ಸಾರಾಂಶ
ಗದಗ: ಯುವಕರು ಗಾಂಧೀಜಿಯವರ ವಿಚಾರಗಳನ್ನು ಅಳವಡಿಸಿಕೊಂಡು ದೇಶದ ಪರಿವರ್ತನೆಯ ಕಡೆಗೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.ನಗರದ ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿ ಕ್ಯಾಂಪಸ್ನಲ್ಲಿ ಮಂಗಳವಾರ ರಾಜ್ಯ ಎನ್.ಎಸ್.ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ 2024-25ನೇ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಹಾಗೂ ಗಾಂಧೀಜಿಯವರ ಮೂಲ ಕೃತಿಗಳ ಅನುವಾದಿತ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆ ಸಂಗೀತ ಸಾಂಸ್ಕೃತಿಕ ಸೇರಿದಂತೆ ಎಲ್ಲಾ ರಂಗಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸಹಕಾರ ಚಳವಳಿ ಪರಿಕಲ್ಪನೆ ಹೊಂದಿ ಉದಯವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ನಿರ್ಮಾಣ ಮಾಡುವಲ್ಲಿ ಮುಂಬೈ ಪ್ರಾಂತ್ಯದಲ್ಲಿಯೇ ಗದಗ ಜಿಲ್ಲೆಯು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಈ ಹಿಂದೆ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಕೇಂದ್ರ ಕಚೇರಿಯು ಗದಗನಲ್ಲಿತ್ತು. ನಾವೆಲ್ಲರೂ ಮರೆಯುವಂತಿಲ್ಲ. ಕನ್ನಡ ಸಾಹಿತ್ಯಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿರುವಂತಹ ಪಂಪ, ರನ್ನ, ಕುಮಾರವ್ಯಾಸ, ಅತ್ತಿಮಬ್ಬೆ, ಚಾಮರಸ, ದುರ್ಗಸಿಂಹ, ಅಬ್ಬಯಕ್ಕ, ನಯಸೇನ ಇವರೆಲ್ಲರೂ ಗದಗ ಜಿಲ್ಲೆಯ ಕೊಡುಗೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗಿನ ಆಧುನಿಕ ಸಾಹಿತ್ಯದಲ್ಲಿ ಆರ್.ಸಿ. ಹಿರೇಮಠ, ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜು, ಸೋಮಶೇಖರ್ ಇಮ್ರಾಪುರ, ಅಂದಾನಪ್ಪ ದೊಡ್ಡಮೇಟಿ ಹೀಗೆ ಹಲವರ ಕೊಡುಗೆ ಅಪಾರವಾಗಿದೆ ಎಂದರು.ದಿನದಿಂದ ದಿನಕ್ಕೆಗ್ರಾಮೀಣ ಆರ್ಥಿಕತೆ ಸೊರಗುತ್ತಿದೆ. ಹಳ್ಳಿಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯವಸಾಯ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಎಲ್ಲರಿಗೂ ಆತಂಕ ತರುವ ವಿಷಯ. ಗಾಂಧಿಜಿಯವರ ಕನಸಿನಂತೆ ಗ್ರಾಮದ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗಿದೆ. ಯುವಕರು ಕೆಲಸವನ್ನು ಅರಸಿ ನಗರಕ್ಕೆ ಹೋಗುತ್ತಿದ್ದಾರೆ. ಇದರ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಿದೆ ಎಂದರು.
ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಶಾಂತಿ, ಸಹನೆ, ಪ್ರೀತಿ ಅಳವಡಿಸಿಕೊಂಡು ದ್ವೇಷ ಅಸೂಯೆಯನ್ನು ಮರೆತು ಒಳ್ಳೆಯ ಮನಸ್ಥಿತಿಯೊಂದಿಗೆ ದೇಶವನ್ನು ನಿರ್ಮಾಣ ಮಾಡುವುದು ಎಲ್ಲ ಯುವಕರ ಕರ್ತವ್ಯವಾಗಿದೆ. ದೇಶದಲ್ಲಿರುವ ಅನೇಕ ಜ್ವಲಂತ ಸಮಸ್ಯೆಗಳನ್ನು ಸವಾಲುಗಳಾಗಿ ತೆಗೆದುಕೊಂಡು ಯುವಕರು ಕ್ರಾಂತಿಯ ಕಹಳೆ ಊದಿ ಪರಿವರ್ತನೆಯ ರಾಷ್ಟ್ರ ನಿರ್ಮಾಣದಲ್ಲಿ ಒಮ್ಮತದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.ವಿಪ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ತರಬೇತಿಗಳು ಅತ್ಯುತ್ತಮ ವ್ಯಕ್ತಿತ್ವ ಹೊಂದುವಂತಹ ವಿದ್ಯಾರ್ಥಿಯನ್ನಾಗಿ ತಯಾರು ಮಾಡುತ್ತವೆ. ಹಾಗಾಗಿ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ನೀಡದೇ ಅವರಿಗೆ ಉತ್ತಮ ವ್ಯಕ್ತಿತ್ವವನ್ನು ತಯಾರು ಮಾಡುವಲ್ಲಿ ವಿಶ್ವವಿದ್ಯಾಲಯಗಳು ಶ್ರಮಿಸಬೇಕು ಎಂದರು.ವಿವಿಧ ಸ್ಥಳಗಳಿಂದ ಆಗಮಿಸಿದಂತಹ ಎನ್ಎಸ್ಎಸ್ ಮತ್ತು ಎನ್ಸಿಸಿ ವಿದ್ಯಾರ್ಥಿಗಳು ಗದಗ ಜಿಲ್ಲೆಯ ವೈಶಿಷ್ಟ್ಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಗದಗ ಜಿಲ್ಲೆ, ಕರ್ನಾಟಕ ರಾಜ್ಯಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ನೀಡಿದೆ. ಅದನ್ನೆಲ್ಲರೂ ನಾವು ನೆನಪಿಸಿಕೊಳ್ಳಬೇಕು, ದಿ. ಕೆ.ಎಚ್.ಪಾಟೀಲರು ಹಾಗೂ ಎಚ್.ಕೆ. ಪಾಟೀಲರ ಕೊಡುಗೆಯು ಜಿಲ್ಲೆಯ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.ಹಳೆ ಮೈಸೂರು ಭಾಗದಲ್ಲಿ ಹಾಲು ಉತ್ಪಾದಕರ ಸಂಘ ತುಂಬಾ ಹೆಚ್ಚಾಗಿದ್ದು ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿಯೂ ಹಸುವನ್ನು ಸಾಕಿ ಹಾಲು ಉತ್ಪಾದನೆ ಮಾಡುವ ಮೂಲಕ ಗ್ರಾಮೀಣದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆಯನ್ನು ಕಾಣಬಹುದಾಗಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿಯೇ ಒಂದು ಹಳ್ಳಿಯು ತನಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ ಎಂದರೆ ಅದು ಗದಗ ಜಿಲ್ಲೆಯ ಹುಲಕೋಟಿ ಗ್ರಾಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ವಿವಿ ಕುಲಸಚಿವ ಪ್ರೊ.ಡಾ. ಸುರೇಶ ನಾಡಗೌಡರ, ಡಿ. ಜೀವನಕುಮಾರ, ಡಾ. ಮೀನಾ ದೇಶಪಾಂಡೆ, ಪ್ರಶಾಂತ ಮೇರವಾಡೆ, ಡಾ. ಅಬ್ದುಲ್ ಮುಲ್ಲಾ ಸೇರಿದಂತೆ ವಿವಿಯ ಎನ್ಸಿಸಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳು ಹಾಜರಿದ್ದರು.ಕಾರ್ಯಕ್ರಮವನ್ನು ಪ್ರಕಾಶ ಮಾಚೇನಹಳ್ಳಿ ನಿರ್ವಹಿಸಿದರು.