ಜಾತ್ರೆಗೆ ಬರುವ ರಾಸುಗಳ ಪೈಕಿ ಅತ್ಯುತ್ತಮ ೧೮ ಜೋಡಿಗೆ ಬಹುಮಾನ ನೀಡಲಾಗುವುದು. ಪಶುವೈದ್ಯರು ಬಹುಮಾನಕ್ಕೆ ರಾಸುಗಳನ್ನು ಆಯ್ಕೆ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಯುವ ಜನರು ಕೃಷಿ ಚಟುವಟಿಕೆಗಳತ್ತ ಗಮನಹರಿಸುವ ಮೂಲಕ ನಾಡಿನ ಜನತೆಗೆ ಅನ್ನದಾತರಾಗಬೇಕು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದ ಪುರಸಭೆ ಎದುರು ಶ್ರೀಚಂದ್ರಮೌಳೇಶ್ವರಸ್ವಾಮಿಯವರ 87ನೇ ದನಗಳ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಒಂದು ಕಾಲದಲ್ಲಿ ಅತಿ ವೈಭವದಿಂದ ನಡೆಯುತ್ತಿದ್ದ ದನಗಳ ಜಾತ್ರೆ ಕಳೆದ ದಶಕದಿಂದ ಕಳೆಗುಂದಿದೆ. ಅದನ್ನು ಪುನಃ ಉನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಯುವಕರು ಸಹ ಇದಕ್ಕೆ ಕೈಜೋಡಿಸಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿವಿಧ ತಳಿಗಳ ರಾಸುಗಳನ್ನು ಸಾಕುವವರೂ ದೂರವಾಗುತ್ತಿದ್ದಾರೆ. ಸರ್ಕಾರವೂ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು. ರೈತ ಸಂಘದ ಒತ್ತಾಯದಿಂದ ಈ ಜಾತ್ರೆ ಪುನರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ೫೦೦ ಜೋಡಿ ರಾಸುಗಳು ಜಾತ್ರೆಗೆ ಬರುವಂತಾಗಬೇಕು. ದೇಶಿ ತಳಿಗಳನ್ನು ಉಳಿಸಿ, ಬೆಳೆಸುವ ಸಂಕಲ್ಪ ರೈತರು ಮಾಡಬೇಕು ಎಂದು ಹೇಳಿದರು.

ಜಾತ್ರೆಗೆ ಬರುವ ರಾಸುಗಳ ಪೈಕಿ ಅತ್ಯುತ್ತಮ ೧೮ ಜೋಡಿಗೆ ಬಹುಮಾನ ನೀಡಲಾಗುವುದು. ಪಶುವೈದ್ಯರು ಬಹುಮಾನಕ್ಕೆ ರಾಸುಗಳನ್ನು ಆಯ್ಕೆ ಮಾಡಲಿದ್ದಾರೆ. ಜಾತ್ರೆ ಹಿನ್ನೆಲೆ ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರು ಹಾಗೂ ದೀಪದ ವ್ಯವಸ್ಥೆ ಮಾಡಲಾಗಿದೆ. ಪುರಸಭೆಯಿಂದ ರಥೋತ್ಸವಕ್ಕೆ ಒಂದು ಲಕ್ಷ ರು. ನೆರವು ನೀಡುತ್ತಿದ್ದು, ಹೊಸದಾಗಿ ತೇರಿನ ಮನೆ ನಿರ್ಮಾಣ ಮಾಡಲಾಗಿದೆ. ಕೃಷಿ ಚಟುವಟಿಕೆಯನ್ನು ಆಸಕ್ತಿಯಿಂದ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ತಾಲೂಕು ರೈತ ಸಂಘದ ಅಧ್ಯಕ್ಷ ಸಿ.ಜಿ.ರವಿ, ಎಪಿಎಂಸಿ ಕಾಯದರ್ಶಿ ಸೋಮಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಸಿ.ಎನ್.ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್. ವೆಂಕಟೇಶ್ ಮೂರ್ತಿ, ನಿರ್ದೇಶಕ ಎಂ. ಆರ್.ಅನಿಲ್‌ಕುಮಾರ್, ಡಾ.ಬಿ.ಆರ್.ಯುವರಾಜ್ ಇತರರಿದ್ದರು.