ಯುವಕರು ನಮ್ಮ ಸಂಸ್ಕೃತಿಯನ್ನು ಮರೆಯದಿರಿ: ವಿಪ ಸದಸ್ಯ ಚಿದಾನಂದಗೌಡ

| Published : Feb 09 2025, 01:18 AM IST

ಸಾರಾಂಶ

ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನವು ಪುರಾತನವಾದ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ದ್ವಾರಬಾಗಿಲು ನಿರ್ಮಾಣಕ್ಕೆ ಹಲವು ದಿನಗಳಿಂದ ಬೇಡಿಕೆ ಇತ್ತು. ಆ ಬೇಡಿಕೆಗೆ ವಿಧಾನಪರಿಷತ್ ಪ್ರದೇಶಾಭಿವೃದ್ಧಿಯಿಂದ ಸುಮಾರು 15 ಲಕ್ಷ ರು.ಗಳನ್ನು ನೀಡಲಾಗಿದ್ದು, ಶೀಘ್ರವಾಗಿ ಪ್ರವೇಶ ದ್ವಾರ ನಿರ್ಮಾಣವಾಗಲಿದೆ.

ಕನ್ನಡಪ್ರಭ ವಾರ್ತೆ ಶಿರಾ

ಭಾರತ ದೇಶದ ಸಂಸ್ಕೃತಿ, ಆಚಾರ,ವಿಚಾರಗಳು ಪ್ರಪಂಚಕ್ಕೆ ಮಾದರಿಯಾಗಿದ್ದು, ಅವುಗಳನ್ನು ಇಂದಿನ ಯುವಕರು ಮುಂದುವರಿಸಿಕೊಂಡು ಹೋಗಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಶನಿವಾರ ತಾಲೂಕಿನ ಮೇಲುಕುಂಟೆ ಗ್ರಾಮದಲ್ಲಿರುವ ಪುರಾತನ ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನದ ಪ್ರವೇಶದ್ವಾರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನವು ಪುರಾತನವಾದ ದೇವಸ್ಥಾನವಾಗಿದ್ದು, ಈ ದೇವಸ್ಥಾನದ ದ್ವಾರಬಾಗಿಲು ನಿರ್ಮಾಣಕ್ಕೆ ಹಲವು ದಿನಗಳಿಂದ ಬೇಡಿಕೆ ಇತ್ತು. ಆ ಬೇಡಿಕೆಗೆ ವಿಧಾನಪರಿಷತ್ ಪ್ರದೇಶಾಭಿವೃದ್ಧಿಯಿಂದ ಸುಮಾರು 15 ಲಕ್ಷ ರು.ಗಳನ್ನು ನೀಡಲಾಗಿದ್ದು, ಶೀಘ್ರವಾಗಿ ಪ್ರವೇಶ ದ್ವಾರ ನಿರ್ಮಾಣವಾಗಲಿದೆ. ಇದರ ಜೊತೆಗೆ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನಕ್ಕೂ ಪ್ರವೇಶ ದ್ವಾರ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿ, ಗ್ರಾಮಗಳಲ್ಲಿ ದೇವಸ್ಥಾನಗಳು ಅಭಿವೃದ್ಧಿಯಾಗಿ ದೇವರ ಉತ್ಸವಗಳು ನಡೆಯುತ್ತಿದ್ದರೆ, ಆ ಗ್ರಾಮಗಳು ಸುಭೀಕ್ಷವಾಗಿರುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ತಮಗೆ ಬರುವ ಅಲ್ಪ ಅಭಿವೃದ್ಧಿ ಹಣದಲ್ಲೂ ತಾಲೂಕಿನ ಹಲವು ಶಾಲೆಗಳು, ದೇವಸ್ಥಾನಗಳ ಉನ್ನತಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಒ ಗಂಗೂಬಾಯಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಗ್ರಾಪಂ ಸದಸ್ಯ ಟಿ.ಡಿ.ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ಡಿ.ಶಿವಲಿಂಗಯ್ಯ, ಮಾಜಿ ತಾಪಂ ಸದಸ್ಯ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ಈರಣ್ಣ ಪಟೇಲ್, ನಗರ ಬಿಜೆಪಿ ಅಧ್ಯಕ್ಷ ಗಿರಿಧರ್, ಶ್ರೀ ವೇಣುಗೋಪಾಲ ಸ್ವಾಮಿ (ನವನೀತ ಬಾಲಕೃಷ್ಣ) ದೇವಸ್ಥಾನದ ಪ್ರಧಾನ ಅರ್ಚಕರಾದ ಚಕ್ರಪಾಣಿ, ಎಸ್.ರಂಗನ್, ಮುಖಂಡರಾದ ಎನ್.ಕುಮಾರ್, ಚಂದ್ರು, ರಾಘವೇಂದ್ರ, ಕೊಟ್ಟ ಶ್ರೀನಿವಾಸ ಗೌಡ ಸೇರಿ ಹಲವರು ಹಾಜರಿದ್ದರು.