ತಾಲೂಕಿನ ಮಾರುಕೇರಿ ಗ್ರಾಪಂ ವ್ಯಾಪ್ತಿಯ ಕೋಟಖಂಡದ ಗುಡ್ಡೆಕಟ್ಟೆ ರಸ್ತೆ ಹೊಂಡಮಯವಾಗಿ ಸಂಚರಿಸಲು ತೊಂದರೆಯಾಗಿದ್ದರಿಂದ ಗ್ರಾಮದ ಯುವಕರೇ ಸೇರಿ ಶ್ರಮಾದಾನದ ಮೂಲಕ ರಸ್ತೆಯ ಹೊಂಡಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಘಟನೆ ನಡೆದಿದೆ.

ಶೀಘ್ರ ರಸ್ತೆ ನಿರ್ಮಾಣಕ್ಕೆ ಕೋಟಖಂಡ ಗುಡ್ಡೆಕಟ್ಟೆ ಗ್ರಾಮಸ್ಥರ ಆಗ್ರಹ

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಮಾರುಕೇರಿ ಗ್ರಾಪಂ ವ್ಯಾಪ್ತಿಯ ಕೋಟಖಂಡದ ಗುಡ್ಡೆಕಟ್ಟೆ ರಸ್ತೆ ಹೊಂಡಮಯವಾಗಿ ಸಂಚರಿಸಲು ತೊಂದರೆಯಾಗಿದ್ದರಿಂದ ಗ್ರಾಮದ ಯುವಕರೇ ಸೇರಿ ಶ್ರಮಾದಾನದ ಮೂಲಕ ರಸ್ತೆಯ ಹೊಂಡಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟ ಘಟನೆ ನಡೆದಿದೆ.

ಕೋಟಖಂಡದ ಗುಡ್ಡೆಕಟ್ಟೆಯ ರಸ್ತೆಗೆ ಕಳೆದ ಹಲವು ವರ್ಷಗಳ ಹಿಂದೆ ಹಾಕಿದ ಕಾಂಕ್ರೀಟ್ ಕಿತ್ತು ಹೋಗಿದ್ದು, ರಸ್ತೆ ಹೊಂಡಮಯವಾಗಿ ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ರಸ್ತೆಯ ಹೊಂಡದಲ್ಲಿ ಆಟೋ ರಿಕ್ಷಾ, ಬೈಕು ಮತ್ತಿತರ ವಾಹನಗಳ ಪಲ್ಟಿಯಾಗಿ ಹಲವು ಜನರು ನೋವು ಅನುಭವಿಸಿದ್ದರು. ಈ ರಸ್ತೆಯಲ್ಲಿನ ಸಂಚಾರ ಪಟ್ಟಣಕ್ಕೆ ಸಮೀಪವಾದ್ದರಿಂದ ದಿನಂಪ್ರತಿ ನೂರಾರು ವಾಹನಗಳ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವು. ರಸ್ತೆ ದುರಸ್ತಿ ಮಾಡಿಕೊಡುವಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದರೂ, ಜನಸ್ಪಂದನಾ, ಗ್ರಾಮಸಭೆಯಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಸರಕಾರದಿಂದ ಈ ರಸ್ತೆಗೆ ಮರುಕಾಂಕ್ರೀಟಿಕರಣ ಅಥವ ಮರುಡಾಂಬರೀಕರಣ ಇನ್ನೂ ಎರಡು ಮೂರು ತಿಂಗಳು ತಡ ಆಗುತ್ತದೆ ಎಂದು ಅರಿತ ಊರಿನ ಯುವಕರು ತಮ್ಮ ಸ್ವಂತ ಖರ್ಚಿನಿಂದ ಮರಳು, ಜಲ್ಲಿ, ಸಿಮೆಂಟ್ ತರಿಸಿ ತಾವೇ ಖುದ್ದಾಗಿ ರಸ್ತೆಯ ಹೊಂಡಕ್ಕೆ ಉತ್ತಮ ರೀತಿಯಲ್ಲಿ ವ್ಯವಸ್ಥಿತವಾಗಿ ತೇಪೆ ಹೆಚ್ಚಿ ಸದ್ಯಕ್ಕೆ ವಾಹನಗಳು ಸುಗಮವಾಗಿ ಓಡಾಡಲು ಅನುಕೂಲ ಮಾಡುವುದರ ಮೂಲಕ ಸಂಬಂಧಪಟ್ಟ ಇಲಾಖೆ ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿದ್ದಾರೆ.

ಸಂಬಂಧಿಸಿದ ಇಲಾಖೆ ಇನ್ನಾದರೂ ಅತೀ ಅಗತ್ಯ ಇರುವ ರಸ್ತೆಯ ಮರು ಕಾಂಕ್ರೀಟಿಕರಣ ಅಥವಾ ಡಾಂಬರೀಕರಣಕ್ಕೆ ಅನುದಾನ ಒದಗಿಸುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೊಂಡ ಮುಚ್ಚುವ ಸಂದರ್ಭದಲ್ಲಿ ಗ್ರಾಪಂ ಸದಸ್ಯ ನಾರಾಯಣ ಗೊಂಡ, ಪ್ರಮುಖರಾದ ಜಯರಾಮ ಶೆಟ್ಟಿ, ಮಾರುತಿ ನಾಯ್ಕ, ಮಹೇಶ ಶೆಟ್ಟಿ, ಗಣಪತಿ ನಾಯ್ಕ, ರವಿ ನಾಯ್ಕ, ಗಣೇಶ ನಾಯ್ಕ, ಮಂಜುನಾಥ ಗೊಂಡ, ಗಣೇಶ ಗೊಂಡ, ಕುಮಾರ ನಾಯ್ಕ, ಕೃಷ್ಣ ದೇವಡಿಗ, ನಾಗರಾಜ ದೇಶಭಂಡಾರಿ, ಗಣೇಶದೇಶಭಂಡಾರಿ, ಮಂಜುನಾಥ ಗೊಂಡ,ಗಣೇಶ ಗೊಂಡ, ಈಶ್ವರ ನಾಯ್ಕ ಮುಂತಾದವರಿದ್ದರು.