ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ನಾವು ಮಾಡುವ ಕೆಲಸವನ್ನು ಕೇವಲ ಹೊಟ್ಟೆಪಾಡಿಗಾಗಿ ಮಾಡದೆ ಅದನ್ನು ದೈವದತ್ತವಾದ ಪವಿತ್ರ ಸೇವೆ ಎಂದು ಭಾವಿಸಿ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿದರೆ ಆ ಕೆಲಸದಲ್ಲೇ ನೆಮ್ಮದಿಯ ಸ್ವರ್ಗ ಕಾಣಬಹುದು ಎಂದು ನಿವೃತ್ತ ಉಪನ್ಯಾಸಕ ಕೆ. ಎಸ್. ನಂಜುಂಡಸ್ವಾಮಿ, ಶನಿವಾರ ತಿಳಿಸಿದರು.

ನುಗ್ಗೇಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1985 - 86ನೇ ಸಾಲಿನ ವಿದ್ಯಾರ್ಥಿಗಳು ಪೇಟೆ ಬೀದಿ ವೀರಶೈವ ಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ದೇವರನ್ನು ಎಲ್ಲೋ ಹುಡುಕುವ ಬದಲು ನಾವು ಮಾಡುವ ವೃತ್ತಿಯಲ್ಲಿಯೇ ದೇವರನ್ನು ಕಾಣಬೇಕು ಸೋಮಾರಿತನವನ್ನು ಬಿಟ್ಟು ಶ್ರಮಜೀವಿಯಾಗುವುದೇ ಜೀವನದ ನಿಜವಾದ ಗುರಿಯಾಗಬೇಕು ಸಮಾಜದಲ್ಲಿ ಯಾವುದೇ ವೃತ್ತಿ ಮೇಲಲ್ಲ ಅಥವಾ ಕೀಳಲ್ಲ ಕಸ ಗುಡಿಸುವವನಿಂದ ಹಿಡಿದು ಗುರುವಿನವರೆಗೂ ಪ್ರತಿಯೊಬ್ಬರ ಕಾಯಕವೂ ಗೌರವಯುತವಾದದ್ದು ಕಾಯಕವನ್ನು ಕೇವಲ ಲಾಭಕ್ಕಾಗಿ ಮಾಡುವುದಲ್ಲ ಅದರಲ್ಲಿ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು ಪರರ ಶ್ರಮವನ್ನು ಕಸಿದುಕೊಳ್ಳದೆ ತನ್ನ ಬೆವರಿನ ಹನಿಯಿಂದ ಬದುಕುವುದೇ ನಿಜವಾದ ಜೀವನ ಎಂದು ತಿಳಿಸಿದರು. ರಾಯಚೂರು, ರಾಮನಗರ, ಸೋಮವಾರಪೇಟೆ, ನುಗ್ಗೇಹಳ್ಳಿ ಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ ನೆಮ್ಮದಿ ಇದೆ. ನನಗೆ ಈಗ 80 ವರ್ಷವಾಗಿದೆ ನಿವೃತ್ತಿಯ ನಂತರವೂ 22 ವರ್ಷ ಮೈಸೂರಿನ ಖಾಸಗಿ ಕಾಲೇಜುಗಳಲ್ಲಿ ಉಪನ್ಯಾಸಕ ವೃತ್ತಿ ಮಾಡಿ ಕೋವಿಡ್ ಸಮಯದಲ್ಲಿ ಕೆಲಸ ಬಿಟ್ಟು ನನ್ನ ನೆಚ್ಚಿನ ಎಂಜಿನಿಯರ್‌ ವಿದ್ಯಾರ್ಥಿ ನನ್ನ ನಿವೇಶನದಲ್ಲಿ 7 ಲಕ್ಷಕ್ಕೆ ಕಟ್ಟಿಕೊಟ್ಟ ಮನೆಯಲ್ಲಿ ನೆಮ್ಮದಿ ಜೀವನ ನಡೆಸುತ್ತಿದ್ದೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಕೆ.ಎಸ್. ನಂಜುಂಡಸ್ವಾಮಿ, ನಿವೃತ್ತ ಶಿಕ್ಷಕ ಸಿ.ಜಿ. ರಾಮೇಗೌಡ, ಲಂಡನ್ ನಲ್ಲಿ ವಾಸವಿರುವ ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರಾಗಿದ್ದ ದಾಸಪುರದ ಪೀಟರ್‌, ವಾಲಿಬಾಲ್ ಆಟದಲ್ಲಿ ನೂರಕ್ಕೂ ಹೆಚ್ಚು ಪ್ರಶಸ್ತಿ ಪಡೆದು ಮಿಂಚಿನ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದ ಹೃದಯ ರಾಜ್ ಅವರನ್ನು 1985- 86ನೇ ಸಾಲಿನ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ, ಕೃಪಾಶಂಕರ್ ವಿದ್ಯುತ್ ಗುತ್ತಿಗೆದಾರ ಗಂಗಾಧರ್ (ಪಾಪಣ್ಣ) ಮೂಡಿಗೆರೆ ಉಮೇಶ್, ವಿದ್ಯಾರ್ಥಿಗಳ ಸಂಘದ ಮುಖಂಡರುಗಳಾದ ಪ್ರೇಮಕುಮಾರಿ, ಮಂಜುಳಾ, ಕುಮುದ, ಮೀನಾಕ್ಷಿ, ಸಂಧ್ಯಾ, ಶಂಕರೇಗೌಡ, ನಾಗೇಂದ್ರ, ಜೋಸೆಫ್, ಜಾನ್ ರೊನಾಲ್ಡ್, ಶಶಿಕಲಾ ನಾಗರಾಜ್, ಎನ್. ಎಸ್. ಗಿರೀಶ್, ಎನ್ಎಸ್. ಪ್ರಕಾಶ್, ಸುಜಾತ ಕುಮಾರ್, ಮಹಾದೇವಪ್ಪ, ಲೋಕೇಶ್, ಅಕ್ಕಿ ಉಮೇಶ್, ಇತರರು ಹಾಜರಿದ್ದರು.