ಮಂಗಳೂರು: ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಕೊಡಿಯಲ್‌ಬೈಲ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆಯನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.ಅಂತಾರಾಷ್ಟ್ರೀಯ ಯೋಗ ತೀರ್ಪುಗಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ದೀಪ ಬೆಳಗಿಸಿ ಮಾತನಾಡಿ, ಯೋಗ ನಮ್ಮ ಶರೀರ-ಮನಸ್ಸುಗಳಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಜನೆಯ ಜೊತೆಗೆ ಪ್ರತಿನಿತ್ಯ ಯೋಗವನ್ನೂ ಅಭ್ಯಾಸ ಮಾಡಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಯುವ ಸಿತಾರ್ ಕಲಾವಿದೆ ಅನಿಕಾ ಸೂರಿ ಅವರು ಸಿತಾರ್ ನುಡಿಸುವ ಮೂಲಕ ಯೋಗದೊಂದಿಗೆ ವಿಶ್ವ ಸಂಗೀತ ದಿನಾಚರಣೆ ಅರ್ಥಪೂರ್ಣವಾಗಿಸಿದರು. ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮದೊಂದಿಗೆ ಸಿತಾರ್ ವಾದನ ನುಡಿಸುವ ಮೂಲಕ ಹಲವು ರಾಗಗಳನ್ನು ಪ್ರಸ್ತುತಪಡಿಸಿದರು. ಯೋಗ ಮತ್ತು ಸಂಗೀತ ಸಮ್ಮಿಲನದೊಂದಿಗೆ ವಿದ್ಯಾರ್ಥಿಗಳ ಯೋಗ ಪ್ರಾತ್ಯಕ್ಷಿಕೆ ಸುಂದರ ಕ್ಷಣವನ್ನು ನಿರ್ಮಿಸಿತು.ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಸಂಗೀತದೊಂದಿಗೆ ಯೋಗ ಪ್ರದರ್ಶಿಸಿದರು. ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕಿ ಮತ್ತು ಸಂಸ್ಕೃತ ಉಪನ್ಯಾಸಕಿ ಅಪೇಕ್ಷಾ, ಕನ್ನಡ ವಿಭಾಗದ ಉಪನ್ಯಾಸಕ ಕರುಣಾಕರ ಬಳ್ಕೂರು ಸೇರಿದಂತೆ ಇತರ ಬೋಧಕ ಮತ್ತು ಬೋಧಕೇತರ ವೃಂದದವರು ಇದ್ದರು.