ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅನ್ನದ ರಾಮಯ್ಯ ಅಲ್ಲ, ನೀನು ಚೀಲದ ರಾಮಯ್ಯ. ಅನ್ನ ಕೊಡೋದು ಮೋದಿ, ಅನ್ನದರಾಮಯ್ಯ ಅನ್ನಲು ನಿನಗೆ ಅಧಿಕಾರ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀನು ಇವತ್ತು ಮಜಾವಾದಿ ರಾಮಯ್ಯ ಆಗಿದ್ದಿಯಾ? ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಕೊಟ್ಟಿಲ್ಲ, ಆರ್ಥಿಕ ಶಿಸ್ತು ಎಲ್ಲಿದೆ? ಸಿದ್ದರಾಮಯ್ಯ ಈ ಬಾರಿ ಎಷ್ಟು ಸಾಲ ತೆಗೆದುಕೊಂಡಿದ್ದೀಯಾ ಎಂದು ಪ್ರಶ್ನಿಸಿದರು.ಕಾಂಗ್ರೆಸ್ನವರು ಹಿಂದುಳಿದವರ ಚಾಂಪಿಯನ್ ಎಂದು ಸಭೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ನಾನು ನಿಮ್ಮ ಚಾಂಪಿಯನ್ ಎಂದು ಸಭೆ ಮಾಡುತ್ತಿದ್ದಾರೆ. ನಿಮಗೆ ನಾಚಿಕೆ ಆಗಲ್ವಾ? ನೀವು ಸಭೆಯನ್ನೇ ಮಾಡಬಾರದು. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಬೊಮ್ಮಾಯಿ ₹100 ಕೋಟಿ ಕೊಟ್ಟರೆ, ಸಿದ್ದರಾಮಯ್ಯ ₹40 ಕೋಟಿ ಮಾತ್ರ ಕೊಟ್ಟಿದ್ದಾರೆ, ಸಿದ್ದರಾಮಯ್ಯ ಅವರು ಚಾಂಪಿಯನ್ನಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಪ.ಜಾತಿಯವರನ್ನು ಸಿಎಂ ಮಾಡ್ತೀನಿ ಎಂದು ಹೇಳಿದ್ದಾರಾ? ಧಮ್ಮು, ತಾಕತ್ತಿದ್ದರೆ ಹೇಳಲಿ. ಡಿ.ಕೆ.ಶಿವಕುಮಾರ್ಗೆ ಕುರ್ಚಿ ಬಿಟ್ಟುಕೊಡುತ್ತಿಲ್ಲ. ಜಿ.ಪರಮೇಶ್ವರ್ ಶಬರಿ ತರಹ ಕಾಯ್ತಾ ಇದ್ದಾರೆ, ಬಾಗಲಕೋಟೆಯಲ್ಲಿ ಯಾರದ್ದಾದರೂ ಭಾಗ್ಯದ ಬಾಗಿಲು ತೆರೆಯಲಿ. ಕಾಂಗ್ರೆಸ್ನವರು ಮನೆಹಾಳರು, ನೀರಾವರಿಗೆ ಎಷ್ಟು ಖರ್ಚು ಮಾಡಿದ್ದೀವಿ ಎಂದು ಲೆಕ್ಕಕೊಡಲಿ. ಕೋವಿಡ್ನಲ್ಲಿ ಆದಾಯ ಇರಲಿಲ್ಲ. ಆದರೂ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಈಗ ದುಡ್ಡು ಎಲ್ಲಿ ಹೋಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯ ನಿಮ್ಮ ಉದ್ದೇಶ ಏನು, ವಯನಾಡ್ಗೆ ₹25 ಕೋಟಿ ಕೊಟ್ಟಿದ್ದೀರಿ. ಅದು ಯಾರ ಹಣ? ಎಲ್ಲ ಸೇರಿ ₹75 ಸಾವಿರ ಕೋಟಿ ಬಿಲ್ ಬಾಕಿ ಇದೆ, ಇದನ್ನು ಬಜೆಟ್ನಲ್ಲಿ ತೋರಿಸಿದ್ದರೆ ಪಾಪರ್ ಗಿರಾಕಿ, ಪೇಪರ್ ರಾಮಯ್ಯ ನೀನು ಎಂದು ಆಕ್ರೋಶ ವ್ಯಕ್ತಪಡಿಸಿದರು.ಬ್ಲಾಕ್ ಮ್ಯಾಜಿಕ್ ಮಾಡಿ ಬಜೆಟ್ ಮಂಡಿಸಿದ್ದೀಯಾ, ನಾವೇನು ಗ್ಯಾರಂಟಿ ವಿರೋಧಿಗಳಲ್ಲ. ಐದು ಕೊಟ್ಟಿದ್ದೀರಿ, ಇನ್ನು ಇಪ್ಪತೈದು ಕೊಡಿ, ಗ್ಯಾರಂಟಿ ಹಣ ನುಂಗಿ ಹಾಕಿದ್ದೀರಿ. ರೈತರಿಗೆ ಗ್ಯಾರಂಟಿ ಹಣ ಹೋಗುತ್ತಿದೆಯೇ ಹಾಗಾದರೆ ಕರ್ನಾಟಕ ರೈತ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವುದೇಕೆ? ಕಾಂಗ್ರೆಸ್ ದರೋಡೆ ಸರ್ಕಾರ. ಹಳ್ಳ ಬಿದ್ದಿರುವ ರಸ್ತೆಗಳನ್ನು ಮುಚ್ಚುವ ಯೋಗ್ಯತೆ ಇಲ್ಲ. ನೀನು ಯಾವ ಜಿಎಸ್ಟಿ ಮೀಟಿಂಗ್ಗೆ ಹೋಗಿದ್ದಿಯಾ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ₹20 ಸಾವಿರ ಅಂತರದಿಂದ ಸೋಲಿಸಿದ್ದರು. ಸಿದ್ದರಾಮಯ್ಯ ಬಾದಾಮಿಗೆ ಬಂದು ಬಿರಿಯಾನಿ ತಿಂದ್ರು ಆಮೇಲೆ ಪತ್ತೆ ಇಲ್ಲ. ಬಾದಾಮಿಗೆ ಕೈಕೊಟ್ಟು ಓಡಿಹೋದ ಸಿದ್ದರಾಮಯ್ಯ ಇದೀಗ ಪ್ರಚಾರ ಮಾಡಿ ಬಾಗಲಕೋಟೆಗೆ ಅಭಿವೃದ್ಧಿಯ ಮಳೆ ಸುರಿಸುತ್ತೇನೆ ಎಂದು ಹೇಳುತ್ತಾರೆ. ಎರಡು ವರ್ಷ ನಿಮ್ಮ ಶಿಷ್ಯನೇ ಎಂಎಲ್ಎ ಇದ್ದನಲ್ಲ, ಆಗ ಏನು ಅಭಿವೃದ್ಧಿ ಮಾಡಿದ್ದೀರಿ. ಕರ್ನಾಟಕದಲ್ಲಿ ಅಭಿವೃದ್ಧಿಗೆ ಹಣ ಇಲ್ಲ. ಇದನ್ನು ಶಾಸಕರೇ ಹೇಳುತ್ತಿದ್ದಾರೆ.
- ಆರ್. ಅಶೋಕ ವಿರೋಧ ಪಕ್ಷದ ನಾಯಕ