ಸಾರಾಂಶ
ದೇಹ ಮತ್ತು ಮನಸ್ಸುಗಳೆರೆಡೂ ಸದಾ ಉಲ್ಲಾಸದಾಯಕವಾಗಿಲು ಯೋಗ ಅಗತ್ಯ. ದೀರ್ಘ ಆಯಸ್ಸು ಹೊಂದಿದ್ದ ಪ್ರಾಚೀನರ ಆರೋಗ್ಯದ ಗುಟ್ಟು ಅವರು ಅಳವಡಿಸಿಕೊಂಡಿದ್ದ ಯೋಗಾಭ್ಯಾಸದಲ್ಲಿಯೇ ಅಡಗಿತ್ತು. ಯೋಗ ಭಾರತೀಯರು ಜಗತ್ತಿಗೆ ಕೊಟ್ಟಿರುವ ಮಹತ್ವದ ಕೊಡುಗೆ. ಇಂದು ಯೋಗ ಜಗತ್ತಿನ ಎಲ್ಲಾ ದೇಶಗಳ ಗಮನ ಸೆಳೆದಿದೆ. ಸಾಂಪ್ರದಾಯಿಕವಾಗಿದ್ದ ಇಸ್ಲಾಂ ರಾಷ್ಟ್ರಗಳೂ ಕೂಡ ಇಂದು ಯೋಗದತ್ತ ತೆರೆದುಕೊಳ್ಳುತ್ತಿವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾನವನ ಸರ್ವ ರೋಗಗಳಿಗೂ ಯೋಗದಿಂದ ಮದ್ದು ಸಿಗಲಿದೆ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್ ಅಭಿಪ್ರಾಯಪಟ್ಟರು.ಪಟ್ಟಣದ ವಾಸ್ತು ತಜ್ಞ ಪರಮೇಶ್ ಹ್ಯಾಡ್ಲಿ ಮನೆಯಲ್ಲಿ ಅಂತಾರಾಷ್ಟ್ರೀಯ ಯೋಗಪಟು ಎಸ್.ಎಂ.ಅಲ್ಲಮ ಪ್ರಭು ಆರಂಭಿಸಿರುವ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ನಮ್ಮ ದೇಹದ ಸರ್ವ ಅಂಗಗಳು ಆರೋಗ್ಯಕರವಾಗಿರುತ್ತವೆ ಎಂದರು.
ದೇಹ ಮತ್ತು ಮನಸ್ಸುಗಳೆರೆಡೂ ಸದಾ ಉಲ್ಲಾಸದಾಯಕವಾಗಿಲು ಯೋಗ ಅಗತ್ಯ. ದೀರ್ಘ ಆಯಸ್ಸು ಹೊಂದಿದ್ದ ಪ್ರಾಚೀನರ ಆರೋಗ್ಯದ ಗುಟ್ಟು ಅವರು ಅಳವಡಿಸಿಕೊಂಡಿದ್ದ ಯೋಗಾಭ್ಯಾಸದಲ್ಲಿಯೇ ಅಡಗಿತ್ತು ಎಂದರು.ಯೋಗ ಭಾರತೀಯರು ಜಗತ್ತಿಗೆ ಕೊಟ್ಟಿರುವ ಮಹತ್ವದ ಕೊಡುಗೆ. ಇಂದು ಯೋಗ ಜಗತ್ತಿನ ಎಲ್ಲಾ ದೇಶಗಳ ಗಮನ ಸೆಳೆದಿದೆ. ಸಾಂಪ್ರದಾಯಿಕವಾಗಿದ್ದ ಇಸ್ಲಾಂ ರಾಷ್ಟ್ರಗಳೂ ಕೂಡ ಇಂದು ಯೋಗದತ್ತ ತೆರೆದುಕೊಳ್ಳುತ್ತಿವೆ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಹತ್ತು ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಭಾರತದ ಕೀರ್ತಿ ಎತ್ತಿ ಹಿಡಿದಿರುವ ಯೋಗ ಪಟು ಅಲ್ಲಮ ಪ್ರಭು ತಮ್ಮ ಹುಟ್ಟೂರಿನಲ್ಲಿ ಯೋಗ ಶಿಕ್ಷಣ ಆರಂಭಿಸಿರುವುದು ಶ್ಲಾಘನೀಯ. ಕಿರಿಯ ವಯಸ್ಸಿನಲ್ಲಿಯೇ ಮಹತ್ವದ ಸಾಧನೆ ಮಾಡಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕು ಕಸಾಪ ಕಾರ್ಯದರ್ಶಿ ಕಟ್ಟೆ ಮಹೇಶ್ ಮಾತನಾಡಿ, ಯೋಗಗುರು ಅಲ್ಲಮಪ್ರಭು ನಮ್ಮ ತಾಲೂಕಿನ ಯುವ ಪೀಳಿಗೆಗೆ ಒಂದು ಆದರ್ಶ. ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಯೋಗದ ಕಡೆ ಮುಖ ಮಾಡಿ ಏಕಾಗ್ರತೆ, ದೇಶಭಕ್ತಿ, ಶಾಂತಿ, ಸಮಾಧಾನ ಮನಸ್ಥಿತಿಯಿಂದ ಧ್ಯಾನ ಪ್ರಾಣಾಯಾಮ ಮಾಡಿ ಶಾಂತಿದೂತರಾಗಲು ಕರೆ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ವಿತರಕರ ಸಂಘದ ಅಧ್ಯಕ್ಷ ಕೆ.ಎಸ್.ರಾಜೇಶ್, ವಾಸ್ತು ತಜ್ಞ ಪರಮೇಶ್ ಹ್ಯಾಡ್ಲಿ, ಹೋಟೆಲ್ ಉದ್ಯಮಿ ಯತೀಶ್, ಶಿಕ್ಷಕ ಶಿವಪ್ರಸಾದ್, ನಾಗೇಂದ್ರ ಮುಂತಾದವರು ಇದ್ದರು.