ಯುವಜನತೆ ದುಶ್ಚಟಕ್ಕೆ ಬಲಿಯಾಗಬೇಡಿ: ಪೊಲೀಸ್‌ ಅಧಿಕಾರಿ ಬಾಲಚಂದ್ರ

| Published : Jun 23 2025, 12:33 AM IST

ಸಾರಾಂಶ

ವಿದ್ಯಾರ್ಥಿ, ಯುವಜನರು, ಯುವತಿಯರು ದುಶ್ಚಟಗಳಿಗೆ ದಾಸರಾಗುತ್ತಿದ್ದು, ಅಂತಹವುಗಳಿಂದ ದೂರವಿರುವ ಜೊತೆಗೆ ಓದು, ಭವಿಷ್ಯದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಆರ್‌ಎಂಸಿ ಯಾರ್ಡ್‌ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಬಾಲಚಂದ್ರ ನಾಯಕ್ ಕಿವಿಮಾತು ಹೇಳಿದರು.

ನಾಗರಿಕರಿಗೆ ಕಾನೂನು ಕುರಿತ ಕಾರ್ಯಕ್ರಮ । ವಂಚಕರ ಬಗ್ಗೆ ಜಾಗೃತಿಗೆ ಸೂಚನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿ, ಯುವಜನರು, ಯುವತಿಯರು ದುಶ್ಚಟಗಳಿಗೆ ದಾಸರಾಗುತ್ತಿದ್ದು, ಅಂತಹವುಗಳಿಂದ ದೂರವಿರುವ ಜೊತೆಗೆ ಓದು, ಭವಿಷ್ಯದ ಕಡೆಗೆ ಗಮನ ಕೇಂದ್ರೀಕರಿಸುವಂತೆ ಆರ್‌ಎಂಸಿ ಯಾರ್ಡ್‌ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಬಾಲಚಂದ್ರ ನಾಯಕ್ ಕಿವಿಮಾತು ಹೇಳಿದರು.

ನಗರದ ಆವರಗೆರೆ ಗ್ರಾಮದ ಶೇಖರಪ್ಪ ಬಡಾವಣೆಯ ಶ್ರೀ ಗಣೇಶ ದೇವಸ್ಥಾನದ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಸೂಚನೆ ಮೇರೆಗೆ ಆರ್‌ಎಂಸಿ ಪೊಲೀಸ್ ಠಾಣೆಯಿಂದ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಗರಿಕರಿಗೆ ಕಾನೂನು ಸುವ್ಯವಸ್ಥೆ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ, ಯುವ ಜನರು, ವಿಶೇಷವಾಗಿ ಯುವತಿಯರು ದುಶ್ಚಟಗಳಿಂದ ದೂರವಿದ್ದು, ತಮ್ಮ ಉತ್ತಮ ಭವಿಷ್ಯದ ಕಡೆಗೆ ಗಮನ ಹರಿಸಲಿ ಎಂದರು.

ಪ್ರಸ್ತುತ ಆಧುನಿಕ ಯುಗದಲ್ಲಿ ಆನ್‌ಲೈನ್ ವಂಚಕರು, ದುಷ್ಕರ್ಮಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ದಿನಕ್ಕೊಂದು ರೀತಿ ಹೊಸ ಹೊಸ ವಿಧಾನದಲ್ಲಿ ಅಪರಾಧ ಎಸಗುತ್ತಿರುವುದು ಹೆಚ್ಚುತ್ತಲೇ ಇದೆ. ಕೆಲ ಆನ್ ಲೈನ್ ವಂಚಕರು ತಾವು ಪೊಲೀಸ್, ಸಿಬಿಐ, ಸಿಐಡಿ, ಇಡಿ ಅಧಿಕಾರಿಗಳೆಂದು ಹೇಳಿ, ಜನರನ್ನು ನಂಬಿಸಿ ವೈಯಕ್ತಿಕ ಮಾಹಿತಿ ಪಡೆದು, ಲೂಟಿ, ಸುಲಿಗೆ ಮಾಡುತ್ತಿದ್ದರುವುದು ಸಹ ಕಂಡು ಬರುತ್ತಿದೆ ಎಂದು ತಿಳಿಸಿದರು.

