ಸಾರಾಂಶ
ಬಾಗಲಕೋಟೆ : ರಾಜ್ಯಾದ್ಯಂತ ಸದ್ದು ಮಾಡಿದ್ದ ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆ ಹಣ ಅಕ್ರಮ ವರ್ಗಾವಣೆ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನೇ ₹2.83 ಕೋಟಿ ವಂಚಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ದ್ಯಾವಪ್ಪ ತಳವಾರ ವಂಚಕ ಹೊರಗುತ್ತಿಗೆ ಸಿಬ್ಬಂದಿ. ಸದ್ಯ ಬಾಗಲಕೋಟೆ ಸಿಇಎನ್ ಪೊಲೀಸರು ವಂಚನೆ ಮಾಡಿದ ನೌಕರನಿಂದ ₹37 ಲಕ್ಷ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಅವನ ಬ್ಯಾಂಕ್ನಲ್ಲಿದ್ದ ₹76 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ವಂಚಿಸಿದ ಇನ್ನೂ ₹1.70 ಕೋಟಿ ಹಣದ ಮೂಲವನ್ನು ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ಕಟ್ಟಡ ಹಾಗೂ ಇತರೆ ನಿರ್ಮಾಣ ನೋಂದಾಯಿತ ಕಾರ್ಮಿಕ ಫಲಾನುಭವಿಗಳ ಮಕ್ಕಳಿಗೆ ಮದುವೆ ಹಾಗೂ ವೈದ್ಯಕೀಯ ವೆಚ್ಚದ ಧನ ಸಹಾಯವನ್ನು ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿದೆ. ಅವರಿಗೆ ಹಣ ಮಂಜೂರು ಮಾಡುವ ಕಡತವನ್ನು ಕಾರ್ಮಿಕ ಅಧಿಕಾರಿಗೆ ಮಂಡಿಸಿ ಅನುಮೋದನೆ ಪಡೆದುಕೊಳ್ಳುತ್ತಿದ್ದ ನೌಕರ, ನಂತರ ಬೆಂಗಳೂರಿನ ಕೇಂದ್ರ ಕಚೇರಿಯಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ಸಂದರ್ಭದಲ್ಲಿ ಫಲಾನುಭವಿಗಳ ಹೆಸರಿಗೆ ಬರುವ ಸಹಾಯಧನವನ್ನು ಇತರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸುತ್ತಿದ್ದ ಎನ್ನಲಾಗಿದೆ. 2023ರ ಆಗಸ್ಟ್ನಿಂದ 2024ರ ಫೆಬ್ರವರಿ ನಡುವೆ ನಡೆದಿರುವ ಈ ಅವ್ಯವಹಾರ ಈಗ ಬೆಳಕಿಗೆ ಬಂದಿದೆ.
ಆಪ್ತರ ಖಾತೆಗೆ ಹಣ ವರ್ಗಾವಣೆ: ಅಂದಾಜು 400ಕ್ಕೂ ಹೆಚ್ಚು ಅಧಿಕ ಖಾತೆಗಳ ಮೂಲಕ ₹2.83 ಕೋಟಿ ಹಣವನ್ನು ಇಲಾಖೆಯಿಂದ ವರ್ಗಾವಣೆ ಮಾಡಲಾಗಿದೆ. ಇಲಾಖೆ ಹೊರಗುತ್ತಿಗೆ ನೌಕರನಾಗಿರುವ ದ್ಯಾವಪ್ಪ ತಳವಾರ ತನ್ನ ಸಂಬಂಧಿಕರ ಖಾತೆಗೆ ಈ ಹಣವನ್ನು ವರ್ಗಾಯಿಸಿರುವುದು ಬೆಳಕಿಗೆ ಬಂದಿದೆ.
ದ್ಯಾವಪ್ಪ ತಳವಾರ ಹಾಗೂ ಸಂಬಂಧಿಕರಾದ ಭಾಗೀರಥಿ ತಳವಾರ, ಹನುಮಾನ ತಳವಾರ, ಪಲ್ಲವಿ ತಳವಾರ ನಾಲ್ವರ ವಿರುದ್ಧ ಪ್ರಕರಣ ಈ ವರ್ಷ ಫೆಬ್ರವರಿ ಅಂತ್ಯದಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ನಾಲ್ವರೂ ಜಾಮೀನು ಪಡೆದುಕೊಂಡಿದ್ದಾರೆ.