ಸಮಾನತೆ ಬೀಜ ಬಿತ್ತಿದ ಬಸವಕಲ್ಯಾಣ ನಮಗೆ ಪ್ರೇರಣಾ ಭೂಮಿ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ

| Published : Feb 24 2025, 12:33 AM IST

ಸಮಾನತೆ ಬೀಜ ಬಿತ್ತಿದ ಬಸವಕಲ್ಯಾಣ ನಮಗೆ ಪ್ರೇರಣಾ ಭೂಮಿ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಕಲ್ಯಾಣ ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಪಕ್ಕದಲ್ಲಿ ಬಸವ ಮಹಾಮನೆ ಟ್ರಸ್ಟ್‌ ಹಮ್ಮಿಕೊಂಡಿರುವ ಸಮಾನತಾ ಸಮಾವೇಶಕ್ಕೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಇತಿಹಾಸ ನೆನಪಿಸುವ ಈ ಸಮಾನತೆ ಸಮಾವೇಶ ಮಾಡಿರುವ ನೆಲ ಬಸವಕಲ್ಯಾಣ ಇಂಥಹ ಪೂಣ್ಯ ಭೂಮಿಯಲ್ಲಿ ಬೆಲ್ದಾಳ ಸಿದ್ಧರಾಮ ಶರಣರು ಬುದ್ಧ, ಬಸವ, ಡಾ.ಅಂಬೇಡ್ಕರ ಮಹಾತ್ಮರ ತತ್ವ ಸಂದೇಶ ಸಾರಲು ಈ ಸಮಾವೇಶ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ನುಡಿದರು.ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಪಕ್ಕದಲ್ಲಿ ಬಸವ ಮಹಾಮನೆ ಟ್ರಸ್ಟ್‌ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೂಢನಂಬಿಕೆ ಕಂದಾಚಾರಗಳನ್ನು ಹೊಡೆದೊಡಿಸಿ, ಈ ನೆಲದಿಂದ ವಿಶ್ವಕ್ಕೆ ಗಟ್ಟಿದನಿಯಾಗಿ ವಚನಗಳ ಮುಖಾಂತರ ಬಸವಾದಿ ಶರಣರು ಸಮಾನತಾ ಸಂದೇಶವನ್ನು ಮೌಲ್ಯಭರಿತ ಸಂದೇಶವನ್ನು ಅನುಭವ ಮಂಟಪ ಮುಖಾಂತರ ಬಿತ್ತಿದ್ದಾರೆ ಎಂದರು.ದಯವೇ ಧರ್ಮದ ಮೂಲವಯ್ಯಾ ಎಂದು ಸಾರಿ ಮನುಷ್ಯ ಮನುಷ್ಯರಲ್ಲಿ ಪ್ರೀತಿ ವಿಶ್ವಾಸದಿಂದ ಬಾಳಲು ಕಲಿಸಿದ್ದಾರೆ. ಬುದ್ಧ 2500 ವರ್ಷಗಳ ಹಿಂದೆ ಇಂತಹ ಸಮತಾ ತತ್ವವನ್ನೇ ಈ ಭಾರತ ಭೂಮಿ ಯಿಂದ ಜಗತ್ತಿಗೆ ನೀಡಿದ್ದಾರೆ, ನಂತರ 12ನೇ ಶತಮಾನದಲ್ಲಿ ಬಸವಣ್ಣನವರು ಅಂಥ ಕ್ರಾಂತಿಯನ್ನು ಇದೇ ನೆಲದಿಂದ ವಿಶ್ವಕ್ಕೆ ತಿಳಿಸಿದ್ದಾರೆ. ಬುದ್ಧ ಮತ್ತು ಬಸವಣ್ಣನವರ ತತ್ವಗಳನ್ನು ಡಾ.ಬಿ.ಆರ್ ಅಂಬೇಡ್ಕರ ಅವರು ಸಂವಿಧಾನ ಮುಖಾಂತರ ನಮ್ಮೆಲ್ಲರಿಗೆ ನೀಡಿದ್ದಾರೆ. ಅದನೆಲ್ಲ ಜಾರಿಗೆ ಬಂದಲ್ಲಿ ಸಮಾ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಬಸವಣ್ಣ ತತ್ವಗಳನ್ನು ಡಾ.ಅಂಬೇಡ್ಕರ ಅಧ್ಯಯನ ಮಾಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರು 1994ರಲ್ಲಿ ಸುತ್ತೂರಿನ ಜಗದ್ಗುರುಗಳ ಸಾನಿಧ್ಯದಲ್ಲಿ ಆಡಿದ ಮಾತನ್ನು ಉಲ್ಲೇಖಿಸಿ ನಿಜಲಿಂಗಪ್ಪನವರಿಗೆ ಡಾ.ಅಂಬೇಡ್ಕರರು ನೀವು ಬಸವ ತತ್ವವನ್ನು ನಿಮ್ಮ ಹತ್ತಿರ ಏಕೆ ಇಟ್ಟುಕೊಂಡಿದ್ದಿರಿ? ಇದನ್ನು ಜಗತ್ತಿಗೆ ಮುಟ್ಟಿಸುವ ಕೆಲಸ ಆಗಬೇಕಿತ್ತು ಎಂದು ಹೇಳಿದರೆಂದು ನಿಜಲಿಂಗಪ್ಪ ತಮ್ಮ ಭಾಷಣದಲ್ಲಿ ತಿಳಿಸಿದರು. ಡಾ.ಅಂಬೇಡ್ಕರ್‌ ಅವರು ಬರೆದಿರುವ ಪುಸ್ತಕಗಳಲ್ಲಿ ಬಸವಣ್ಣನವರ ಬಗ್ಗೆ ಅವರ ಕ್ರಾಂತಿಯ ಬಗ್ಗೆ ಆಡಿದ ಮಾತುಗಳಿವೆ ಎಂದು ಸಚಿವರು ತಿಳಿಸಿದರು. ಇಲ್ಲಿಯ ಅನುಭವ ಮಂಟಪದಲ್ಲಿ ಎಲ್ಲಾ ಶರಣರ ಒಂದೊಂದು ವಚನ ಮತ್ತು ಅವರ ಚಿತ್ರ ಕಂಬಗಳ ಮೇಲೆ ಅಳವಡಿಸಿ ಈ ಕಟ್ಟದ ನಿರ್ಮಾಣವಾಗುತ್ತಿದೆ, ಇದನ್ನು ನಾನು ನೋಡಿ ಸಂತೋಷವಾಗಿದೆ. ರಾಜಕೀಯ ಉದ್ದೇಶದಿಂದಲೊ ಬಸವ ತತ್ವ ಬೆಳೆಸುವ ಉದ್ದೇಶದಿಂದಲೋ ಇಲ್ಲಿಯ ಅನುಭವ ಮಂಟಪ ನಿರ್ಮಾಣಕ್ಕೆ ಮುಂದಾಗಿರುವುದು ಪ್ರಶಂಸನೀಯ ಕೆಲಸವಾಗಿದೆ. ಇದಕ್ಕೆ ಸಹಕರಿಸಿದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಯಡಿಯೂರಪ್ಪ ಮುಂತಾದವರ ಕಾರ್ಯ ಮೆಚ್ಚುವಂಥದ್ದಾಗಿದೆ ಎಂದರು.