ಪೊಲೀಸ್, ಸಿಬಿಐ, ಸಿಐಡಿ, ಇಡಿ ಸೇರಿದಂತೆ ವಿವಿಧ ಇಲಾಖೆ, ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಹೆದರಿಸಿ, ಬೆದರಿಸಿ, ಮಾನಸಿಕ ಒತ್ತಡ ಹೇರಿ, ವೈಯಕ್ತಿಕ ಮಾಹಿತಿ ಪಡೆದು, ತಾವು ಹೇಳಿದಷ್ಟು ದಂಡ ಕಟ್ಟದಿದ್ದರೆ ನಿಮ್ಮನ್ನು ಬಂಧಿಸುವುದು ಸೇರಿದಂತೆ ವಿವಿಧ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಜೈಲಿಗೆ ಕಳಿಸುವುದಾಗಿ ಬೆದರಿಸಿ, ಲಕ್ಷಾಂತರ ರು.ಗಳನ್ನು ವಸೂಲಿ ಮಾಡುತ್ತಿದ್ದಾರೆ. ಇಂತಹ ಆನ್‌ಲೈನ್‌ ವಂಚಕರ ಬಗ್ಗೆ ಯಾವುದೇ ಭಯಪಡದೇ, ಜಾಗ್ರತೆಯಿಂದ ಅಂತಹವರೊಂದಿಗೆ ವರ್ತಿಸಿ ಎಂದು ಹೇಳಿದರು.

ಬ್ಯಾಂಕ್‌ಗಳಿಂದ ಹಣವನ್ನು ತರುವಾಗ, ಎಲ್ಲಿಗಾದರೂ ಭಾರೀ ಮೊತ್ತದ ಹಣವನ್ನು ಒಯ್ಯುವಾಗ ನಿಮ್ಮ ಗಮನ ಬೇರೆಡೆಗೆ ಸೆಳೆದು, ನಿಮ್ಮನ್ನು ಯಾಮಾರಿಸಿ, ಹಣ ಲಪಟಾಯಿಸುವ ದುಷ್ಟರೂ ಹುಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ದುಷ್ಟರನ್ನು ಸದೆ ಬಡೆಯಲು ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ. ನಾಗರಿಕರೆಲ್ಲರೂ ಕಾನೂನಿನ ನೆರವನ್ನು ಪಡೆದು, ಸುರಕ್ಷಿತರಾಗಿ, ನೆಮ್ಮದಿಯಿಂದ ಬಾಳುವಂತಾಗಬೇಕು. ಕಾನೂನು, ಸುವ್ಯವಸ್ಥೆ, ಸಾಮರಸ್ಯ ಕಾಪಾಡಲು ಇಲಾಖೆಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಆರ್‌ಎಂಸಿ ಪೊಲೀಸ್ ಠಾಣೆ ಪಿಎಸ್‌ಐ ಚೇತನ್ ಬಿರಾದಾರ ಮಾತನಾಡಿದರು. ಗ್ರಾಮದ ಮುಖಂಡರಾದ ರುದ್ರಪ್ಪ, ಕೆ.ಎಂ.ರೇವಣಸಿದ್ದಪ್ಪ, ಎಲ್.ಕೆ.ಕರೇಗೌಡ್ರು, ಎಚ್.ಜಿ.ಉಮೇಶ ಅವರಗೆರೆ, ಗೋಪಿ ನಾಯ್ಕ, ವಾಸು ಅವರಗೆರೆ, ಇಟ್ಟಿಗೆ ಉಮೇಶ, ರಂಗನಾಥ ನರೇಗಾ, ಹನುಮಂತಪ್ಪ, ಎನ್.ಟಿ.ತಿಪ್ಪೇಸ್ವಾಮಿ, ನ್ಯಾಷನಲ್ ಬಾಡಿ ಬಿಲ್ಡರ್ ಕರಿಬಸಪ್ಪ, ಬಸವರಾಜ, ಅರ್.ಅಣ್ಣೇಶ ನಾಯ್ಕ, ಸಿದ್ದೇಶ ಇತರರು ಇದ್ದರು.