ಸಾರಾಂಶ
ಶಿವಮೊಗ್ಗದಲ್ಲಿ ಜ.12ರಂದು ಯುವನಿಧಿಗೆ ಚಾಲನೆ ದೊರೆಯಲಿದ್ದು, ಕಾಂಗ್ರೆಸ್ ನಿರಂತರ ಕಾರ್ಯಕ್ರಮ, ಸುದ್ದಿಗೋಷ್ಠಿಯಂಥ ಕಾರ್ಯಕ್ರಮಗಳ ಮೂಲಕ ಭರ್ಜರಿ ಪ್ರಚಾರ ನೀಡುತ್ತಿದೆ. ಅಂತೆಯೇ, ಬುಧವಾರ ಸಂಜೆ ಶಿವಮೊಗ್ಗದಲ್ಲಿ ಜಿಲ್ಲಾ ಎನ್ಎಸ್ಯುಐ ಘಟಕದ ನೇತೃತ್ವದಲ್ಲಿ ಯುವಜ್ಯೋತಿ ಜಾಥಾ ನಡೆಯಿತು. ಸಚಿವರಾದ ಮಧು ಬಂಗಾರಪ್ಪ, ಶರಣ ಪ್ರಕಾಶ್ ಪಾಟೀಲ್ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಅಂಗವಾಗಿ ಜಿಲ್ಲಾ ಎನ್ಎಸ್ಯುಐ ಘಟಕ ವತಿಯಿಂದ ಬುಧವಾರ ನಗರದಲ್ಲಿ ಯುವಜ್ಯೋತಿ ಜಾಥಾ ನಡೆಯಿತು.ನಗರದ ಜೈಲ್ ವೃತ್ತದಿಂದ ಟಿ.ಸೀನಪ್ಪ ಶೆಟ್ಟಿ (ಗೋಪಿ ವೃತ್ತ ) ವೃತ್ತದವರೆಗೂ ಜಾಥಾವು ನಡೆಯಿತು. ಎನ್ಎಸ್ಯುಐ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. "ಯುವನಿಧಿ ಯುವಕರ ಆಶಾನಿಧಿ " ಸೇರಿದಂತೆ ವಿವಿಧ ಘೋಷಣೆಗಳನ್ನು ಫಲಕ ಪ್ರದರ್ಶಿಸಲಾಯಿತು.
ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಯುವನಿಧಿ ಯೋಜನೆ ಕುರಿತು ಜಾಗೃತಿ ಮೂಡಿಸುವ ಆಶಯದಿಂದ ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ಘಟಕ ಯುವಜ್ಯೋತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲಾಮಟ್ಟದಲ್ಲಿ ಎನ್ಎಸ್ಯುಐ ಉತ್ತಮ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಯೋಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸಂಘಟನ ಪದಾಧಿಕಾರಿಗಳು ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗಡೆ, ಎಚ್.ಸಿ.ಯೋಗೀಶ್, ಆರ್.ಪ್ರಸನ್ನಕುಮಾರ್, ಎನ್ಎಸ್ಯುಐ ಜಿಲ್ಲಾಧ್ಯಕ್ಷ ವಿಜಯ್, ಮಧುಸೂದನ್, ಕೆ.ಚೇತನ್, ಚರಣ್, ಹರ್ಷಿತ್, ರವಿ ಕಾಟಿಕೇರೆ, ಕಲೀಂ ಪಾಷಾ, ದೇವೇಂದ್ರಪ್ಪ, ಸಂತೆಕುಡೂರು ವಿಜಯ್, ಧೀರಜ್, ರಂಗೇಗೌಡ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡರು.- - - -10ಎಸ್ಎಂಜಿಕೆಪಿ05:
ಯುವಜ್ಯೋತಿ ಜಾಥಾದಲ್ಲಿ ಸಚಿವರು, ಎನ್ಎಸ್ಯುಐ, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.