ಸಾರಾಂಶ
ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಖಜಾನೆ ಖಾಲಿ ಮಾಡಿರುವ ಆ ಪಕ್ಷದ ಶಾಸಕರು, ಸಚಿವರ ಧರಣಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೋಲಾರ
ಭಾರತದ ಅಭಿವೃದ್ಧಿಗೆ ಮೋದಿ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ. ಈ ದೇಶ ವಿಭಜನೆಗೆ ಕಾರಣವಾದ ಭ್ರಷ್ಟ ಕಾಂಗ್ರೆಸ್ನ ಮುಖಂಡ ಬಾಲಕೃಷ್ಣ ನೀಡುವ ಸರ್ಟಿಫಿಕೇಟ್ ನಮಗೆ ಅಗತ್ಯವಿಲ್ಲ.
ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಖಜಾನೆ ಖಾಲಿ ಮಾಡಿರುವ ಆ ಪಕ್ಷದ ಶಾಸಕರು, ಸಚಿವರ ಧರಣಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಲೇವಡಿ ಮಾಡಿದ್ದಾರೆ.
ಅನುದಾನ ನೀಡಿಕೆಯಲ್ಲಿ ತಾರತಮ್ಯ ಖಂಡಿಸಿ ಫೆ.೭ ರಂದು ದೆಹಲಿಯಲ್ಲಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ದೆಹಲಿಯಿಂದ ಕೋಲಾರದ ಮಾಧ್ಯಮಗಳೊಂದಿಗೆ ದೂರವಾಣಿಯಲ್ಲಿ ಅವರು ಮಾತನಾಡಿದರು.
ಗ್ಯಾರಂಟಿಗಳಿಗಾಗಿ ಹಣ ನುಂಗಿದ್ದಾರೆ: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ೧೦ ವರ್ಷದ ಅವಧಿಯಲ್ಲಿ ೮೧ ಸಾವಿರ ಕೋಟಿ ಅನುದಾನ ರಾಜ್ಯದ ಅಭಿವೃದ್ದಿಗೆ ಕೊಟ್ಟಿತ್ತು.
ಆದರೆ ಮೋದಿ ಆಳ್ವಿಕೆಯ ೧೦ ವರ್ಷಗಳಲ್ಲಿ ೨.೧೯ ಲಕ್ಷ ಕೋಟಿ ಅನುದಾನ ನೀಡಲಾಗಿದೆ, ಇವರು ವಾರೆಂಟಿಯೇ ಇಲ್ಲದ ಗ್ಯಾರಂಟಿಗಳಿಗಾಗಿ ದಲಿತರ ಅಭಿವೃದ್ದಿಗೆ ಮೀಸಲಿಟ್ಟ ೧೧ ಸಾವಿರ ಕೋಟಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕದ ಕಾಂಗ್ರೆಸ್ ನಾಯಕರಲ್ಲಿ ಸ್ವಲ್ಪವಾದರೂ ನೈತಿಕತೆ ಇದ್ದಿದ್ದರೆ ಇಂತಹ ಸಂದರ್ಭದಲ್ಲಿ ಮೋದಿರನ್ನು ಸನ್ಮಾನಿಸಲು ದೆಹಲಿಗೆ ಬರಬೇಕಿತ್ತು, ಮೋದಿ ವಿರುದ್ದ ಧರಣಿ ನಡೆಸಲು ಅಲ್ಲ.
ಕಾಂಗ್ರೆಸ್ನ ಭ್ರಷ್ಟ ಶಾಸಕ ಬಾಲಕೃಷ್ಣ ಹೇಳಿಕೆಗೆ ಕವಡೆ ಕಾಸಿನ ಬೆಲೆಯಿಲ್ಲ, ನಾವು ಗಂಡಸರಾಗಿರುವುದರಿಂದಲೇ ಕರ್ನಾಟಕದ ಅಭಿವೃದ್ದಿಗೆ ಮೋದಿ ಅವಧಿಯಲ್ಲಿ ೨.೧೯ ಲಕ್ಷ ಕೋಟಿ ತಂದಿದ್ದೇವೆ, ಕೋಲಾರ ಜಿಲ್ಲೆಗೆ ಕನಿಷ್ಟ ೧೫ ಸಾವಿರ ಕೋಟಿ ಅನುದಾನ ಸಿಕ್ಕಿದೆ ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಮೋದಿ ಕಡಿವಾಣ:ಯುಪಿಎ ಅವಧಿಯಲ್ಲಿ ದಿನಕ್ಕೊಂದು ಹಗರಣ ೨ಜಿ ಸೆಕ್ಟ್ರಂ, ಅಕ್ಕಿ ಹಗರಣ,ಕಲ್ಲಿದ್ದಿಲು ಹಗರಣ ಆದರೆ ಮೋದಿಯವರ ೧೦ ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಹಗರಣ ನಡೆಸಿಲ್ಲ.
ಆದರೆ ಬಿಜೆಪಿ ಸರ್ಕಾರದಲ್ಲಿ ಪ್ರತಿ ದಿನ ಅಭಿವೃದ್ದಿಯ ಮಾತುಗಳು, ಇದೇ ಮೋದಿ ಸರ್ಕಾರದ ಬಿಜೆಪಿ ಸಂಸದರ ಗಂಡಸುತನಕ್ಕೆ ಸಾಕ್ಷಿ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಎಷ್ಟೇ ಧರಣಿ ಮಾಡಿದರೂ ಪ್ರಯೋಜನವಿಲ್ಲ, ಇವರು ದೇಶದ ವಿವಿಧ ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳುತ್ತಿದ್ದು, ಎಷ್ಟು ಅನುದಾನ ಕೊಟ್ಟರೂ ಸಾಕಾಗೋಲ್ಲ, ಖರ್ಗೆಯವರೇ ಹೇಳಿದ್ದಾರೆ, ಎನ್ಡಿಎ ೪೦೦ ಸೀಟ್ ಬರುತ್ತದೆ ಎಂದು.
ಇವರೆಷ್ಟೆ ಬಡಾಯಿ ಕೊಚ್ಚಿಕೊಂಡರೂ ೩ನೇ ಬಾರಿಗೆ ಮೋದಿಯೇ ಈ ದೇಶದ ಪ್ರಧಾನಿ, ಕರ್ನಾಟಕದಲ್ಲೂ ಎಲ್ಲಾ ೨೮ ಸ್ಥಾನಗಳಲ್ಲೂ ನಾವೇ ಗೆಲ್ಲೋದು ಎಂದರು.