ಪೂಜ್ಯ ಜಗದೀಶ್ವರಿ ಮಾತಾ ಸಾನಿಧ್ಯ ವಹಿಸಿದರು. ವಿರತಿಶಾನಂದ ಸ್ವಾಮೀಜಿ, ಚೆನ್ನಬಸವಣ್ಣ, ಭಂತೆ ದಮ್ಮಾನಂದ ಮುಂತಾದವರು ಉಪಸ್ಥಿತರಿದ್ದರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಸಚಿವ ರಹೀಂ ಖಾನ್, ಸಂಸದ ಸಾಗರ ಖಂಡ್ರೆ, ಹುಮನಾಬಾದ ಶಾಸಕ ಸಿದ್ದು ಪಾಟೀಲ, ಮಾಜಿ ಸಚಿವ ರಾಜಶೇಖರ ಪಾಟೀಲ, ಮಾಜಿ ಎಂಎಲ್‌ಸಿ ವಿಜಯಸಿಂಗ, ಅಬ್ದುಲ್ ಖದೀರ್, ಧನರಾಜ ತಾಳಂಪಳ್ಳಿ, ಮಾಲಾ ಬಿ ನಾರಾಯಣರಾವ್‌ ಮುಂತಾದವರು ಉಪಸ್ಥಿತರಿದ್ದರು. ಡಾ.ಸಿದ್ಧರಾಮ ಶರಣರು ಬೆಲ್ದಾಳ ಪ್ರಾಸ್ತಾವಿಕ ಮಾತನಾಡಿದರು. ಶ್ರೀಕಾಂತ ಸ್ವಾಮಿ ಸ್ವಾಗತಿಸಿದರು.

