ಹಲವು ವರ್ಷಗಳಿಂದ ಜಿಲ್ಲೆಯವರಿಗೆ ಮಂತ್ರಿಗಿರಿ ಸಿಗದೆ ಕೋಲಾರ ಅಭಿವೃದ್ದಿಯಲ್ಲಿ ಹಿನ್ನಡೆ

| N/A | Published : Feb 08 2025, 12:32 AM IST / Updated: Feb 08 2025, 04:22 AM IST

ಸಾರಾಂಶ

ಹಲವು ವರ್ಷಗಳಿಂದ ಜಿಲ್ಲೆಯವರಿಗೆ ಮಂತ್ರಿಗಿರಿ ಸಿಗದೆ ಕೋಲಾರ ಜಿಲ್ಲೆ ಅಭಿವೃದ್ದಿಯಲ್ಲಿ ಹಿನ್ನಡೆ ಸಾಧಿಸಿದೆ, ಆದ್ದರಿಂದ ಜಿಲ್ಲೆಯ ಶಾಸಕರಿಗೆ ಮಂತ್ರಿ ಭಾಗ್ಯಸಿಕ್ಕರೆ ಮಾತ್ರ ಜಿಲ್ಲೆ ಎಲ್ಲಾ ರಂಗದಲ್ಲಿಯೂ ಅಭಿವೃದ್ದಿ ಕಾಣಲು ಸಾಧ್ಯವಾಗಲಿದೆ ಎಂದು ಶಾಸಕ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

  ಬಂಗಾರಪೇಟೆ : ಹಲವು ವರ್ಷಗಳಿಂದ ಜಿಲ್ಲೆಯವರಿಗೆ ಮಂತ್ರಿಗಿರಿ ಸಿಗದೆ ಕೋಲಾರ ಜಿಲ್ಲೆ ಅಭಿವೃದ್ದಿಯಲ್ಲಿ ಹಿನ್ನಡೆ ಸಾಧಿಸಿದೆ, ಆದ್ದರಿಂದ ಜಿಲ್ಲೆಯ ಶಾಸಕರಿಗೆ ಮಂತ್ರಿ ಭಾಗ್ಯಸಿಕ್ಕರೆ ಮಾತ್ರ ಜಿಲ್ಲೆ ಎಲ್ಲಾ ರಂಗದಲ್ಲಿಯೂ ಅಭಿವೃದ್ದಿ ಕಾಣಲು ಸಾಧ್ಯವಾಗಲಿದೆ ಎಂದು ಶಾಸಕ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸರ್ಕಾರದ ರಚನೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆಶಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನಗೆ ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದರು. ಏಪ್ರಿಲ್‌ನಲ್ಲಿ ಸಂಪುಟ ಪುನಾರಚನೆ

ಏಪ್ರಿಲ್‌ನಲ್ಲಿ ಸಂಪುಟ ಪುನಾರಚನೆಯಾಗಲಿದ್ದು ವರಿಷ್ಠರ ಭರವಸೆಯಂತೆ ತಮಗೆ ಸಚಿವ ಸ್ಥಾನ ಸಿಗುವುದು ಖಚಿತ. ತಾವು ನೇರ ನುಡಿಯ ರಾಜಕಾರಣಿ ಸರ್ಕಾರ ತಪ್ಪು ಮಾಡಿದರೂ ಅದರ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ, ಜಿಲ್ಲೆಯ ಎಲ್ಲ ನಾಲ್ವರು ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಎಂದರು.ಜಿಲ್ಲೆಯ ಅಭಿವೃದ್ಧಿ ಮುಖ್ಯ

ಹಿಂದುಳಿದ ಕೋಲಾರ ಜಿಲ್ಲೆಗೆ ಮೆಡಿಕಲ್ ಕಾಲೇಜು, ಕೈಗಾರಿಕೆಗಳನ್ನು ತಂದು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಆಸೆ ಹೊಂದಿರುವೆ. ಮೂರು ರಾಜ್ಯಗಳ ಸಂಗಮದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ವ್ಯಾಪಾರ ಸ್ಥಳದ ಕೇಂದ್ರವಾಗಿ ಮಾಡುವ ಗುರಿಯನ್ನು ಇಟ್ಟುಕೊಂಡಿರುವೆ. ಹೀಗೆ ಮುಂದಾಲೋಚನೆ ಹೊಂದಿರುವೆನೇ ವಿನಹ ಯಾವುದೇ ಸ್ವಾರ್ಥವಿಲ್ಲ, ಸ್ವಾರ್ಥವಿದ್ದಿದ್ದರೆ ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಪಕ್ಷಾಂತರ ಮಾಡಿದ್ದರೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ತಾವು ಹಾಗೆ ಮಾಡಿಲ್ಲ ಎಂದರು.

ಮೂಡಾ ತನಿಖೆ ಸಿಬಿಐಗೆ ಇಲ್ಲ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಕಳಂಕ ಉಂಟು ಮಾಡುವ ಉದ್ದೇಶದಿಂದ ಪ್ರಕರಣವನ್ನು ಸಿಬಿಐಗೆ ವಹಿಸಲು ವಿರೋಧ ಪಕ್ಷಗಳು ಆಗ್ರಹಿಸಿದ್ದು ಇದಕ್ಕೆ ನ್ಯಾಯಾಲಯ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಹೇಳಿರುವುದನ್ನು ಸ್ವಾಗತಿಸುತ್ತೇನೆ ಎಂದು ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಅವರು ಎಂದೂ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿ ಮಾಡುವ ಹಂಬಲ ಸಹ ಅವರಿಗೆ ಇಲ್ಲ, ಆದರೂ ಬಿಜೆಪಿ, ಜೆಡಿಎಸ್ ನಾಯಕರು ಮುಡಾ ಪ್ರಕರಣವನ್ನು ದೊಡ್ಡ ಸುದ್ದಿ ಮಾಡಿ ಸರ್ಕಾರಕ್ಕೆ ಕಪ್ಪು ಚುಕ್ಕಿ ಬರುವಂತೆ ಮಾಡಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹೇಳುತ್ತಿದ್ದರು, ಆದರೆ ನ್ಯಾಯಾಲಯ ಅದರ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಸತ್ಯಕ್ಕೆ ಜಯಸಿಕ್ಕಂತಾಗಿದೆ ಎಂದರು.