ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಪ್ರತಿ ನಿತ್ಯ ಯೋಗ ಮಾಡಬೇಕು. ಜೀವನ ಪರ್ಯಂತ ಯೋಗಾಭ್ಯಾಸ ಮಾಡುವಂತಾಗಬೇಕು. ಯೋಗದಿಂದ ಶಿಸ್ತಿನ ಜೀವನ ಬದುಕಿನ ಸವಾಲುಗಳನ್ನು ಎದುರಿಸಬಹುದು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.
ಗೋಣಿಕೊಪ್ಪ: ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಪ್ರತಿ ನಿತ್ಯ ಯೋಗ ಮಾಡಬೇಕು. ಜೀವನ ಪರ್ಯಂತ ಯೋಗಾಭ್ಯಾಸ ಮಾಡುವಂತಾಗಬೇಕು. ಯೋಗದಿಂದ ಶಿಸ್ತಿನ ಜೀವನ ಬದುಕಿನ ಸವಾಲುಗಳನ್ನು ಎದುರಿಸಬಹುದು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.
ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಹಿರಿಯರು ರೂಪಿಸಿಕೊಟ್ಟ ಉತ್ತಮ ಅಭ್ಯಾಸಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಯೋಗಭ್ಯಾಸದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಪರಾಹಿತನಂದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಪ್ರತಿನಿತ್ಯ ಜೀವನದಲ್ಲಿ ಯೋಗ ಅಭ್ಯಾಸ ಮಾಡಿರಿ, ಯೋಗದೊಂದಿಗೆ ಧ್ಯಾನದ ಅಭ್ಯಾಸ ಮುಂದುವರಿದರೆ ಅನುಕೂಲವಾಗಲಿದೆ ಎಂದರು. ಯೋಗ ಥೆರಫಿಸ್ಟ್, ಕೌನ್ಸಿಲರ್ ಅಮೃತ್ ರಾಕೇಶ್ ಅವರು, ಪ್ರತಿ ವರ್ಷಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮ ಆಯೋಜಕ ಅಂತಾರಾಷ್ಟ್ರೀಯ ಯೋಗ ಥೆರಫಿಸ್ಟ್, ಕೌನ್ಸಿಲರ್ ಅಮೃತ್ ರಾಕೇಶ್ ಮಾತನಾಡಿ, ಕಳೆದ 6 ವರ್ಷಗಳಿಂದ ನಿರಂತರವಾಗಿ ಯೋಗ ದಿನ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಜೈ ಜವಾನ್ ಡಿಫೆನ್ಸ್ ಆಕಾಡೆಮಿ, ಸಂಪೂರ್ಣ ಸ್ವಾಸ್ಥ್ಯ ಕೇಂದ್ರ, ರಾಮಕೃಷ್ಣ ಆಶ್ರಮ ಹಾಗೂ ಯೋಗ ಸಂಸ್ಥೆಗಳು ನಿರಂತರವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ ಎಂದರು.ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾಗಿದ್ದ ಕಾಳಿಮಾಡ ಮೋಟಯ್ಯ ಮಾತನಾಡಿ, ಪ್ರತಿ ವರ್ಷವೂ ಯೋಗ ದಿನಾಚರಣೆಗೆ ಆಶ್ರಮದಲ್ಲಿ ಸಕಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದರ ಪ್ರಯೋಜನ ಪ್ರತಿ ನಾಗರಿಕರಿಗೂ ತಲುಪುವಂತಾಗಬೇಕು ಎಂದರು.
ಆರೋಗ್ಯ ಅರಿವಿನ ಬಗ್ಗೆ ಡಾ. ಶ್ಯಾಮ್ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೈಗೊಳ್ಳಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು. ಕೆ.ಪಿ. ಅಚ್ಚಯ್ಯ, ಸಂಪೂರ್ಣ ಸ್ವಾಸ್ಥ್ಯ ಕೇಂದ್ರದ ನಿರ್ದೇಶಕರಾದ ಕೆ.ಕೆ. ಸೋಮಯ್ಯ, ಯೋಗ ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್, ಚಂಗುಲಂಡ ಸತೀಶ್, ಪ್ರಮುಖಗಣ್ಯರಾದ ನಾಮೇರ ಶರ್ಲಿ ಬೋಪಣ್ಣ, ರೂಪ ಸತೀಶ್ ಮತ್ತಿತರರಿದ್ದರು.ಅಂತಾರಾಷ್ಟ್ರೀಯ ಯೋಗಪಟು ಸ್ಟೀವನ್ ಡಿಸೋಜ ಹಾಗೂ ಶಾಂತಿ ವನದ ಡಾ. ಲೇಖಾ, ಡಾ. ಮೋಕ್ಷ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿದರು. ಪೊನ್ನಂಪೇಟೆ ತಾಲೂಕಿನ 33 ಸರ್ಕಾರಿ ಹಾಗೂ ಖಾಸಗಿ ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಯೋಗ ಪಟುಗಳು, ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಹಿತ್ ಸೋಮಯ್ಯ, ರಿದಮ್ ರಾಕೇಶ್ಪ್ರಾರ್ಥಿಸಿ, ಚಂಗುಲಂಡ ಅಶ್ವಿನಿ ಸತೀಶ್ ಸ್ವಾಗತಿಸಿ, ಶಿಕ್ಷಕಿ ಆಲೀಮ ನಿರೂಪಿಸಿ, ಕೆ.ಕೆ. ಸೋಮಯ್ಯ ವಂದಿಸಿದರು.
ಸ್ಥಳೀಯ ವೃದ್ದಾಶ್ರಮದ ಹಲವು ಮಹಿಳೆಯರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಮೂಲಕ ಯೋಗಭ್ಯಾಸ ನಡೆಸಿ ಗಮನ ಸೆಳೆದರು. ಕಾನೂರು, ಕೋತೂರು ಮಹಿಳಾ ಸಮಾಜ, ರಾಮಕೃಷ್ಣ ಆಶ್ರಮ, ಸಂಪೂರ್ಣ ಸ್ವಾಸ್ಥ್ಯ ಕೇಂದ್ರದ ಅಮೃತ್ ರಾಕೇಶ್ ಅವರಿಂದ ಸಾಮೂಹಿಕ ಯೋಗಭ್ಯಾಸ, ಸಾಮೂಹಿಕ ನೃತ್ಯ ಯೋಗ ಜರುಗಿದವು. ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಪಟುಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.