ಬಸವತತ್ವದಂತೆ ನಡೆಯೋರು ಕಮ್ಮಿ, ಅದಕ್ಕಾಗಿಯೇ ತತ್ವವೂ ಬೆಳೆಯುತ್ತಿಲ್ಲ: ಮಹಾಮನೆಯ ಗಾಯತ್ರಿ ತಾಯಿ ಬೇಸರಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಬಸವಾದಿ ಶರಣರ ತತ್ವಗಳನ್ನು ಹೇಳುವವರು ಬಹಳಷ್ಟು ಜನರಾಗಿದ್ದಾರೆ, ಆದರೆ ಅದರಂತೆ ನಡೆಯುವ ಜನ ಬಹಳ ಕಡಿಮೆ, ಹೀಗಾಗಿಯೇ ಬಸವ ತತ್ವ ಬೆಳಯುತ್ತಿಲ್ಲ ಎಂದು ಬಸವಕಲ್ಯಾಣ ಮಹಾಮನೆಯ ಗಾಯತ್ರಿ ತಾಯಿ ನುಡಿದರುಅವರು ನಗರದ ಹೊರವಲಯದಲ್ಲಿರುವ ಬಸವ ಮಹಾಮನೆ ಅವರಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶದ 2ನೇ ದಿನದ ಷಟಸ್ಥಳ ಗೋಷ್ಠಿ ಯಲ್ಲಿ ಅತಿಥಿಯಾಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಸವತತ್ವವನ್ನು ದೊಡ್ಡ ದೊಡ್ಡ ಸಮ್ಮೇಳನಗಳನ್ನು ಆಯೋಜಿಸಿ ಅಲ್ಲಿ ಹೇಳುತ್ತಾರೆ. ಆದರೆ, ಅದರಂತೆ ನಡಯುವವವರು ಯಾರೂ ಇಲ್ಲವಾಗಿದೆ. ಬಸವತತ್ವ ತಿಳಿಯಬೇಕಾದರೆ ಆಳವಾದ ಅಧ್ಯಯನ ಮತ್ತು ಅನುಷ್ಠಾನ ಬೇಕು ಅಲ್ಲದೆ, ಷಟಸ್ಥಳ ಸಿದ್ಧಾಂತ ತಿಳಿದುಕೊಂಡಿರಬೇಕು ಎಂದರು.ಚನ್ನಬಸವ ಸ್ವಾಮಿಗಳು ಉಳವಿ ಮಾತನಾಡಿ, ಷಟಸ್ಥಳಗಳಲ್ಲಿ ಭಕ್ತನಾಗಬೇಕಾದರೆ ಬಹಳಷ್ಟು ಶ್ರಮ ಪಡಬೇಕು ಅದಕ್ಕಾಗಿ ಸತತ ಸಾಧನೆಬೇಕು. ಲಿಂಗಾಂಗ ಸಾಮರಸ್ಯ ಸಾಧಿಸಬೇಕಾದರೆ ಕೆಲವೊಂದು ಆಸನಗಳನ್ನು ಕಲಿಯಬೇಕು ಸಿದ್ಧಾಸನ ಹಾಕಿ ಸಾಧನೆ ಮಾಡಿದಾಗ ಬೇಗನೆ ಸಿದ್ಧಿ ಫಲಿಸುತ್ತದೆ. ಗುರುವಿನ ಮಾರ್ಗದರ್ಶನದಿಂದ ಮಾತ್ರ ನಮಗೆ ಆಧ್ಯಾತ್ಮದ ಮಾರ್ಗ ಬೇಗನೆ ಲಭಿಸುತ್ತದೆ. ವಚನಗಳನ್ನು ಅಧ್ಯಾಯನ ಮಾಡಿ ಅವುಗಳಂತೆ ನಡೆದು ನಮ್ಮ ಜೀವನದಲ್ಲಿ ಹಂತ ಹಂತವಾಗಿ ಅಳವಡಿಸಿಕೊಳ್ಳಬೇಕು ಎಂದರು.

