ಕನ್ನಡಪ್ರಭ ವಾರ್ತೆ ತರೀಕೆರೆ

ನಿಮ್ಮ ಏಳಿಗೆಗೆ ನೀವೇ ಶಿಲ್ಪಿಗಳು ಎಂದು ಲಿಂಗದಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮಾಜಶಾಸ್ತ್ರ ಉಪನ್ಯಾಸಕ ಜಯಪ್ಪ ಸಿ.ಆರ್. ತಿಳಿಸಿದರು.

ಪಟ್ಟಣದ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಕ್ರೀಢೆ, ಎನ್.ಎಸ್.ಎಸ್. ಯುವರೆಡ್‌ಕ್ರಾಸ್, ಸಾಂಸ್ಕೃತಿಕ, ವಿದ್ಯಾರ್ಥಿ ಒಕ್ಕೂಟ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಸಮಯ ವ್ಯರ್ಥವಾಗುತ್ತಿದೆ. ವಿದ್ಯಾರ್ಥಿದೆಸೆಯಲ್ಲಿ ಸಮಯದ ಮಹತ್ವವನ್ನು ಅರಿತುಕೊಳ್ಳಬೇಕು. ನಿಮ್ಮನ್ನು ಮುನ್ನೆಡೆಸುವ ಶಕ್ತಿ ನೀವೇ ಆಗಿರುವುದರಿಂದ ಸಮಯವನ್ನು ವ್ಯರ್ಥಮಾಡದೆ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳೇ ದೇಶದ ನಿಜವಾದ ಸಂಪತ್ತು ಪರಿಶ್ರಮಪಟ್ಟು ವಿದ್ಯೆ ಕಲಿತು ಜ್ಞಾನ ಸಂಪಾದನೆ ಮಾಡಿದಾಗ ಮಾತ್ರ ದೇಶದ ಆಸ್ತಿಯಾಗುತ್ತಾರೆ. ಪರಿಶ್ರಮದಿಂದ ದುಡಿದು ಸಂಪಾದಿಸಬೇಕು, ಗುರುಗಳ ಮಾರ್ಗದರ್ಶನದಲ್ಲಿ ತಂದೆ ತಾಯಿಗಳಿಗೆ ಯೋಗ್ಯ ಮಕ್ಕಳಾಗಬೇಕು ತಮ್ಮ ಜವಾಬ್ಧಾರಿಯನ್ನು ಅರಿತು ನಡೆಯಬೇಕು ಎಂದು ಹೇಳಿದರು.


ಮಾನಸ ಪದವಿ ಪೂರ್ವ ಕಾಲೇಜು .ಉದಯಶಂಕರ್ ಎಲ್.ಜಿ. ಅವರು ಮಾತನಾಡಿ. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದುದು ಅದು ಜೀವನದಲ್ಲಿ ಮತ್ತೊಮ್ಮೆ ಸಿಗುವುದಿಲ್ಲ ವಿದ್ಯಾರ್ಥಿದೆಸೆಯಲ್ಲಿ ಉತ್ತಮ ಸ್ನೇಹಿತರನ್ನು ಸಂಪಾದಿಸಿಕೊಳ್ಳಿ ಓದಿದ ಕಾಲೇಜಿನ ಬಗ್ಗೆ ಅಭಿಮಾನವನ್ನುಇಟ್ಟುಕೊಂಡು ಶ್ರದ್ಧೆಯಿಂದ ಕಲಿಯಬೇಕು ಎಂಬ ಹಠವನ್ನು ಬೆಳೆಸಿಕೊಳ್ಳಿ. ಗುರಿ ಸಾಧನೆಗೆ ಇಚ್ಚಾಶಕ್ತಿ ತುಂಬಾ ಮುಖ್ಯವಾದುದು. ಸಾಧಿಸುವ ಛಲವನ್ನು ಈಗಿನಿಂದಲೇ ಬೆಳೆಸಿಕೊಳ್ಳಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಂದಿನಿಂದಲೇ ತಯಾರಿ ನಡೆಸಿ ಉತ್ತಮ ಹುದ್ದೆಯನ್ನುಅಲಂಕರಿಸುವಂತಾಗಬೇಕು ಎಂದು ಹೇಳಿದರು.

ಎಸ್.ಜೆ.ಎಂ. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಧರ್ಮರಾಜ್ ಟಿ.ಎಸ್. ಮಾತನಾಡಿ, ಆಧುನಿಕ ಯುಗದಲ್ಲಿ ಜೀವನ ಶೈಲಿ ಬದಲಾಗಿದೆ. ಅದರಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ, ಸರಳ ಜೀವನವನ್ನು ರೂಢಿಸಿಕೊಳ್ಳಿ ಉತ್ತಮ ಆಹಾರ ಸಂಸ್ಕೃತಿಯನ್ನು ಬೆಳೆಸಿಕೊಂಡು, ಯೋಗ ಪ್ರಾಣಾಯಾಮಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ ಸಾಕಿ, ಸಲುಹಿ ಬೆಳೆಸಿದ ತಂದೆತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಸಮಾಜದಲ್ಲಿ ಅನಾಥಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ ಅವುಗಳು ಕಡಿಮೆಯಾಗಬೇಕು ಎಂದರು.

ಪ್ರಾಚಾರ್ಯ ಡಾ.ಕೆ.ಜಿ.ಚವ್ಹಾಣ್‌ ಮಾತನಾಡಿ, ಕಾಲೇಜಿಗೆ 47 ವರ್ಷಗಳ ಪರಂಪರೆಇದೆ ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಮಹಾವಿದ್ಯಾಲಯದ ರಾಯಭಾರಿಗಳು. ಪದವಿ ನಂತರ ವಿದ್ಯಾಭ್ಯಾಸ ಮೊಟಕು ಗೊಳಿಸದೆ ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಶಿಸ್ತು, ಸಮಯ ಪ್ರಜ್ಞೆ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಹೇಳಿದರು.

ವಿದ್ಯಾರ್ಥಿ ಒಕ್ಕೂಟದ ಚೇರಮನ್ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶಿವರಾಜಕುಮಾರ ಕೆ. ಕಾರ್ಯಕ್ರಮದ ವಾರ್ಷಿಕ ವರದಿಯನ್ನು ಮಂಡಿಸಿದರು ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಸದಾಶಿವನಾಯ್ಕ ಎ. ಇವರು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣೆ ನೆಡೆಸಿಕೊಟ್ಟರು.

ದತ್ತಿ ನಿಧಿ ಪುರಸ್ಕಾರ ಕೊಡಲಾಗುವ ನಗದು ಬಹುಮಾನವನ್ನು 2024-25ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಬಿ.ಎ. ವಿಭಾಗದ ಶಾರೂನ್ ಫರ್ನಾಂಡಿಸ್ ಹಾಗೂ ಬಿ.ಕಾಂ. ವಿಭಾಗದಿಂದ ಕು.ಇಂಧುಶ್ರೀ ಇವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಡಾ.ಶಿವರಾಜಕುಮಾರ ಕೆ.ಶ್ರೀ.ಕೃಷ್ಣದೇವರಾಯ ಬಳ್ಳಾರಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಕ್ಕೆ ಸನ್ಮಾನಿಸಲಾಯಿತು.

ಅನುಷ ಜಿ.ಪಿ.. ಸುವರ್ಣ ಎನ್. ಸಹನಾ ಕೆ. ಉಮ್ಮೆರುಖಯ್ಯಾ ,ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.