚೈತನ್ಯ ನೀಡಲು ಯೋಗಾಭ್ಯಾಸ ಉತ್ತಮವಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರೇಕುಡಿ ಅಭಿಪ್ರಾಯಪಟ್ಟರು.
ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೋಗ ಕೇವಲ ದೈಹಿಕ ಶ್ರಮವಲ್ಲ, ಇದರಲ್ಲಿ ಅಧ್ಯಾತ್ಮ ಹಾಗೂ ಮಾನಸಿಕ ಬದಲಾವಣೆಗೆ ಅವಶ್ಯವಿದೆ. ದೈನಂದಿನ ಯೋಗಾಭ್ಯಾಸ ರೂಢಿಸಿಕೊಂಡಲ್ಲಿ ಹಲವು ರೋಗಗಳಿಂದ ದೂರ ಉಳಿಯಲು ಸಾಧ್ಯ. ಅನಾದಿ ಕಾಲದಿಂದಲೂ ಭಾರತದಲ್ಲಿ ಯೋಗಾಭ್ಯಾಸ ರೂಢಿಯಲ್ಲಿದೆ. ಋಷಿಮುನಿಗಳು ಸೇರಿದಂತೆ ಧಾರ್ಮಿಕ ಪರಿಚಾರಕರು ಆರೋಗ್ಯದ ದೃಷ್ಟಿಯಿಂದ ಯೋಗವನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾಗಿ ತಿಳಿಸಿದರು.
ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಬಹುಹಿಂದಿನಿಂದಲೂ ಗುರುಕುಲ ಶಿಕ್ಷಣ ಪದ್ಧತಿ ವ್ಯವಸ್ಥೆಗಳಲ್ಲಿ ಯೋಗ ಮಾಡುವುದು ಕಡ್ಡಾಯವಾಗಿತ್ತು. ಆಯುಷ್ಯ ಮತ್ತು ದೈಹಿಕ ಕ್ರಿಯೆಗೆ ಯೋಗ ಮಹತ್ವವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಅಳವಡಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಕಡ್ಡಾಯವಾಗಿ ಯೋಗವನ್ನು ಕಲಿಸಿದಲ್ಲಿ ಆರಂಭದಿಂದಲೇ ಆರೋಗ್ಯದ ಕುರಿತು ಅರಿವು ಮೂಡಲಿದೆ ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಯೋಗ ಗುರುಗಳಿಗೆ ವಿಶೇಷ ಸ್ಥಾನ ನೀಡಲಾಗಿತ್ತು. ಪೂರ್ವಜರು ಇದಕ್ಕೆ ಒತ್ತು ನೀಡಿದ್ದರು. ನಿತ್ಯದ ಆಹಾರ ವಿಹಾರದಲ್ಲಿ ಯೋಗ ಕೂಡ ಒಂದಾಗಿದೆ. ವಿಜ್ಞಾನಕ್ಕೂ ಸವಾಲಾಗಿರುವ ಬಹುದೊಡ್ಡ ಕಾಯಿಲೆಗಳಿಗೆ ಯೋಗಭ್ಯಾಸದಿಂದ ಪರಿಹಾರ ಸಿಕ್ಕಿದೆ ಎಂದರು.ಯೋಗ ತರಬೇತುದಾರ ಮೌನೇಶ ಕುಡುಪಲಿ, ಕಾಂತೇಶ ನಾಯ್ಕರ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಎಚ್.ಜಿ. ಮುಳಗುಂದ ಶಂಕರ ಬಾರ್ಕಿ, ಬಿ.ಜಿ. ಹಿರೇಮಠ ಮಾಲತೇಶ ಹಾವೇರಿ, ಎಚ್.ಎಸ್. ಗುಂಡಪ್ಪನವರ, ಸಿ.ಪಿ. ದೊಣ್ಣೇರ, ಎಂ.ಕೆ. ಕೋಡಿಹಳ್ಳಿ ಎಸ್.ಎಸ್. ಕೊಣ್ಣೂರ, ಕೆ.ಎಸ್. ನಾಯ್ಕರ್, ಶಿರಸ್ತೇದಾರರಾದ ಜನಾರ್ದನ ಬಾರ್ಕಿ, ಸುಜಾತ ನೆಲವಿಗಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.ಶಾಲಾ ಕೊಠಡಿಗೆ ಭೂಮಿಪೂಜೆ ಇಂದು
ರಾಣಿಬೆನ್ನೂರು: ತಾಲೂಕಿನ ಕಾಕೋಳ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ಕೊಠಡಿಗಳನ್ನು ನಿರ್ಮಿಸಿಕೊಡಲು ಬೆಂಗಳೂರು ಮೂಲದ ಒನ್ ಸ್ಕೂಲ್ ಎಟ್ ಎ ಟೈಮ್ ಎಜ್ಯುಕೇಶನ್ ಚಾರಿಟಬಲ್ ಟ್ರಸ್ಟ್ ಸಂಸ್ಥೆಯು ಮುಂದಾಗಿದ್ದು, ಈ ಕೊಠಡಿಗಳ ಭೂಮಿಪೂಜೆ ಜೂ. 23ರಂದು ನಡೆಯಲಿದೆ.ಈ ಕಾಮಗಾರಿಗೆ ಅಗತ್ಯ ಅನುದಾನವನ್ನು ಸಂಸ್ಥೆಯು ರಕುಟೆನ್ ಇಂಡಿಯಾ ಎಂಟರ್ಪ್ರೈಸ್ ಲಿಮಿಟೆಡ್ ಬೆಂಗಳೂರು ಇವರಿಂದ ಸಂಗ್ರಹಿಸಿದೆ. ಇದು ಸಂಸ್ಥೆಯ 121ನೇ ಶಾಲಾ ಯೋಜನೆಯಾಗಿದ್ದು, ಅಂದಾಜು ₹60 ಲಕ್ಷ ವೆಚ್ಚದಲ್ಲಿ ನಾಲ್ಕು ತರಗತಿ ಕೊಠಡಿಗಳನ್ನು ನಿರ್ಮಿಸಿಕೊಡಲಿದೆ. ಪ್ರಸ್ತುತ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಾಕೋಳದಲ್ಲಿ 560 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.