ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ದೇಹ ಮನಸ್ಸು ಹಾಗೂ ಉಸಿರು ಸಮೀಕರಣಗೊಂಡಾಗ ಯೋಗವು ಪರಿಪೂರ್ಣವಾಗುತ್ತದೆ ಎಂದು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಎ.ಬಿ. ಲಲಿತಾ ಅಭಿಪ್ರಾಯ ವ್ಯಕ್ತಪಡಿಸಿದರು.ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಚರಿಸಿದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಯೋಗವೆಂದು ನಾವು ದೇಹವನ್ನು ಮಾತ್ರ ದಂಡಿಸಿದರೆ, ವಿವಿಧ ರೀತಿಯ ಆಸನಗಳನ್ನು ಮಾಡಿದರೆ ಅದರಿಂದ ನಮ್ಮ ದೇಹಕ್ಕೆ ಸೂಕ್ತ ರೀತಿಯ ಫಲ ಲಭಿಸುವುದಿಲ್ಲ. ಯೋಗದೊಂದಿಗೆ ಪ್ರಾಣಾಯಮ ಸಮೀಕರಣಗೊಂಡು ಆಸನಗಳನ್ನು ಮಾಡಿದಂತಹ ಸಂದರ್ಭದಲ್ಲಿ ಮಾತ್ರ ಅದು ಫಲಕಾರಿಯಾಗುತ್ತದೆ. ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಯೋಗಾಸನವನ್ನು ಹಾಗೂ ಪ್ರಾಣಾಯಾಮವನ್ನು ಮಾಡುವುದರಿಂದ ನಮ್ಮ ದೇಹಕ್ಕೆ ಹಲವು ರೀತಿಯ ಉಪಯೋಗವಾಗುತ್ತದೆ. ನಮ್ಮ ದೇಹದ ನರ ನಾಡಿಗಳಲ್ಲೂ ಆಮ್ಲಜನಕದ ಪೂರೈಕೆ ಯಾಗುವುದರಿಂದ ದೈಹಿಕ ಮಾನಸಿಕ ನೆಮ್ಮದಿ ಲಭಿಸುತ್ತದೆ. ದೇಹ ಹಾಗೂ ಮನಸ್ಸು ಸಮೀಕರಣಗೊಳ್ಳುವುದರಿಂದ ದೇಹವು ಪುನಶ್ಚೇತನಗೊಂಡು ಪೂರ್ತಿ ದಿನ ನಾವು ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ ಯೋಗವನ್ನು ಕೇವಲ ಒಂದು ದಿನ ಮಾಡುವುದರಿಂದ ನಮ್ಮಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆ ಕಾಣಲು ಸಾಧ್ಯವಿಲ್ಲ. ಪ್ರತಿದಿನ ಸೂಕ್ತ ಸಮಯದಲ್ಲಿ ಸರಿಯಾದ ಕ್ರಮವನ್ನು ಅನುಸರಿಸಿ ಯೋಗವನ್ನು ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಆರೋಗ್ಯ, ಸದೃಢ ದೇಹವನ್ನು ಹೊಂದಲು ಸಾಧ್ಯ ಎಂದರು .ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನೆಡಿಕ್ಟ್ ಆರ್ ಸಲ್ದಾನ ಮಾತನಾಡಿ ನಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿಕೊಂಡು ಚಂಚಲಯಿತೆಯನ್ನು ದೂರ ಮಾಡಲು ಯೋಗ ಧ್ಯಾನ ಹಾಗೂ ಪ್ರಾಣಾಯಾಮ ಬಹಳ ಪ್ರಮುಖವಾಗಿದೆ. ಯೋಗವನ್ನು ಮಾಡುವುದರಿಂದ ನಮ್ಮ ದೇಹವನ್ನು ಸದೃಢವಾಗಿರುವುದರೊಂದಿಗೆ ದೇಹ ಹಾಗೂ ಮನಸ್ಸಿನ ಮೇಲೆ ನೇರವಾಗಿ ನಿಯಂತ್ರಣವನ್ನು ಹೊಂದಬಹುದು. ಯೋಗವನ್ನು ಕೇವಲ ಒಂದು ದಿನ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಪ್ರತಿದಿನ ನಮ್ಮ ದಿನವನ್ನು ಯೋಗದ ಮೂಲಕ ಆರಂಭಿಸುವುದರಿಂದ ದೇಹ ಹಾಗೂ ಮನಸ್ಸು ಸ್ವಾಸ್ಥ್ಯದಿಂದ ಇರುತ್ತದೆ ಎಂದರು.
ವೇದಿಕೆ ಕಾರ್ಯಕ್ರಮದ ನಂತರ ಯೋಗ ತರಬೇತುದಾರರಾದ ಲಲಿತ, ಶೀಲಾ, ಶಾಂತ , ಸೌಮ್ಯ ರವರು ಪ್ರಾತ್ಯಕ್ಷಿತೆಯೊಂದಿಗೆ ವಿದ್ಯಾರ್ಥಿಗಳಿಂದ ಧ್ಯಾನ, ಪ್ರಾಣಾಯಮ, ಯೋಗಾಸನ ವನ್ನು ಮಾಡಿಸಿ ಪ್ರತಿ ಆಸನದ ಪ್ರಾಮುಖ್ಯತೆ ಹಾಗೂ ಅದರಿಂದಾಗುವ ಪ್ರಯೋಜನವನ್ನು ತಿಳಿಸಿಕೊಟ್ಟರು.ಈ ಸಂದರ್ಭ ಕಾಲೇಜಿನ ಉಪನ್ಯಾಸಕರಾದ ದಮಯಂತಿ , ಅನುಪಮ, ದೇಚಮ್ಮ, ಬೋಪಣ್ಣ , ತಮ್ಮಯ್ಯ , ಎನ್.ಸಿ.ಸಿ ಅಧಿಕಾರಿ ಬೋಜಮ್ಮ, ಎನ್.ಎಸ್. ಎಸ್ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.