ಕನ್ನಡಪ್ರಭ ವಾರ್ತೆ ಅಥಣಿ

ಯೋಗ ಕೇವಲ ವ್ಯಾಯಾಮವಾಗದೇ, ಆರೋಗ್ಯದ ಸಂಜೀವಿನಿಯಾಗಿದೆ. ಆದ್ದರಿಂದ, ಪ್ರತಿಯೊಬ್ಬರೂ ಆರೋಗ್ಯಕರ ಜೀವನಕ್ಕಾಗಿ ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಮಹಾಜನ ಹೇಳಿದರು. ಪಟ್ಟಣದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಜೀವನದಿಂದಲೇ ಯೋಗವನ್ನು ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ, ಆರೋಗ್ಯ ಮತ್ತು ಒಳ್ಳೆಯ ಸಂಸ್ಕಾರ ನೀಡುವುದು ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಮಕ್ಕಳೊಂದಿಗೆ ಯೋಗಾಭ್ಯಾಸದಲ್ಲಿ ತೊಡಗಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಯೋಗಾಸನ ರೂಢಿಸಿಕೊಳ್ಳಬೇಕು, ಯೋಗದಿಂದ ಮನಸ್ಸು ಕೇಂದ್ರೀಕೃತವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕನಸಿನ ಗುರಿ ಮುಟ್ಟಲು ಯೋಗವೂ ಕೂಡ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಯೋಗ ಶಿಕ್ಷಕಿ ಶೋಭಾ ಪವಾರ ಮತ್ತು ಸಂತೋಷ ಮಗದುಮ್ಮ ಯೋಗಭ್ಯಾಸದ ಪ್ರಾತ್ಯಕ್ಷತೆ ಪ್ರದರ್ಶನ ನೀಡಿದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಶಾಲೆಯ ಮಕ್ಕಳೊಂದಿಗೆ ಶಿಸ್ತು ಬದ್ಧವಾಗಿ ಯೋಗ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರಾದ ಅಶೋಕ ಬುರ್ಲಿ, ವಿಜಯಕುಮಾರ ಬುರ್ಲಿ, ಸುನೀಲ ಶಿವಣಗಿ, ಶ್ರೀಶೈಲ ಸಂಕ , ಓಂಕಾರೆಪ್ಪ ಸಾವಡಕರ, ಮುಖ್ಯೋಪಾಧ್ಯಾಯ ಪಿ.ಡಿ.ಚನಗೌಡರ, ಆಡಳಿತಾಧಿಕಾರಿ ಭಾರತಿ ಪೂಜಾರಿ ಸೇರಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.