ಸಾರಾಂಶ
ಚಿತ್ರದುರ್ಗ: ಯುವಜನರನ್ನು ಮತದಾನದ ಕಡೆಗೆ ಸೆಳೆಯುವ ಅಗತ್ಯವಿದೆ ಎಂದು ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನ ಹೇಳಿದರು.
ಚಿತ್ರದುರ್ಗ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ತಾಲೂಕು ಸ್ವೀಪ್ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಮತ್ತು ರೋಟರಿ ಕ್ಲಬ್ವತಿಯಿಂದ ಏರ್ಪಡಿಸಿದ್ದ ಮತದಾನ ಮತ್ತು ಮತದಾರರ ಜಾಗೃತಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ಜನಸಂಖ್ಯೆಯಲ್ಲಿ ಶೇ.40ಕ್ಕೂ ಹೆಚ್ಚು ಯುವ ಜನರಿದ್ದಾರೆ. ಆದರೆ ಇವರು ಮತದಾನ ಮಾಡುವ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಪ್ರಜಾಪ್ರಭುತ್ವವನ್ನು ಮುನ್ನೆಡೆಸುವ ಜವಾಬ್ದಾರಿ ಹೊಂದಿರುವ ಯುವಜನರು ಚುನಾವಣೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ಮತದಾನ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಯುವಜನರು ಹಿಂಜರಿಯುವುದಕ್ಕೆ ಕಾರಣಗಳನ್ನು ತಿಳಿದು, ಪ್ರೇರೇಪಣೆ ನೀಡುವುದು ಅಗತ್ಯ. ಕಾವ್ಯದ ಮೂಲಕ ಜನರಿಗೆ ಜಾಗೃತಿ ಮೂಡಿಸುವುದು ಸಾಧ್ಯವಿದೆ. ಜಾಗೃತಿ ಕಾರ್ಯಕ್ರಮಗಳಿಗೆ ಸ್ಪಂದನೆ ಕಡಿಮೆ ಆದರೆ ಅಮಲಿನ ಕಾರ್ಯಕ್ರಮಗಳಿಗೆ ಹೆಚ್ಚಿನ ಸ್ಪಂದನೆ ದೊರೆಯುತ್ತದೆ. ಹೀಗಾಗಿ ಜಾಗೃತಿಯನ್ನು ರುಚಿಕಟ್ಟಾಗಿ ನೀಡಬೇಕಾದ ಅನಿವಾರ್ಯತೆ ಇದೆ ಎಂದರು.ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಇಓ ಪಿ.ಎಸ್.ಅನಂತರಾಜು ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಸಂವಿಧಾನ ತಳಹದಿಯಾಗಿದೆ. ಮತದಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಸ್ವೀಪ್ಸಮಿತಿಯಿಂದ ರಂಗೋಲಿ ಸ್ಪರ್ಧೆ, ಕವಿಗೋಷ್ಠಿ, ಜಾಥಾ ಸೇರಿದಂತೆ ನಾನಾ ಕಾಯಾಕ್ರಮಗಳನ್ನು ಆಯೋಜಿಸಲಾಗಿದೆ. 18 ತುಂಬಿದ ಎಲ್ಲರು ಕಡ್ಡಾಯವಾಗಿ ಮತ ಚಲಾಯಿಸಬೇಕು. ವೃದ್ಧರಿಗೆ, ವಿಕಲಚೇತನರಿಗೆ ಮತದಾನಕ್ಕೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ, ಸ್ವಂತ ಮನೆಯೂ ಇಲ್ಲದ, ವಾಹನವೂ ಇಲ್ಲದ ಆಟೋದಲ್ಲಿ ಮತ್ತು ಸೈಕಲ್ನಲ್ಲಿ ಓಡಾಡುವ ಕೇಂದ್ರ ಸರ್ಕಾರದ ಸಚಿವರನ್ನು ನೋಡಿದ್ದೇವೆ. ಇಂತಹ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಾದರಿಯಾಗಿರಬೇಕು. ಕೋಟಿಗಟ್ಟಲೆ ಆಸ್ತಿ ಹೊಂದಿರುವವರು ಮಾತ್ರ ನಾಮಪತ್ರ ಸಲ್ಲಿಸುತ್ತಿರುವುದು ನೋಡುತ್ತಿದ್ದೇವೆ. ಯುವಜನರು ಭ್ರಷ್ಟತೆಯನ್ನು ಪ್ರತಿರೋಧಿಸುವ ಹಾಗೂ ಪ್ರಶ್ನಿಸುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ವಿ.ಸುರೇಶ್ ಗುಪ್ತಾ, ಧನಂಜಯ ಮೆಂಗಸಂದ್ರ, ಶೈಲಜಾ ಬಾಬು, ಮೀರಾ ನಾಡಿಗ್, ನೇತ್ರಾವತಿ ನೆಲ್ಲಿಕಟ್ಟೆ, ಎ.ಅಂಬರೀಶ್, ಶಿವಪ್ಪ ಕ್ಯಾದಿಗುಂಟೆ, ರಜನಿ ಸೇರಿದಂತೆ ಜಿಲ್ಲೆಯ 30 ಕವಿಗಳು ಕವನ ವಾಚಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಇ.ಲಕ್ಷ್ಮೀಕಾಂತ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಸಾಹಿತಿ ಟೀಕಾ ಸುರೇಶ್ ಗುಪ್ತ, ಸಂಚಾಲಕ ಶ್ರೀನಿವಾಸ್ ಮಳಲಿ, ಕೋಶಾಧ್ಯಕ್ಷ ಸಿ.ಲೋಕೇಶ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ ಮತ್ತಿತರರಿದ್ದರು.