ಯುವ ಜನತೆ ವಚನ ಸಾಹಿತ್ಯದ ಅಧ್ಯಯನ ಮಾಡಲಿ: ಡಾ.ಸಿ.ಸೋಮಶೇಖರ್

| Published : Jul 04 2025, 11:51 PM IST

ಯುವ ಜನತೆ ವಚನ ಸಾಹಿತ್ಯದ ಅಧ್ಯಯನ ಮಾಡಲಿ: ಡಾ.ಸಿ.ಸೋಮಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ವಿವಿ ಆಶ್ರಯದಲ್ಲಿ ಚಿಕ್ಕ ಆಳುವಾರದ ವಿವಿಯ ಕಾವೇರಿ ಸಭಾಂಗಣದಲ್ಲಿ ವಚನ ಸಾಹಿತ್ಯ ಪಿತಾಮಹ, ಸಚೇತನ ವಿಶ್ವವಿದ್ಯಾಲಯ, ವಚನ ಗುಮ್ಮಟ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕುಶಾಲನಗರ: ಫ.ಗು.ಹಳಕಟ್ಟಿ ಜನ್ಮ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಶಾಲನಗರವಚನ ಸಾಹಿತ್ಯವನ್ನು ಶೋಧಿಸಿ, ಸಂರಕ್ಷಿಸಿ, ಅಚ್ಚುಹಾಕಿಸಿ ಕನ್ನಡ ಸಾಹಿತ್ಯಕ್ಕೆ ಬಳುವಳಿ ನೀಡುವ ಮೂಲಕ ಕನ್ನಡ ನಾಡನ್ನು ಕೈಲಾಸ ಮಾಡಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ನಾಡಿನ ಯುವಜನಾಂಗ ಹಾಗೂ ಎಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೊಡಗು ವಿವಿ ಆಶ್ರಯದಲ್ಲಿ ಚಿಕ್ಕ ಆಳುವಾರದ ವಿವಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಪಿತಾಮಹ, ಸಚೇತನ ವಿಶ್ವವಿದ್ಯಾಲಯ, ವಚನ ಗುಮ್ಮಟ ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಳೆ ಗರಿಯಲ್ಲಿದ್ದ ವಚನದ ಕಟ್ಟುಗಳನ್ನು ಸಂಗ್ರಹಿಸಲು ಅಪಾರ ಶ್ರಮಿಸಿದ ಹಳಕಟ್ಟಿ, ಶಾಲೆಗಳು ಹಾಗೂ ಸಹಕಾರಿ ಸಂಘಗಳನ್ನು ತೆರೆದು ಅಪಾರ ಮಂದಿ ಕನ್ನಡಿಗರಿಗೆ ಹೊಸ ಬದುಕು ಕೊಟ್ಟ ಅಪ್ಪಟ ಕನ್ನಡಿಗ. ಇಂತಹ ಆದರ್ಶ ವ್ಯಕ್ತಿಗಳ ಜೀವನ ದರ್ಶನ ಇಂದಿನ ಯುವಕರಿಗೆ ಮಾದರಿಯಾಗಬೇಕು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಬದುಕಿಗೆ ತಮ್ಮ ಬದುಕನ್ನೇ ಧಾರೆಯೆರೆದ ಹಳಕಟ್ಟಿ ಇಲ್ಲದಿದ್ದರೆ ವಚನ ಸಾಹಿತ್ಯ ತನ್ನ ಹೊಳಪು ಕಳೆದುಕೊಳ್ಳುತ್ತಿತ್ತು ಎಂದು ಹೇಳಿದರು.

ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ, ಧಾರ್ಮಿಕ, ನೈತಿಕ ಕ್ರಾಂತಿ ವಿಶ್ವಕ್ಕೆ ಜೀವನದ ಸಂವಿಧಾನವನ್ನು ಕೊಟ್ಟಿತು ಎಂದರು.ಮುಖ್ಯ ಅತಿಥಿ ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಸಿ.ತಾರಾನಾಥ್ ಮಾತನಾಡಿ, ಫ.ಗು.ಹಳಕಟ್ಟಿಯವರ ಸಮಗ್ರ ಜೀವನ ಕೇವಲ ವಚನ ಸಾಹಿತ್ಯವಲ್ಲ. ಅವರ ಸತ್ಕಾರ್ಯಗಳು ಸಮಾಜದ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಿತ್ತು. ಫ.ಗು.ಹಳಕಟ್ಟಿ ಅವರ ಕಾಯ, ಕರ್ಮ, ತೊಡುಗೆ ಸಮನ್ವಯವಾಗಿತ್ತು. ಅನುಭವ ಹಾಗೂ ಅನುಭಾವದಿಂದ ಕೂಡಿತ್ತು. ವಚನಗಳಲ್ಲಿ ಇರುವ ವೈಜ್ಞಾನಿಕತೆ, ಧಾರ್ಮಿಕತೆ, ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಜೀವನ ಸಂವಿಧಾನವನ್ನು ಅಧ್ಯಯನ ಮಾಡದ ನಾವುಗಳು ಇಂದು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದಿರುವುದು ವಿಪರ್ಯಾಸ ಎಂದರು.

