ಕನ್ನಡಪ್ರಭ ವಾರ್ತೆ ಬೆಂಗಳೂರು
ಯುವಕನೊಬ್ಬನಿಗೆ ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಯುವತಿಯೊಬ್ಬಳು ಕ್ರಿಪ್ಟೊ ಹೂಡಿಕೆ ಹೆಸರಿನಲ್ಲಿ ₹21.22 ಲಕ್ಷ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ಟಿ.ದಾಸರಹಳ್ಳಿ ನಿವಾಸಿಯಾದ ರಾಕೇಶ್ (29) ಎಂಬುವರು ನೀಡಿದ ದೂರಿನ ಅನ್ವಯ ಗರಿಕಿಪಾಟಿ ಸಿರೀಶ ಎಂಬುವರ ವಿರುದ್ಧ ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದುವೆ ಮಾಡಿಕೊಳ್ಳಲು ಹುಡುಗಿ ಹುಡುಕುವ ಸಲುವಾಗಿ ಫೆ.15 ರಂದು ಸಂಗಮ್ ಮ್ಯಾಟ್ರಿಮೋನಿಯಲ್ಲಿ ರಾಕೇಶ್ ಅಕೌಂಟ್ ತೆರೆದಿದ್ದರು. ಅದರ ಮೂಲಕ ಗರಿಕಿಪಾಟಿ ಸಿರೀಶ ಎಂಬ ಯುವತಿ ರಾಕೇಶ್ ಅವರನ್ನು ಸಂಪರ್ಕಿಸಿದ್ದರು. ನಂತರ ಇಬ್ಬರು ಸ್ನೇಹಿತರಾಗಿದ್ದರು. ಸಿರೀಶ, ರಾಕೇಶ್ಗೆ ಮದುವೆಯಾಗುವುದಾಗಿ ಹೇಳಿ ಕ್ರಿಪ್ಟೊ ಅಪ್ಲಿಕೇಷನ್ನಲ್ಲಿ ಡಿಇಎಕ್ಸ್ನಲ್ಲಿ ಟ್ರೇಡಿಂಗ್ ಮಾಡುವಂತೆ ಹೇಳಿ ವೆಬ್ ಸೈಟ್ ಲಿಂಕ್ ಒಂದನ್ನು ಕಳುಹಿಸಿದ್ದಳು. ನಂತರ ಬ್ಯಾಂಕ್ ಖಾತೆಯನ್ನು ನೀಡಿ ಹಣವನ್ನು ಇನ್ವೆಸ್ಟ್ ಮಾಡಿಸಿಕೊಂಡು ಆರಂಭದಲ್ಲಿ ಲಾಭದ ಆಸೆಯನ್ನು ತೋರಿಸಿದ್ದರು. ರಾಕೇಶ್ ಹಣವನ್ನು ವಿತ್ ಡ್ರಾ ಮಾಡಲು ಕಮೀಷನ್ ಕಟ್ಟಬೇಕೆಂದು ಹೇಳಿ ಹಂತ ಹಂತವಾಗಿ 21.22 ಲಕ್ಷ ರು. ಹಣವನ್ನು ಹೂಡಿಕೆ ಮಾಡಿಸಿಕೊಂಡು ನಂತರ ಯಾವುದೇ ಲಾಭವನ್ನು ನೀಡದೆ ಹಾಗೂ ಇನ್ವೆಸ್ಟ್ ಮಾಡಿರುವ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿದ್ದಾರೆ ದೂರಿನಲ್ಲಿ ರಾಕೇಶ್ ಆರೋಪಿಸಿದ್ದಾರೆ.