ಹಾನಗಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಗೌರವಿಸಿ ಕಾಪಾಡುವುದು ಸಂವಿಧಾನದ ಧ್ಯೇಯಾಗಿದ್ದು, ರಾಜಕೀಯ ಅಧಿಕಾರವನ್ನು ಬಳಸಿ ಸ್ವಾರ್ಥಕ್ಕಾಗಿ ಯಾವುದೇ ವ್ಯಕ್ತಿಗಳ ಮೇಲೆ ಅಧಿಕಾರ ಚಲಾಯಿಸಿ ಅನ್ಯಾಯ ಎಸಗುವುದು ಪ್ರತಿಭಟನಾರ್ಹವಾದುದು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ತಿಳಿಸಿದರು. ಹಾನಗಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರಿನ ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೆಶನಾಲಯ, ಹಾವೇರಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಸಂಯುಕ್ತವಾಗಿ ಆಯೋಜಿಸಿದ ಮೇರಾ ಯುವ ಭಾರತ, ತುರ್ತು ಪರಿಸ್ಥಿತಿಗೆ -50 ಭಾರತ ಸ್ವಾತಂತ್ರ್ಯಕ್ಕೆ ಒಂದು ಪಾಠ ಎಂಬ ವಿಷಯದ ಕುರಿತು ಹಾವೇರಿ ಜಿಲ್ಲಾ ಮಟ್ಟದಲ್ಲಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಆಗಬಾರದು. ಅದು ಅಭಿವ್ಯಕ್ತಿ ಸ್ವಾತಂತ್ರ್ಯ. ಪ್ರಜಾಪ್ರಭುತ್ವದ ಘನತೆ ಗೌರವಗಳನ್ನು ಎತ್ತಿ ಹಿಡಿಯಬೇಕು. ಯುವಕರು ದೇಶದ ಸಂವಿಧಾನವನ್ನು ಗೌರವಿಸುವ ಹಾಗೂ ಪಾಲಿಸುವಲ್ಲಿ ಗಟ್ಟಿಯಾಗಿ ನಿಲ್ಲಬೇಕು. ದೇಶದ ಹಿತಕ್ಕೆ ಎಲ್ಲರೂ ಒಟ್ಟಾಗಿ ಯೋಜಿಸಿ ಯೋಚಿಸಿ ನಡೆಯಬೇಕು ಎಂದರು. ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ಮಂಜುನಾಥ ತಲ್ಲೂರ ಮುಖ್ಯ ಅತಿಥಿಯಾಗಿ ಮಾತನಾಡಿ, 50 ವರ್ಷಗಳ ಹಿಂದೆ ನಮ್ಮ ದೇಶದ ಪ್ರಧಾನಿಯಾದ ಇಂದಿರಾಗಾಂಧಿ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತುರ್ತು ಪರಿಸ್ಥಿತಿಯನ್ನು ಹೇರಿದ ಪರಿಣಾಮವಾಗಿ ಬುದ್ಧಿ ಜೀವಿಗಳು ವಾಕ್ ಸ್ವಾತಂತ್ರ್ಯ ಕಳೆದುಕೊಂಡು ಭಯಗ್ರಸ್ಥ ವಾತಾವರಣದಲ್ಲಿ ಬದುಕುವಂತಾಗಿತ್ತು. ದೇಶ ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶವಿದೆ. ಅದರ ದುರುಪಯೋಗ ಸಲ್ಲದು ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಚನ್ನಬಸಪ್ಪ ಕುಮ್ಮೂರ ಪ್ರಜಾಪ್ರಭುತ್ವ ಪ್ರಜೆಗಳ ಒಳಿತಿಗಾಗಿಯೇ ಇದೆ. ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ. ಜಾತಿ ಮತ ಪಂಥಗಳ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಅಭಿಪ್ರಾಯಗಳನ್ನು ಹಂಚಿಕೊಂಡು ಬದುಕಲು ಇಲ್ಲಿ ಅವಕಾಶವಿದೆ. ತುರ್ತು ಪರಿಸ್ಥಿತಿಯ ಕರಾಳ ದಿನದ ಬಗ್ಗೆ ನಾವು ತಿಳಿದುಕೊಂಡು ಎಚ್ಚರಿಕೆಯಿಂದ ಬದುಕಬೇಕು ಎಂದರು. ಸಂಜಯ ಬುಕ್ಕೆ, ಯಮುನಾ ಕೋನೆಸರ್, ಮಂಜುನಾಥ ಸೋಲಾರ್ಗೋಪ್ಪ, ವಿನಯ ಕುಲಕರ್ಣಿ, ಅಹಮದ್ ಫಜಲ್ ಖತೀಬ, ವಿಜಯಕುಮಾರ, ಶಿವಕುಮಾರ, ಜೆ.ನಯನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡ 45 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು.