ಜಾನಪದ ಕಲೆ ಬೆಳೆಸಲು ಯುವಜನತೆ ಮಾನಸಿಕವಾಗಿ ಸಿದ್ಧರಾಗಬೇಕು :ಶಾಸಕ ಎಆರ್‌ಕೆ

| Published : Jan 10 2024, 01:46 AM IST

ಜಾನಪದ ಕಲೆ ಬೆಳೆಸಲು ಯುವಜನತೆ ಮಾನಸಿಕವಾಗಿ ಸಿದ್ಧರಾಗಬೇಕು :ಶಾಸಕ ಎಆರ್‌ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೇ ನಮ್ಮ ಜಾನಪದ ಕಲೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಲು ಮಾನಸಿಕವಾಗಿ ಸಿದ್ದರಾಗಬೇಕಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು.

ಶಾಸಕ ಎ.ಆರ್‌.ಕೃಷ್ಣಮೂರ್ತಿ ಅಭಿಮತ । ಸಂತೇಮರಳ್ಳಿಯಲ್ಲಿ ನಡೆದ ಯುವಸೌರಭ 2024 ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯುವಜನತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೇ ನಮ್ಮ ಜಾನಪದ ಕಲೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಲು ಮಾನಸಿಕವಾಗಿ ಸಿದ್ದರಾಗಬೇಕಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು. ತಾಲೂಕಿನ ಸಂತೇಮರಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಯುವ ಸೌರಭ 2024’ರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು, ಯುವಕರು ಸಾಮಾಜಿಕ ಮಾಧ್ಯಮಗಳ ಹೆಚ್ಚಿನ ವೀಕ್ಷಣೆಯಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ಇದು ಸಲ್ಲದು. ಸಾಮಾಜಿಕ ಮಾಧ್ಯಮಗಳಿಂದ ಉತ್ತಮವಾದದ್ದನ್ನು ಪಡೆದು ಬೇಡದ್ದನ್ನು ಬಿಡಬೇಕು. ತಂದೆ ತಾಯಿಯನ್ನು ಗೌರವಿಸುವಂತೆ ನಮ್ಮ ಜನಪದ ಕಲೆ, ಸಂಸ್ಕೃತಿಗಳನ್ನು ಗೌರವಿಸಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕು ಎಂದರು.

ಚಾಮರಾಜನಗರ ಜಾನಪದ ಕಲೆಗಳ ತವರೂರು. ಕಲೆಯ ಬೀಡಾಗಿದೆ. ಮಲೆ ಮಹದೇಶ್ವರರು, ಬಿಳಿಗಿರಿ ರಂಗನಾಥಸ್ವಾಮಿ, ಮಂಟೇಸ್ವಾಮಿ, ಸಿದ್ದಾಪ್ಪಾಜಿ ಅವರುಗಳು ನಾಡಿನುದ್ದಕ್ಕೂ ನಡೆದಾಡಿ ಜಾನಪದ ಸಂಸ್ಕೃತಿಯನ್ನು ಪಸರಿಸಿದ ಜನಪದ ಕಾವ್ಯಗಳು ಇಂದು ಮನೆಮಾತಾಗಿವೆ. ವಿದ್ಯಾರ್ಥಿಗಳು ಶಾಲಾ ಕಾಲೇಜು ದಿನಗಳಲ್ಲಿ ಕಲೆ, ಸಂಸ್ಕೃತಿ, ಕ್ರೀಡೆ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.ಜನಪದ ಕಲೆಗಳಲ್ಲಿ ಫಿನ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದು, ನಂತರದ ೨ನೇ ಸ್ಥಾನದಲ್ಲಿ ಭಾರತವಿದೆ. ಭಾರತದಲ್ಲಿ ಕರ್ನಾಟಕ ಜಾನಪದ ಕಲೆ ಪ್ರಸ್ತುತ ಪಡಿಸುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಚಲನಚಿತ್ರ ನಟರಾದ ಡಾ. ರಾಜ್‌ಕುಮಾರ್ ನಮ್ಮ ಜಿಲ್ಲೆಯ ಹೆಮ್ಮೆಯಾಗಿದ್ದಾರೆ. ಪೌರಾಣಿಕ ಹಾಗೂ ಸಾಮಾಜಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ರಾಜ್‌ಕುಮಾರ್ ಅವರನ್ನು ನಾವೆಲ್ಲರೂ ಆದರ್ಶವಾಗಿಟ್ಟುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ಯುವಜನತೆ ತಮ್ಮಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಹೊರಸೂಸಲು ಯುವಸೌರಭ ಉತ್ತಮ ವೇದಿಕೆಯಾಗಿದೆ. ಸಂಸ್ಕೃತಿ ನಿಂತ ನೀರಾಗಬಾರದು. ಅದು ಎಲ್ಲಾ ಕಾಲಕ್ಕೂ ಸಮಸ್ಥಿತಿ ಕಾಯ್ದುಕೊಳ್ಳಬೇಕಾದರೆ ಎಲ್ಲಾ ಕಾಲಮಾನದಲ್ಲೂ ಕ್ರೀಯಶೀಲವಾಗಿರಬೇಕು. ಜನಪದ ಕಲೆಗಳ ಪ್ರದರ್ಶನ ನಿರಂತರವಾಗಿರಬೇಕು. ಯುವಜನತೆ ಇದನ್ನು ಅರಿತು ಮುನ್ನಡೆಯಬೇಕು. ಪ್ರಸ್ತುತ ದಿನಗಳಲ್ಲಿ ಕಲೆ, ಸಂಸ್ಕೃತಿ ವ್ಯಾಪಾರೀಕರಣಗೊಳ್ಳುತ್ತಿರುವುದನ್ನು ಯುವಜನತೆ ತಡೆಯಬೇಕಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗಲು ಇಲಾಖೆವತಿಯಿಂದ ಯುವ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ 15 ರಿಂದ 30ರ ವಯೋಮಾನದವರಲ್ಲಿ ಕಲಾ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸಲು ನಡೆಸುತ್ತಿರುವ ಈ ವಿನೂತನ ಕಾರ್ಯಕ್ರಮದ ಸದುಪಯೋಗವನ್ನು ಯುವಜನರು ಪಡೆಯಬೇಕು ಎಂದರು. ಸಂತೇಮರಹಳ್ಳಿ ಗ್ರಾಪಂ ಅಧ್ಯಕ್ಷ ರಾಜಮ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಿಯಾಶಂಕರ್, ಉಪ ಪ್ರಾಂಶುಪಾಲ ಶಿವಣ್ಣ, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಎಚ್.ವಿ. ಚಂದ್ರು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಸುಗಮ ಸಂಗೀತ, ವಚನ ಸಂಗೀತ, ಜಾನಪದ ಗೀತೆ, ಸಮೂಹ ನೃತ್ಯ, ನೃತ್ಯ ರೂಪಕ, ನಾಟಕ, ಜನಪದ ಪ್ರದರ್ಶನ, ಯಕ್ಷಗಾನ, ಮೂಡಲಪ್ರಾಯ, ಬಯಲಾಟ, ಗೊಂಬೆಮೇಳ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.