ಕನ್ನಡಪ್ರಭ ವಾರ್ತೆ ಹಾಸನ

ಯೋಗದ ನಿಜವಾದ ಲಾಭವನ್ನು ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕಿದೆ. ಆಗ ಮಾತ್ರ ಸಾಮುದಾಯಿಕ ಪ್ರಗತಿ ಸಾಧ್ಯ ಎಂದು ಸಾಹಿತಿ ಹಾಗೂ ಯೋಗ ಶಿಕ್ಷಕಿ ಗಿರಿಜಾ ನಿರ್ವಾಣಿ ಅಭಿಪ್ರಾಯಪಟ್ಟರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು, ತಾಲ್ಲೂಕು ಘಟಕ ಹಾಸನ ಹಾಗೂ ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ವತಿಯಿಂದ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದಲ್ಲಿ ಯೋಗ ಮತ್ತು ಆರೋಗ್ಯ ತರಗತಿ ನೀಡಿ ಮಾತನಾಡಿ, ಈಗಿನ ಆಧುನಿಕ ಯುಗದಲ್ಲಿ ಯೋಗಾಸನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ಅತ್ಯಗತ್ಯ. ಬೇಸಿಗೆ ಶಿಬಿರಗಳಂತಹ ಅಗತ್ಯ ಚಟವಟಿಕೆಗಳಲ್ಲಿ ಯೋಗವನ್ನು ಪರಿಚಯಿಸುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯ ಶ್ಲಾಘನೀಯ. ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆಗ ಯೋಗಾಸನ ಅತಿಮುಖ್ಯ. ಆರೋಗ್ಯದ ದೃಷ್ಠಿಯಿಂದ ತಾಂತ್ರಿಕ ಯೋಗಾಸನಗಳು ಸಹ ರೂಢಿಯಲ್ಲಿ ಬಂದಿವೆ. ಪತಾಂಜಲಿ ಯೋಗಸೂತ್ರದ ಮೂಲಕ ಅಷ್ಟಾಂಗ ಯೋಗದ ಪರಿಕಲ್ಪನೆಯನ್ನು ಮಾಡಿಕೊಡಲಾಗಿದೆ. ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಈ ಎಲ್ಲಾ ಆಸನಗಳ ಜೊತೆಗೆ ಆರೋಗ್ಯದ ದೃಷ್ಠಿಯಿಂದ ಇತ್ತೀಚಿನ ಯೋಗಗುರುಗಳು ಹಲವಾರು ರೀತಿಯ ಯೋಗಾಸನಗಳನ್ನು ಅಳವಡಿಸಿಕೊಂಡು ಜನಸಾಮಾನ್ಯರಿಗೆ ಸಿಗುವಂತೆ ಆರೋಗ್ಯವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಶ್ವಿನಿ ಭೈರಾಪುರ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಲವಾರು ವರ್ಷಗಳಿಂದಲೂ ಮಕ್ಕಳ ಅಭ್ಯುದಯಕ್ಕಾಗಿ ಗುಣಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಪ್ರತಿವರ್ಷ ನಮ್ಮ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಸ್ಥಳಾವಕಾಶ ಕಲ್ಪಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಇಂತಹ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು ಕಲಿಸಿದ್ದಕ್ಕಿಂತ ಕಲಿತಿದ್ದೇ ಜಾಸ್ತಿ ಎಂದರು.ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್. ಎಂ. ಪ್ರಿಯಾಂಕ, ಪ್ರತಿಮಾ ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷೆ ಎಚ್. ಎಸ್. ಪ್ರತಿಮಾ, ಯೋಗಶಿಕ್ಷಕಿ ಗಿರಿಜಾ ನಿರ್ವಾಣಿ, ಗೈಡ್ ಕ್ಯಾಪ್ಟನ್ ಅಶ್ವಿನಿ ಭೈರಾಪುರ, ಗೈಡ್ ಕ್ಯಾಪ್ಟನ್ ಶ್ರೀ, ಲೇಡಿ ಸ್ಕೌಟ್ ಮಾಸ್ಟರ್‌ ರೇಣುಕಾ ಭೈರಾಪುರ, ಜಿಲ್ಲಾ ಖಜಾಂಚಿ ಆರ್‌. ಎಸ್. ರಮೇಶ್ ಸೇರಿದಂತೆ ೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಜರಿದ್ದರು.