ಸಾರಾಂಶ
ನವದೆಹಲಿ: ಸರ್ಕಾರಿ ಪರೀಕ್ಷೆಗಳಲ್ಲಿ ವಂಚನೆ ಹಾಗೂ ಅಕ್ರಮ ಸೇರಿದಂತೆ ಸಾಲು ಸಾಲು ಹಗರಣಗಳು ಬಯಲಾದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) ತಾನು ನಡೆಸುವ ಪರೀಕ್ಷೆಗಳನ್ನು ತಂತ್ರಜ್ಞಾನದ ಸಹಾಯದಿಂದ ಕಟ್ಟುನಿಟ್ಟುಗೊಳಿಸಲು ಮುಂದಾಗಿದೆ.
ಆಧಾರ್ ಆಧರಿತ ಬೆರಳಚ್ಚು ಹಾಗೂ ಮುಖದ ಗುರುತು ದೃಢೀಕರಣವನ್ನು ಬಳಸಿ ಅರ್ಜಿದಾರರ ನೈಜತೆ ಪರಿಶೀಲಿಸಲು, ಪರೀಕ್ಷೆಯ ವೇಳೆ ಅಕ್ರಮ ತಡೆಗೆ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಸಿಸಿಟೀವಿ ಹಾಗೂ ಬೇರೊಬ್ಬರು ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿಸಲು ಕ್ಯುಆರ್ ಕೋಡ್ ಆಧರಿತ ಇ- ಪ್ರವೇಶ ಪತ್ರಗಳನ್ನು ಪರೀಕ್ಷೆ ವೇಳೆ ಪರಿಚಯಿಸಲು ಸಿದ್ಧತೆಯಲ್ಲಿ ತೊಡಗಿದೆ.
ಮಹಾರಾಷ್ಟ್ರದಲ್ಲಿ ತರಬೇತಿಗೆ ನಿಯೋಜನೆಗೊಂಡಿದ್ದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಿಗದಿತ ಮಿತಿಗಳನ್ನು ಮೀರಿ 12 ಬಾರಿ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದು, ಇತ್ತೀಚೆಗೆ ಬಯಲಾಗಿತ್ತು. ಈ ಸಂಬಂಧ ಖೇಡ್ಕರ್ ವಿರುದ್ಧ ಯುಪಿಎಸ್ಸಿ ಪ್ರಕರಣ ದಾಖಲಿಸಿತ್ತು. ಅದರ ಬೆನ್ನಲ್ಲೇ ಪರೀಕ್ಷೆಯನ್ನು ಅತ್ಯಂತ ಬಿಗಿಗೊಳಿಸುವ ಪ್ರಯತ್ನ ನಡೆದಿದೆ.
ತಂತ್ರಜ್ಞಾನ ಆಧರಿತ ಸೌಕರ್ಯಗಳನ್ನು ಪರೀಕ್ಷೆಯಲ್ಲಿ ಬಳಸುವ ಸಲುವಾಗಿ ಯುಪಿಎಸ್ಸಿ ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಿಡ್ ಆಹ್ವಾನಿಸಿದೆ. ಕನಿಷ್ಠ 100 ಕೋಟಿ ರು. ವಹಿವಾಟು ನಡೆಸುವ, ಲಾಭದಾಯಕ ಸಂಸ್ಥೆಗಳು ಬಿಡ್ ಸಲ್ಲಿಸಬಹುದು ಎಂದು ಟೆಂಡರ್ ದಾಖಲೆ ಹೇಳುತ್ತದೆ. ಯುಪಿಎಸ್ಸಿ ಪ್ರತಿ ವರ್ಷ 14 ಪರೀಕ್ಷೆಗಳನ್ನು ನಡೆಸುತ್ತದೆ.