ಶ್ರೇಷ್ಠ ದಾರ್ಶನಿಕ ಸಂತ:

ಅಧ್ಯಕ್ಷತೆ ವಹಿಸಿದ್ದ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಹನ್ನೆರಡನೇ ಶತಮಾನದ ಕಲ್ಯಾಣದಲ್ಲಿ ನಡೆದ ಕ್ರಾಂತಿಯಿಂದಾಗಿ ಹಾಳಾಗಿದ್ದ ವಚನಗಳ ತಾಡೋಲೆಗಳನ್ನು ಸಂಗ್ರಹಿಸಿ, ಸಂಶೋಧಿಸಿ, ಅಚ್ಚು ಹಾಕಿಸಿ ಲಕ್ಷಾಂತರ ವಚನಗಳನ್ನು ಜನಮಾನಸಕ್ಕೆ ತಲುಪಿಸಿದ ಫ.ಗು.ಹಳಕಟ್ಟಿ ಈ ಶತಮಾನ ಕಂಡ ಶ್ರೇಷ್ಟ ದಾರ್ಶನಿಕ ಸಂತ. ಕೇವಲ ವಚನ ಸಾಹಿತ್ಯವಷ್ಟೇ ಅಲ್ಲದೆ ಕನ್ನಡ ನಾಡು, ನುಡಿ, ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡ ಹಳಕಟ್ಟಿಯವರು ನಾಡು ನುಡಿಗೆ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡ ಶ್ರೇಷ್ಠ ಚೇತನ ಎಂದು ಬಣ್ಣಿಸಿದರು.

ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ ವಿಚಾರಧಾರೆಗಳು ಸರ್ವಕಾಲಕ್ಕೂ ಅತೀತವಾದುದು. ಅಳಿಯುತ್ತಿದ್ದ ವಚನ ಸಾಹಿತ್ಯವನ್ನು ಉಳಿಸುವಲ್ಲಿ ಹಳಕಟ್ಟಿಯವರು ಶ್ರಮಿಸಿದ್ದರಿಂದಲೇ ಈ ಸಾಹಿತ್ಯವನ್ನು ಉಳಿಸಿ ಬೆಳೆಸಿ ಜನಮಾನಸದಲ್ಲಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಸುತ್ತೂರು ಜಗದ್ಗುರು ಡಾ.ಶ್ರೀ ರಾಜೇಂದ್ರ ಸ್ವಾಮೀಜಿಯವರು ಶರಣ ಸಾಹಿತ್ಯ ಪರಿಷತ್ತು ರಚಿಸಿ ನಾಡಿನಾದ್ಯಂತ ಇಂತಹ ಮೌಲಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.

ವಿವಿ ಕುಲಸಚಿವರಾದ ಸುರೇಶ್ ಮಾತನಾಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಎಚ್.ವಿ.ಶಿವಪ್ಪ, ಬೆಂಗಳೂರಿನ ಬಸವ ಬಳಗದ ಪ್ರಮುಖರಾದ ಸರ್ವಮಂಗಳ ಸೋಮಶೇಖರ್, ಸಾಹಿತಿ ಭಾರಧ್ವಜ್ ಕೆ.ಆನಂದ ತೀರ್ಥ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್ ಇದ್ದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಸ್ವಾಗತಿಸಿದರು.

ಕೊಡಗು ವಿವಿ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ನಿರೂಪಿಸಿದರು. ವಿವಿಯ ಸಂಶೋಧನಾ ವಿದ್ಯಾರ್ಥಿಗಳಾದ ಶಮಿತಾ, ಸ್ಮಿತಾ ತಂಡ ವಚನ ಗಾಯನ ನಡೆಯಿತು.