ಬಿಜೆಪಿ ವಿಪಕ್ಷವಾಗಿ ವಿರೋಧಿಸುತ್ತಿದೆ ಅಷ್ಟೆ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ

| N/A | Published : Jun 12 2025, 01:57 AM IST / Updated: Jun 12 2025, 03:53 AM IST

HC mahadevappa

ಸಾರಾಂಶ

ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ನಮಗೆಲ್ಲರಿಗೂ ನೋವಿದೆ. ನಾನು ಈ ವಿಚಾರವನ್ನು ಬೇರೆ ರಾಜ್ಯಗಳ ಘಟನೆಗೆ ಹೋಲಿಸುವುದಿಲ್ಲ. ಆದರೂ ಹೇಳುತ್ತೇನೆ, ಅಲ್ಲಿ ಘಟನೆಗಳು ಆದಾಗ ಯಾರಾದರೂ ರಾಜೀನಾಮೆ ಕೊಟ್ಟಿದ್ದರಾ? ತನಿಖೆ ಹಿನ್ನಲೆಯಲ್ಲಿ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.

  ಮೈಸೂರು :  ಬಿಜೆಪಿ ವಿರೋಧ ಪಕ್ಷವಾಗಿ ಎಲ್ಲದಕ್ಕೂ ವಿರೋಧ ಮಾಡಬೇಕು, ಮಾಡುತ್ತಿದೆ ಅಷ್ಟೇ. ಹೋರಾಟ ಮಾಡುವುದು ಅವರ ಹಕ್ಕು, ಮಾಡಲಿ ಬಿಡಿ. ನಾವಂತು ಪ್ರಕರಣವನ್ನು ನ್ಯಾಯ ಸಮ್ಮತವಾಗಿ ತನಿಖೆ ಮಾಡಿಸುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ನಮಗೆಲ್ಲರಿಗೂ ನೋವಿದೆ. ನಾನು ಈ ವಿಚಾರವನ್ನು ಬೇರೆ ರಾಜ್ಯಗಳ ಘಟನೆಗೆ ಹೋಲಿಸುವುದಿಲ್ಲ. ಆದರೂ ಹೇಳುತ್ತೇನೆ, ಅಲ್ಲಿ ಘಟನೆಗಳು ಆದಾಗ ಯಾರಾದರೂ ರಾಜೀನಾಮೆ ಕೊಟ್ಟಿದ್ದರಾ? ತನಿಖೆ ಹಿನ್ನಲೆಯಲ್ಲಿ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

ಸಿಎಂ ಕುರ್ಚಿ ಹಾಗೂ ಕುರ್ಚಿಯ ಮೇಲೆ ಕೂತವರಿಬ್ಬರೂ ಬಿಗಿಯಾಗಿದ್ದಾರೆ. ಸಿಎಂ ಕುರ್ಚಿ ಯಾವತ್ತು ಅಲ್ಲಾಡಿಲ್ಲ. ಈಗಲೂ ಅಲ್ಲಾಡುವ ಪ್ರಶ್ನೆಯೇ ಬರುವುದಿಲ್ಲ. ಸಿಎಂ ಕುರ್ಚಿ ಗಟ್ಟಿ ಇರುತ್ತೆ, ಅದರ ಮೇಲೆ ಕುಳಿತವರು ಸಹ ಗಟ್ಟಿ ಇರುತ್ತಾರೆ ಎಂದರು.

ಜಾತಿ ಗಣತಿ ವಿಚಾರ, ಪ್ರಸಕ್ತ ವಿಚಾರಗಳ ಬಗ್ಗೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಪ್ರಮುಖವಾಗಿ ಜಾತಿ ಗಣತಿಯ ವಿಚಾರದ ಬಗ್ಗೆ ಸಿಎಂ ಚರ್ಚೆ ಮಾಡಿದ್ದಾರೆ. ನಾಳೆ ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಅವರು ಹೇಳಿದರು.

ಸಿಎಂ ಸ್ಥಾನಕ್ಕೆ ಯಾವುದೇ ಗಂಡಾಂತರವಿಲ್ಲ: ಡಾ.ಯತೀಂದ್ರ ಸಿದ್ದರಾಮಯ್ಯ

  ಮೈಸೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿಗೆ ಯಾವುದೇ ಗಂಡಾಂತರವಿಲ್ಲ. ಮುಂದಿನ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಹೈಕಮಾಂಡ್‌ ಯಾವುದೇ ಗಡುವು ನೀಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲು ಯಾರೂ ಅನುಮತಿ ಪಡೆದಿಲ್ಲ. ಅನುಮತಿ ಪಡೆಯದೇ ಕಾರ್ಯಕ್ರಮ ಮಾಡಿದ್ದು ತಪ್ಪು ತಾನೇ. ಅಲ್ಲಿ ಭದ್ರತೆಯಾ ಲೋಪಗಳು ಆಗಿರುವುದು ತಪ್ಪಲ್ಲವೇ? ಇದಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹೇಗೆ ಹೊಣೆ ಆಗುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರ ರಾಜೀನಾಮೆಯನ್ನು ಯಾವ ನೈತಿಕತೆಯ ಆಧಾರದ ಮೇಲೆ ಕೇಳುತ್ತಿದೆ ಹೇಳಿ, ಉತ್ತರ ಪ್ರದೇಶದಲ್ಲಿ ಕಾಲ್ತುಳಿತ ಆಯ್ತು ಅಲ್ಲಿನ ಸಿಎಂ ರಾಜೀನಾಮೆ ಕೊಟ್ರಾ? ಮಹಾರಾಷ್ಟ್ರದಲ್ಲಿ ಕಾಲ್ತುಳಿತ ಆಯ್ತು ಅಲ್ಲಿನ ಸಿಎಂ ರಾಜೀನಾಮೆ ಕೊಟ್ರಾ? ಬಿಜೆಪಿಯವರು ಅಲ್ಲಿನ ಸಿಎಂ ಮನೆಗಳಿಗೆ ಹೋಗಿ ಮುತ್ತಿಗೆ ಹಾಕಿದ್ರಾ? ಬಿಜೆಪಿ ಯಾವ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದೆ? ಕಾಲ್ತುಳಿತ ಪ್ರಕರಣದಲ್ಲಿ ಸಿಎಂ, ಡಿಸಿಎಂ ತಪ್ಪು ಮಾಡಿಲ್ಲ ಎಂದರು.

Read more Articles on