ಸಾರಾಂಶ
ಭಾರತದಲ್ಲಿ ಮಾತ್ರ ಪ್ರಾಚೀನವಾದ ಯೋಗಶಾಸ್ತ್ರ ಇನ್ನಷ್ಟು ಹೊಳಪನ್ನು ಪಡೆದುಕೊಂಡು ಪ್ರವರ್ಧಮಾನಕ್ಕೆ ಬರುತ್ತಿದೆ
ಶಿಗ್ಗಾಂವಿ: ಯೋಗವು ಆರೋಗ್ಯ ಪೂರ್ಣ ಬದುಕನ್ನು ಕಲ್ಪಿಸಿಕೊಳ್ಳುವ ದಾರಿಯಾಗಿದೆ. ಯೋಗದ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಶ್ರೀಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಯೋಗ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಪ್ರಾಚೀನ ನಾಗರಿಕತೆಗಳು ಭೌತಿಕ ಹಾಗೂ ಸಾಂಸ್ಕೃತಿಕ ದಾಳಿಗಳಿಂದ ನಶಿಸಿ ಹೋಗಿವೆ. ಆದರೆ ಭಾರತದಲ್ಲಿ ಮಾತ್ರ ಪ್ರಾಚೀನವಾದ ಯೋಗಶಾಸ್ತ್ರ ಇನ್ನಷ್ಟು ಹೊಳಪನ್ನು ಪಡೆದುಕೊಂಡು ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿ ಮಾತನಾಡಿದ ಯೋಗಗುರು ಶೋಭಾ ಅಳಗವಾಡಿ, ಯೋಗ ಮನಸ್ಸು ಮತ್ತು ಭೂಮಿ ಸಂಪರ್ಕಿಸುತ್ತದೆ. ಒಂದು ಭೂಮಿಗಾಗಿ ಒಂದು ಯೋಗ ಆರೋಗ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ಯೋಗ ಕಾರ್ಯಕ್ರಮಗಳು ಜರುಗುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಪ್ರಾಚಾರ್ಯ ಡಾ. ನಾಗರಾಜ ಜಿ. ದ್ಯಾಮನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಎಂ. ಅರಗೋಳ, ಎಂ. ಗಾಣಿಗೇರ ಹಾಗೂ ಎಂ.ಬಿ. ನೀರಲಗಿ, ಗೂಳಪ್ಪ ಅರಳಿಕಟ್ಟಿ ಮತ್ತಿತರರು ಇದ್ದರು.ಪ್ರಾರಂಭದಲ್ಲಿ ಪ್ರಕಾಶ ಎಂ.ಎನ್.ಸ್ವಾಗತಿಸಿದರು. ಎಂ.ಜಿ. ಲಕ್ಷ್ಮೇಶ್ವರ ವಂದಿಸಿದರು. ಕೆ.ಜಿ. ಮಲ್ಲೂರ ಕಾರ್ಯಕ್ರಮ ನಿರೂಪಿಸಿದರು.