ಯುವಜನರು ವಿಷಕಾರಿ ಚಟಗಳಿಂದ ದೂರವಿರಿ

| Published : Jun 01 2025, 03:20 AM IST

ಸಾರಾಂಶ

ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೆಚ್ಚಳವಾಗುವುದರ ಜೊತೆಗೆ ಮಾರಕ ಕಾಯಿಲೆಗೆ ದಾರಿ

ಕನ್ನಡಪ್ರಭ ವಾರ್ತೆ ಬೀಳಗಿ

ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಧೂಮಪಾನ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಹೆಚ್ಚಳವಾಗುವುದರ ಜೊತೆಗೆ ಮಾರಕ ಕಾಯಿಲೆಗೆ ದಾರಿ ಮಾಡಿಕೊಟ್ಟಂತೆ ಅದಕ್ಕೆ ಯಾರು ಕೂಡಾ ಇಂತಹ ಕೆಟ್ಟ ಚಟಗಳಿಗೆ ಬಲಿಯಾಗಬೇಡಿ ಎಂದು ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಎಂ.ಎನ್.ಪಾಟೀಲ ಹೇಳಿದರು.

ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಬಾಡಗಂಡಿ ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನರ್ಸಿಂಗ್, ಬಿಎಎಂಎಸ್, ಆಯುರ್ವೇದಿಕ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ತಾಲೂಕು ಆರೋಗ್ಯ ಕೇಂದ್ರ ಸಹಯೋಗದಲ್ಲಿ ಜರುಗಿದ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್‌ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವಕರು ತಂಬಾಕು ಮತ್ತು ಗುಟ್ಕಾದಂತ ವಿಷಕಾರಿ ಚಟಗಳಿಂದ ದೂರು ಇರಬೇಕು. ಈ ವಿಷಕಾರಿ ಚಟ, ಪುಟ್ಟ ಮಕ್ಕಳ ಮುಗ್ಧ ಮನಸ್ಸುಗಳನ್ನು ತನ್ನ ಕರಾಳತೆಗೆ ಸೆಳೆದುಕೊಳ್ಳುತ್ತಿರುವುದು ಆತಂಕಕಾರಿ ಸತ್ಯ. ಗುಟ್ಕಾ ಕಂಪನಿಗಳು ನಗರಗಳಿಂದ ಹಳ್ಳಿಗಳವರೆಗೆ ತಮ್ಮ ಪ್ರಭಾವವನ್ನು ಹರಡಿ ಮಕ್ಕಳ ಮನಸ್ಸನ್ನು ಕೆಡಿಸುತ್ತಿದ್ದಾರೆ. ಒಂದೆಡೆ ಸರಕಾರ ಗುಟ್ಕಾವನ್ನು ನಿಷೇಧಿಸಿದರೂ ಬಿಡಿ ಘಟಕಗಳ ಮಾರಾಟ ಮುಂದುವರೆದಿದೆ. ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುವ ಈ ವಸ್ತುವನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರಗಳು ಮುಂದಾಗಬೇಕು ಎಂದರು.

ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಧರ್ಮರಾಯ ಇಂಗಳೆ, ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಎ.ಎ.ಬಾಳಿಕಾಯಿ, ಆರೋಗ್ಯ ಇಲಾಖೆಯ ಡಾ.ಲಕ್ಷ್ಮಣ ಸಣ್ಣೇಲಿ, ಪ್ರವೀಣ ಕಂಠಿ, ಲಿಯಾಕತ್ ಬಾಗಲಕೋಟೆ, ಸಂತೋಷ್ ಹಂಚಾಟೆ ಹಾಗೂ ಇನ್ನೂ ಅನೇಕರು ಇದ್ದರು.