ಸಶಕ್ತ ಸದೃಡ ಭಾರತ ನಿರ್ಮಿಸಲು ಯುವಕರು ಸಂಘಟಿತರಾಗಬೇಕು ಎಂದು ಕರ್ನಾಟಕ ಉತ್ತರ ಪ್ರಾಂತ ಸಂಚಾಲಕ ದಿಲೀಪ್ ವರ್ನೆಕರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸಶಕ್ತ ಸದೃಡ ಭಾರತ ನಿರ್ಮಿಸಲು ಯುವಕರು ಸಂಘಟಿತರಾಗಬೇಕು ಎಂದು ಕರ್ನಾಟಕ ಉತ್ತರ ಪ್ರಾಂತ ಸಂಚಾಲಕ ದಿಲೀಪ್ ವರ್ನೆಕರ ಹೇಳಿದರು.

ಪಟ್ಟಣದ ಕೆಎಲ್ಇ ಕಾಲೇಜಿನ ಎದುರಿನ ಮೈದಾನದಲ್ಲಿ ನಡೆದ ಬೃಹತ್ ವಿರಾಟ ಹಿಂದೂ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ಸರ್ವಧರ್ಮದ ಸಭೆ ಉದ್ದೇಶಿಸಿ ಮಾತನಾಡಿ, ಸಹೋದರ ಸಹೋದರಿಯರೆ ಎಂದು ಮಾತನಾಡಿದಾಗ ಆ ದೇಶದ ಜನರಲ್ಲಿ ಇಡೀ ಕುಟುಂಬವೇ ನೆನೆಯುವಂತಾಯಿತು. ನಮ್ಮ ದೇಶದ ಜನರಲ್ಲಿ ಶೌರ್ಯಕ್ಕೆ ಕೊರತೆ ಇಲ್ಲ. ನಮ್ಮಲ್ಲಿ ಸಾಕಷ್ಟು ಸಾಮರ್ಥ್ಯವಿದ್ದರೂ ಒಗ್ಗಟ್ಟಿನ ಬಲ ಇಲ್ಲದ್ದಕ್ಕೆ ನಮ್ಮನ್ನು ನೂರಾರು ವರ್ಷಗಳ ಕಾಲ ಬೇರೆ ದೇಶದವರು ಆಳಿದ್ದಾರೆ. ಆದ್ದರಿಂದ ಹಿಂದೂಗಳು ಒಗ್ಗಾಟ್ಟಾದರೆ ಎಲ್ಲರನ್ನು ಮೆಟ್ಟಿನಿಲ್ಲುವ ಸಶಕ್ತ ದೇಶ ನಮ್ಮದಾಗುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಪ್ರತಿಭಾವಂತ ಕೆಲವು ವಿದ್ಯಾರ್ಥಿಗಳು ಡ್ರಗ್ಸ್‌ ಒಳಗೊಂಡಂತೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ಪಾಲಕರು ಗಮನಿಸಬೇಕು ಉತ್ತಮ ವ್ಯಕ್ತಿಗಳನ್ನು ನಿರ್ಮಾಣ ಮಾಡಿದರೆ, ಭವಿಷ್ಯದಲ್ಲಿ ಭಾರತ ಇನ್ನೂ ಬಲಿಷ್ಠವಾಗಲಿದೆ. ಶಿವಾಜಿ ಮಹಾರಾಜರು ಸಣ್ಣ ಸೈನ್ಯದೊಂದಿಗೆ ಹಿಂದೂ ಸ್ವರಾಜ್ಯ ನಿರ್ಮಿಸಿದರು. ಇಂತಹ ಮಹಾಪುರುಷರ ಕಥೆಗಳನ್ನು ಮಕ್ಕಳಲ್ಲಿ ತುಂಬುವಂತಹ ಕಾರ್ಯವಾಗಬೇಕು ಎಂದು ಹೇಳಿದರು.

ನಂತರ ಹಳೇಹುಬ್ಬಳ್ಳಿಯ ನೀಲಕಂಠಮಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಭವ್ಯ ಶೋಭಾಯಾತ್ರೆ: ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಇರುವ ಕೆಇಬಿ ಗಣೇಶ ಮಂದಿರದಿಂದ ಸಕಲ ಮಂಗಳವಾದ್ಯಗಳೊಂದಿಗೆ ಮುತೈದೆಯರು ಆರತಿ, ಕುಂಭದೊಂದಿಗೆ ಸಾಗಿದ ಯಾತ್ರೆ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಜವಳಿ ಬಜಾರ, ನಡುಚೌಕಿ, ಜೋಳದ ಬಜಾರ, ಜೋಡು ರಸ್ತೆ, ಬಸವೇಶ್ವರ ವೃತ್ತ, ಮೂಲಕ ಸಾಗಿ ಬಂದು ಸಮಾವೇಶದ ಮೈದಾನ ತಲುಪಿತು. ಚಿಮ್ಮಡದ ಪ್ರಭು ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಗುರುಪಾದಯ್ಯ ಚಟ್ಟಿಮಠ, ಸುರೇಶ ಗೋಲಭಾವಿ, ವಿಜಯಲಕ್ಷ್ಮಿ ಕುಳ್ಳೊಳ್ಳಿ ವೇದಿಕೆ ಮೇಲಿದ್ದರು. ಶಾಸಕ ಸಿದ್ದು ಸವದಿ ಸೇರಿದಂತೆ ನಗರದ ವಿವಿಧ ಮುಖಂಡರು, ಯುವ ಕಾರ್ಯಕರ್ತರು ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಂದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.