ಸಾರಾಂಶ
ನವದೆಹಲಿ : ‘ವೀರ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು, ಗೋ ಹತ್ಯೆಯನ್ನು ಖಂಡಿಸುತ್ತಿರಲಿಲ್ಲ’ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದಿನೇಶ್ ಹೇಳಿಕೆ ಖಂಡಿಸಿರುವ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ, ‘ಗುಂಡೂರಾವ್ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದಾರೆ. ಮಹಾನ್ ವ್ಯಕ್ತಿಗಳ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದನ್ನು ಮುಂದುವರೆಸಿದರೆ ಜನ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸುತ್ತಾರೆ. ಅವರು ಮಾನಸಿಕ ಆಸ್ಪತ್ರೆಗೆ ಹೋಗಿ ನಂತರ ದೇಶದ ದೊಡ್ಡ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಡಿಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಾತನಾಡಿ, ‘ಸಾವರ್ಕರ್ ಬಗ್ಗೆ ಏನೂ ತಿಳಿಯದೆ ರಾಜಕೀಯ ಲಾಭಕ್ಕಾಗಿ ಹೀಗೆ ಹೇಳುತ್ತಾರೆ. ಸಾವರ್ಕರ್ ಪಾಲಿಗೆ ಗೋವು ಪವಿತ್ರವಾಗಿತ್ತು. ಅವರ ವಿರುದ್ಧ ರಾಹುಲ್ ಗಾಂಧಿ ಆರಂಭಿಸಿರುವ ಅಭಿಯಾನವನ್ನು ಉಳಿದ ಕಾಂಗ್ರೆಸ್ ನಾಯಕರು ಮುಂದುವರೆಸುತ್ತಿದ್ದಾರೆ’ ಎಂದರು.
ಉಳಿದಂತೆ ಬಿಜೆಪಿಯ ಅಮಿತ್ ಮಾಳವೀಯ, ಅನುರಾಗ್ ಠಾಕೂರ್ ಕೂಡ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಗಾಂಧಿ ಜಯಂತಿ ಸಭೆಯಲ್ಲಿ ಮಾತನಾಡಿದ ಗುಂಡೂರಾವ್, ‘ಚಿತ್ಪಾವನ ಬ್ರಾಹ್ಮಣನಾಗಿದ್ದರೂ ಸಾವರ್ಕರ್ ಮಾಂಸಾಹಾರಿಯಾಗಿದ್ದರು, ಗೋಹತ್ಯೆಯನ್ನು ಖಂಡಿಸುತ್ತಿರಲಿಲ್ಲ’ ಎಂದು ಹೇಳಿದ್ದರು ಎನ್ನಲಾಗಿದೆ.