ಒಳಮೀಸಲಾತಿ ಕುರಿತು ಬಂಜಾರ ಸಮುದಾಯದವರು ಜಾಗೃತರಾಗಿ : ರುದ್ರಪ್ಪ ಲಮಾಣಿ ಕರೆ

| N/A | Published : Jun 10 2025, 01:47 AM IST / Updated: Jun 10 2025, 04:38 AM IST

ಸಾರಾಂಶ

ಒಳಮೀಸಲಾತಿ ವಿಚಾರದಲ್ಲಿ ಬಂಜಾರ ಸಮುದಾಯದವರು ಜಾಗೃತರಾಗಿ ತಮ್ಮ ಹಕ್ಕು ಪಡೆಯಲು ಜಾತಿ ಸಮೀಕ್ಷೆಯಲ್ಲಿ ಮಾಹಿತಿ ನೀಡಬೇಕು ಎಂದು ವಿಧಾನ ಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

 ಬೆಂಗಳೂರು : ಒಳಮೀಸಲಾತಿ ವಿಚಾರದಲ್ಲಿ ಬಂಜಾರ ಸಮುದಾಯದವರು ಜಾಗೃತರಾಗಿ ತಮ್ಮ ಹಕ್ಕು ಪಡೆಯಲು ಜಾತಿ ಸಮೀಕ್ಷೆಯಲ್ಲಿ ಮಾಹಿತಿ ನೀಡಬೇಕು ಎಂದು ವಿಧಾನ ಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ ) ಸೇವಾ ಸಂಘದಿಂದ ಡಾ.ಬಿ.ಆರ್.ಅಂಬೇಡ್ಕರ್, ಶ್ರೀ ಸಂತ ಸೇವಾಲಾಲ್‌ ಜಯಂತಿ, ಸಂಘದ ಕಚೇರಿ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನ್ಯಾ.ನಾಗಮೋಹನ್‌ದಾಸ ಆಯೋಗದಿಂದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನಡೆಯುತ್ತಿರುವ ಮನೆಮನೆ ಸಮೀಕ್ಷೆ ನಡೆಯುತ್ತಿದೆ. ಬಂಜಾರ ಸಮುದಾಯದವರು ಅಗತ್ಯ ಅಂಕಿಅಂಶ, ಮಾಹಿತಿಯನ್ನು ಗಣತಿದಾರರಿಗೆ ನೀಡಬೇಕು. ಈ ಸಂಬಂಧ ಸಂಘಟನೆಯ ಜಿಲ್ಲಾಧ್ಯಕ್ಷರು ತಾಂಡಾಗಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಸೂರಗೊಂಡನಕೊಪ್ಪದಲ್ಲಿ ಲಂಬಾಣಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ₹50 ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನು ನಿರ್ಮಿಸಲು ಕ್ರಮವಹಿಸಿದೆ. ಜತೆಗೆ ಎಲ್ಲ ಬಗೆಯ ಸೌಲಭ್ಯವನ್ನು ಸಮುದಾಯದ ಜನತೆಗೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಾಧೀಶ ವೆಂಕಟೇಶ್‌ ನಾಯಕ್ ಮಾತನಾಡಿ, ತಾಂಡಾಗಳನ್ನು ಕಂದಾಯ ಗ್ರಾಮವಾಗಿಸುವ ವಿಚಾರದಲ್ಲಿ ಸಮುದಾಯ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಜತೆಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ರಾಜಕೀಯವಾಗಿಯೂ ಪ್ರಾಶಸ್ತ್ಯ ಸಿಗುತ್ತಿಲ್ಲ. ಸಮುದಾಯ ಸಂಘಟನೆಯ ಮೂಲಕ ಶಕ್ತಿಯುತವಾಗಬೇಕು ಎಂದು ಕರೆಕೊಟ್ಟರು.

ಸಮುದಾಯದ ಜನರು ಕಾನೂನಿನ ಅರಿವು ಪಡೆದುಕೊಳ್ಳಬೇಕು. ಇದರಿಂದ ಜನತೆ ದೌರ್ಜನ್ಯಕ್ಕೆ ಒಳಗಾಗುವುದು ತಪ್ಪುತ್ತದೆ. ತಮ್ಮ ಸ್ಥಳ, ಕುಟುಂಬ, ಆರ್ಥಿಕ ಸ್ಥಿತಿಗೆ ಸಂಬಂಧಿಸಿದ ಅಗತ್ಯ ಅಧಿಕೃತ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಅಂಬೇಡ್ಕರ್‌, ಸಂತ ಸೇವಾಲಾಲರು ತೋರಿದ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಸಮಾಜದಿಂದ ಐಎಎಸ್‌, ಐಪಿಎಸ್‌ ಹುದ್ದೆಗೇರಿದವರು ಹಾಗೂ ಇತರೆ ಸರ್ಕಾರಿ ಹುದ್ದೆಗಳಲ್ಲಿ ಮುಂಬಡ್ತಿ ಪಡೆದವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಆಪರೇಷನ್‌ ಸಿಂದೂರ ಬೆಂಬಲವಾಗಿ ತಿರಂಗಾ ಯಾತ್ರೆ ನಡೆಸಲಾಯಿತು.

Read more Articles on