ಕನ್ನಡಪ್ರಭ ವಾರ್ತೆ ಮಧುಗಿರಿ

ನಮ್ಮ ದೇಶ ನಶೆ ಮುಕ್ತ ರಾಷ್ಟವಾದಾಗ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮಲಿದ್ದು ಆ ನಿಟ್ಟಿನಲ್ಲಿ ಮಾದಕ ವ್ಯಸನದಿಂದ ಯುವ ಪೀಳಿಗೆ ದೂರವಿರಬೇಕು ಎಂದು ಮಧುಗಿರಿ ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಕೆ.ಎಸ್. ಅರುಣ್ ಕುಮಾರ್ ಕರೆ ನೀಡಿದರು.

ಭಾನುವಾರ ಪಟ್ಟಣದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ದಿಂದ ನಡೆದ ನಶೆಮುಕ್ತ ಭಾರತ ಅಭಿಯಾನದ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ನಮ್ಮ ದೇಶದ ಅತ್ಯಧಿಕ ಸಂಪತ್ತು. ನಮ್ಮ ದೇಶದಲ್ಲಿ ಶೇ.60ರಷ್ಟು ಯುವಕರಿದ್ದು, ಮಾದಕ ವ್ಯಸನಕ್ಕೆ ತುತ್ತಾಗುವ ಅಪಾಯ ಎದುರಾಗಿದೆ. ಇದನ್ನು ತಡೆಗಟ್ಟಲು ಪೋಲಿಸ್ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಹೆತ್ತವರು,ಗುರು ಹಿರಿಯರು ಹಾಗೂ ರಾಷ್ಟ್ರ ಚಿಂತಕರು ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ಕೈ ಜೋಡಿಸುವ ಅಗತ್ಯವಿದೆ. ಮಕ್ಕಳು ಸಹ ಇಂತಹ ಘಟನೆಗಳನ್ನು ಕಂಡಾಗ ತಕ್ಷಣ ಹತ್ತಿರದ ಪೋಲಿಸರಿಗೆ ಅಥವಾ ನಮ್ಮ ಯುವ ಮೋರ್ಚಾ ಸಮಿತಿಗೆ ಮಾಹಿತಿ ನೀಡಿದರೆ ತಕ್ಷಣ ಆ ದಂಧೆಯನ್ನು ಮಟ್ಟ ಹಾಕಲು ಸಹಾಯವಾಗುತ್ತದೆ ಎಂದರು.

ಮಾಜಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಮಾತನಾಡಿ, ಯುವಶಕ್ತಿ ಬಲಹೀನವಾದರೆ ದೇಶ ಬಲಿಷ್ಠವಾಗಿ ಇರಲು ಸಾಧ್ಯವಿಲ್ಲ. ಹಾಗಾಗಿ ದೇಶದ ಮುಂದಿನ ಪ್ರಜೆಗಳನ್ನು ಶಕ್ತಿ ಹೀನಗೊಳಿಸಲು ವಿದೇಶಿ ಶಕ್ತಿಗಳ ಹುನ್ನಾರ ಅಡಗಿದ್ದು ಯುವಕರು ಎಚ್ಚರವಾಗಿರಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ, ದೇಶದ ಯುವಕರು ಆರೋಗ್ಯವಂತರಾಗಿ ಇರುವ ಕನಸು ಕಂಡ ಪ್ರಧಾನಿ ನರೇಂದ್ರಮೋದಿಯವರ ಸೂಚನೆಯಂತೆ 100 ವಾರಗಳ ಕಾಲ ದೇಶದಾದ್ಯಂತ ಈ ನಶೆ ಮುಕ್ತ ಅಭಿಯಾನದ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು,ಇದಕ್ಕೆ ನಾವೆಲ್ಲ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದರು.


ಜಾಥಾದಲ್ಲಿ ಯುವಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೇಜಸ್ ಗೌಡ ,ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್, ರುದ್ರೇಶ್, ಚೇತನ್ ದಾಸರಹಳ್ಳಿ, ಮಂಜುನಾಥ್, ರತ್ನಮ್ಮ, ರವಿ, ಅಶ್ವತ್ಥರೆಡ್ಡಿ, ಶೈಲಜಾ, ಅನಿತಾ, ಲತಾ ಪ್ರದೀಪ್, ಗೋವಿಂದರಾಜು, ಸುರೇಶ್, ಕೃಷ್ಣಪ್ಪ, ಕೃಷ್ಣಮೂರ್ತಿ, ರವೀಂದ್ರ , ಅಶೋಕ್ರಾ , ರಾಮಚಂದ್ರ ಇತರರಿದ್ದರು.