ಜಿಟಿಟಿಸಿ ಕೇಂದ್ರವನ್ನು ಯುವಕರು ಸದುಪಯೋಗಪಡಿಸಿಕೊಳ್ಳಿ

| Published : Jul 23 2025, 02:20 AM IST

ಸಾರಾಂಶ

ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡುತ್ತಿದ್ದು ಜಿಲ್ಲೆಯ ಯುವ ಸಮುದಾಯಕ್ಕೆ ಹೆಚ್ಚಿನ ಸುವರ್ಣಾವಕಾಶವಿದೆ ಎಂದು ಪ್ರಾಂಶುಪಾಲ ಎಸ್. ವಿನಯ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗುಂಡ್ಲುಪೇಟೆಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿಗಳನ್ನು ನೀಡುತ್ತಿದ್ದು ಜಿಲ್ಲೆಯ ಯುವ ಸಮುದಾಯಕ್ಕೆ ಹೆಚ್ಚಿನ ಸುವರ್ಣಾವಕಾಶವಿದೆ ಎಂದು ಪ್ರಾಂಶುಪಾಲ ಎಸ್. ವಿನಯ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗ‍ಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಗುಂಡ್ಲುಪೇಟೆ ತಾಲೂಕಿನ ದುಂದಾಸಪುರದಲ್ಲಿ ೨೦೦೭ ರಲ್ಲಿ ಪ್ರಾರಂಭವಾದ ತರಬೇತಿ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ ಮತ್ತು ಮೇಕಿಂಗ್ ದೀರ್ಘಾವಧಿ ಕೋರ್ಸು ಅಧ್ಯಯನಕ್ಕೆ ಅವಕಾಶ ನೀಡಿದ್ದು ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ತರಬೇತಿ ಪಡೆದು ಪ್ರತಿಷ್ಠಿತ ಕೈಗಾರಿಕೆ, ಉದ್ಯಮಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ನೌಕರಿ ಗ್ಯಾರಂಟಿ ಎಂದರು.

೨೦೨೫-೨೬ ನೆ ಸಾಲಿನ ಪ್ರವೇಶಾತಿಯು ನಡೆಯುತ್ತಿದ್ದು ಪ್ರಸಕ್ತ ಡಿಪ್ಲೋಮಾ ಇನ್ ಮೆಕಾಟ್ರೋನಿಕ್ಸ್ ಮತ್ತು ಡಿಪ್ಲೋಮಾ ಇನ್ ಎಲೆಕ್ಟಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಉಳಿಕೆ ಸೀಟುಗಳು ಬಾಕಿಯಿದ್ದು, ದ್ವಿತೀಯ ಪಿಯುಸಿ (ವಿಜ್ಞಾನ) ಮತ್ತು ಐಟಿಐ ಉತ್ತೀರ್ಣಾರಾಗಿರುವ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ಪಾರ್ಶ್ವಪ್ರವೇಶಾತಿ ಸೌಲಭ್ಯವಿರುತ್ತದೆ ಎಂದರು.

ಟೂಲ್ ಮತ್ತು ಮೇಕಿಂಗ್ ಕೋರ್ಸಿಗೆ ಪ್ರತಿ ವರ್ಷ ೩೦ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಈ ಕೋರ್ಸು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ದೇಶ, ವಿದೇಶಗಳಲ್ಲೂ ಹೆಚ್ಚಿನ ಉದ್ಯೊಗ ಅವಕಾಶವಿದೆ ಎಂದರು.ತರಬೇತಿ ಕೇಂದ್ರವು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಾಯೋಜನೆಯಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಟೂಲ್ ರೂಂ ಮೆಷಿನಿಸ್ಟ್, ಸಿಎನ್‌ಸಿ ಟೆಕ್ನಾಲಜಿಸ್ಟ್ ಕ್ಯಾಡ್/ಕ್ಯಾಮ್ ಸ್ಪೆಷಲಿಸ್ಟ್, ಟರ್ನರ್, ಮಿಲ್ಲರ್ ವಿ?ಯದಲ್ಲಿ ಅಲ್ಪಾವಧಿಯ ತರಬೇತಿಯನ್ನು ನೀಡುತ್ತಿದೆ ಎಂದರು.ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಟೂಲ್ ರೂಂ ಮೆಷಿನಿಸ್ಟ್, ಸಿಎನ್‌ಸಿ ಟನಿಂಗ್ ಮೆನ್ ಆಪರೇಟರ್, ಸಿಎನ್‌ಸಿ ಮಿಲ್ಲಿಂಗ್ ಮೆನ್ ಆಪರೇಟರ್ ತರಬೇತಿಯನ್ನು ಗ್ರಾಮೀಣ ಅಭ್ಯರ್ಥಿಗಳು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಉನ್ನತ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಕೇಂದ್ರದ ಮುಖ್ಯ ಉದ್ದೇಶವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಅಭ್ಯರ್ಥಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸಲು ಬೇಕಿರುವ ತರಬೇತಿ ತಂತ್ರಜ್ಞಾನ ಕ್ರಮಗಳನ್ನು ರೂಪಿಸುವುದು ಆಗಿದೆ.ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣವಾಗಿರುವ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶವಿದ್ದು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕೋರ್ಸುಗಳು ಹೊಸದಾಗಿ ಪ್ರಾರಂಭವಾಗಿದ್ದು, ಉದ್ಯೋಗಾವಕಾಶಗಳನ್ನು ಒದಗಿಸುವ ಕೋರ್ಸುಗಳ ಅಧ್ಯಯನಕ್ಕೆ ಅಭ್ಯರ್ಥಿಗಳು ಮುಂದೆ ಬರಬೇಕು. ಜಿಲ್ಲೆಯ ಏಕೈಕ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಯೋಜನವನ್ನು ಪೂರ್ಣಪ್ರಮಾಣದಲ್ಲಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಕೇಂದ್ರದ ಅನಿಲ್‌ಕುಮಾರ್, ವಿಜಯಕುಮಾರ್, ಸುಭಾಷ್‌ಚಂದ್ರ ಇದ್ದರು.