ಸಾರಾಂಶ
ಧಾರವಾಡ: ಯುವಕರಿಗೆ ಸಾಕಷ್ಟು ಅವಕಾಶಗಳ ಜತೆಗೆ ಸವಾಲುಗಳೂ ಇವೆ. ಹೀಗಾಗಿ ಯುವಕರು ಸವಾಲುಗಳು, ಜಾತಿ ವ್ಯವಸ್ಥೆಯನ್ನು ಮೀರಿ ಮುನ್ನಡೆಯುವ ಮೂಲಕ ದೇಶದಲ್ಲಿ ಬದಲಾವಣೆ, ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕೃಷಿ ವಿಶ್ವ ವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಭವಿಷ್ಯದ ನಾಯಕರೆಂದೇ ಬಿಂಬಿತವಾಗಿರುವ ಯುವಕರು ಬುದ್ಧ, ಬಸವ, ಅಂಬೇಡ್ಕರರ ವಿಚಾರ, ತತ್ವಗಳನ್ನು ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ಸಾಗಬೇಕು. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಸುದ್ದಿಗಳೇ ನಿಜ ಎಂದು ತಿಳಿಯದೆ, ಆ ಮಾಹಿತಿ ಬಗ್ಗೆ ಸರಿಯಾಗಿ ಓದಿ ತಿಳಿದುಕೊಳ್ಳಬೇಕು ಎಂದರು.
ನಮ್ಮ ದೇಶದ ಮಹನೀಯರು ಸಾಕಷ್ಟು ಬದಲಾವಣೆಗಳ ಮೂಲಕ ನಮಗೆ ಒಳ್ಳೆ ಜೀವನ ಕಲ್ಪಿಸಿದ್ದಾರೆ. ಆದರೆ, ಅವರನ್ನು ನಾವು ಒಂದು ಜಾತಿ, ಸಮುದಾಯಕ್ಕೆ ಮೀಸಲಿಟ್ಟಿದ್ದೇವೆ. ಇದು ತಪ್ಪು ಕಲ್ಪನೆ. ದೇಶ, ಸಮಾಜದ ಬದಲಾವಣೆಗೆ ಕಾರಣರಾದವರ ಜಾತಿ, ಸಮುದಾಯ ಗಮನಿಸದೆ, ಅವರು ನೀಡಿದ ಕೊಡುಗೆಗಳನ್ನು ಗಮನಿಸಬೇಕು. ಅಂದಾಗಲೇ ನಮ್ಮ ದೇಶ ಮತ್ತಷ್ಟು ಅಭಿವೃದ್ಧಿ ಕಾರಣಲು ಸಾಧ್ಯ ಎಂದರು.ಹರಿಹರ ಬೆಳ್ಳೂಡಿಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ಬುದ್ಧನ ಅಹಿಂಸಾ ಪರಮೋಧರ್ಮ ಎಂಬ ಅಂಶ ಅಳವಡಿಸಿಕೊಳ್ಳಬೇಕು. ಅಹಿಂಸೆಯಿಂದ ಜಗತ್ತನ್ನು ಗೆಲ್ಲಬಹುದು. ಜಗತ್ತಿನಲ್ಲಿ ಜಾತಿ ವ್ಯವಸ್ಥೆ ಪಿಡುಗು ಹೋದಾಗ ಮಾತ್ರ ಸಾಮರಸ್ಯ ಜೀವನ ಸಾಧ್ಯ. ಬುದ್ಧ, ಬಸವ, ಅಂಬೇಡ್ಕರ್ ನಾಡಿನ ಆದರ್ಶ ಪುರುಷರು ಅವರ ಚಿಂತನೆ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.
ನಂತರ ನಡೆದ ಗೋಷ್ಠಿಗಳಲ್ಲಿ ಬುದ್ಧನ ಅಷ್ಟಾಂಗ ಮಾರ್ಗ ಮತ್ತು ಒಂದು ವೆಜ್ಞಾನಿಕ ನೋಟ ಕುರಿತು ಡಾ. ಸಂಜೀವ ಕುಲಕರ್ಣಿ, ಬುದ್ಧನ ಬೋಧನೆಯಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ಕವಿವಿ ಕನ್ನಡ ಅಧ್ಯಯನ ಪೀಠದ ಉಪನ್ಯಾಸಕಿ ಡಾ. ಅನಸೂಯಾ ಕಾಂಬಳೆ, ಪ್ರಚಲಿತ ವಿಶ್ವದಲ್ಲಿ ಬೌದ್ಧ ಧಮ್ದ ಪ್ರಸ್ತುತತೆ ಕುರಿತು ಕವಿವಿ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಶಿಲಾಧರ ಮುಗಳಿ, ಶ್ರೀ ಬಸವೇಶ್ವರರ ಕುರಿತು ಸಾಹಿತಿ ಡಾ. ರಂಜಾನ್ ದರ್ಗಾ, ಶರಣರ ಷಟ್ಸ್ಥಲ ಮತ್ತು ಒಂದು ವೈಜ್ಞಾನಿಕ ನೋಟ ಕುರಿತು ಡಾ. ಅವಿನಾಶ ಕವಿ, ಸಮಾನತೆ ಮತ್ತು ಅಂತರ್ ಜಾತಿ ವಿವಾಹ ಮತ್ತು ಬಸವಣ್ಣನ ಉತ್ತುಂಗ ಸ್ಥಾನದ ಕುರಿತು ಉಪನ್ಯಾಸಕಿ ಡಾ. ವಿನಯಾ ವಕ್ಕುಂದ, ಅಂಬೇಡ್ಕರ್ ಸಮಾನತೆ ಮತ್ತು ಭಾರತದ ಸಂವಿಧಾನ ಕುರಿತು ಡಾ. ಎಂ. ವಿಶ್ವನಾಥ, ಮಾತನಾಡಿದರು.ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಕೃಷಿ ವಿವಿ ಉಪ ಕುಲಪತಿ ಡಾ. ಪಿ.ಎಲ್. ಪಾಟೀಲ, ಹೊಸದುರ್ಗದ ಶಾಂತವೀರ ಸ್ವಾಮೀಜಿ, ಹೊಸದುರ್ಗದ ಶ್ರೀ ಶಾಂತವೀರ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಪುರಷೋತ್ತಮಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ವೇಮನಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ವಿದ್ಯಾರ್ಥಿಗಳು ಇದ್ದರು.