ವಿರತಿಶಾನಂದ ಸ್ವಾಮಿಗಳು ವಿರಕ್ತಿ ಮಠ ಮನಗೊಳಿ ಅವರು ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಶರಣನಾಗಬೇಕಾದರೆ ತನ್ನಲ್ಲಿ ಇದ್ದ ಅವಗುಣಗಳನ್ನು ಬಿಟ್ಟು ಸದ್ಗುಣಗಳು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಕಾಂತ ಸ್ವಾಮಿ, ಬಸವರಾಜ ಬುಳ್ಳಾ, ಗಾಯತ್ರಿ ತಾಯಿ, ಗಂಗಾಧರ ದೇವರು ಸತ್ಯಕ್ಕ ತಾಯಿ ಮುಂತಾದವರು ಉಪಸ್ಥಿತರಿದ್ದರು.ಅನುಭವ ಮಂಟಪ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರವು ನನ್ನ ಪ್ರಯತ್ನದ ಫಲವಾಗಿದೆಬಸವಕಲ್ಯಾಣ: ಕೆಲವರು ಇತಿಹಾಸವನ್ನು ಮರೆಮಾಚಲು ಪ್ರಯತ್ನ ಮಾಡುತ್ತಾರೆ ಯಾರು ಏನೇ ಮಾಡಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಮತ್ತು ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನನ್ನ ಪ್ರಯತ್ನ ಮುಖ್ಯ ಎಂದು ಬಸವಶ್ರೀ ಡಾ.ಸಿದ್ಧರಾಮ ಶರಣರು ಬೆಲ್ದಾಳ ನುಡಿದರು.ಬಸವ ಮಹಾಮನೆ ಟ್ರಸ್ಟ ಹಮ್ಮಿಕೊಂಡಿರುವ ಸಮಾನತಾ ಸಮಾವೇಶದ ಸಾನಿಧ್ಯ ವಹಿಸಿ ಮಾತನಾಡಿ, ಅಭಿವೃದ್ಧಿ ಮಂಡಳಿ ಮಾಡುವಾಗ ಎಸ್.ಎಂ ಕೃಷ್ಣ ಅವರಿಗೆ ಪ್ರಥಮವಾಗಿ ನಾನೇ ಮನವಿ ಮಾಡಿ ದ್ದೇನೆ ನನ್ನ ಈ ಪ್ರಯತ್ನಕ್ಕೆ ಭೀಮಣ್ಣ ಖಂಡ್ರೆ, ಬಸವರಾಜ ಪಾಟೀಲ ಹುಮನಾಬಾದ, ಧರ್ಮಸಿಂಗ್, ರಾಜಶೇಖರ ಪಾಟೀಲ, ಎಂ.ಜಿ ಮೂಳೆ, ಜನಾರ್ಧನ ಪೂಜಾರಿ, ಈಶ್ವರ ಖಂಡ್ರೆ ಸಂಪೂರ್ಣ ಸಹಾಯ ಮಾಡಿದರು ಎಂದು ತಿಳಿಸಿದರು.

ನಾನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿರುವುದರಿಂದ ಇಂಥಹ ಒಂದು ಪ್ರಾಧಿಕಾರ ಬಸವಕಲ್ಯಾಣದಲ್ಲಿ ಮಾಡಬೇಕು ಶರಣರ ಸ್ಮಾರಕಗಳಲ್ಲಿ ಅಭಿವೃದ್ಧಿಯಾಗಬೇಕು ಎಲ್ಲರೂ ಸಮಾನತೆಯಿಂದ ಬಾಳಬೇಕು ಎಂಬ ಕನಸು ನನ್ನದಾಗಿದೆ. ಅದೇ ರೀತಿಯಾಗಿ ನೂತನ ಅನುಭವ ಮಂಟಪ ನಿರ್ಮಿಸಿ ಈ ಮುಖಾಂತರ 770 ಅಮರಗಣಂಗಳ ತತ್ವಗಳು ಜಗತ್ತಿಗೆ ಮುಟ್ಟಬೇಕು ಎಂಬ ಕಲ್ಪನೆ ನನ್ನಲಿ ಬಹಳ ವರ್ಷಗಳ ಹಿಂದೆ ಮೂಡಿಬಂದಿದೆ, ಅದನ್ನು ಸಹ ಸಿದ್ಧರಾಮಯ್ಯ ಸರ್ಕಾರ ಯಡಿಯೂರಪ್ಪ ಇನ್ನಿತರರು ಸೇರಿಕೊಂಡು ಮಾಡುತ್ತಿರುವುದು ನನಗೆ ಸಂತೋಷ ಉಂಟುಮಾಡಿದೆ ಎಂದರು.

ನಾನು ಯಾವುದೇ ಜಾತಿ ಮತ ಪಂಥ, ಪಕ್ಷಗಳಿಗೆ ಅಂಟಿಕೊಂಡವನಲ್ಲ ನಾವು ಸರ್ವಧರ್ಮಿಯರ ಏಳಿಗೆಗಾಗಿ ಸಮಾನತೆಗಾಗಿ ಶ್ರಮಿಸುವ ವ್ಯಕ್ತಿ ನಮ್ಮನು ಆಳುವ ಸರ್ಕಾರಗಳು ಜಾತಿ, ಮತ, ಪಂಥದ ತಾರತಮ್ಯಯನ್ನು ಮಾಡದೇ ಎಲ್ಲರಿಗೂ ಸಮಾನ ದೃಷ್ಟಿಯಿಂದ ನೋಡಿ ಸಂವಿಧಾನದಲ್ಲಿ ತಿಳಿಸಿರುವಂತೆ ನಾವೇಲ್ಲರು ಭಾರತಿಯರು ಎಂಬ ಕಲ್ಪನೆಯಲ್ಲಿ ಕೆಲಸ ಕಾರ್ಯಗಳು ನಡೆಯುವಂತೆ ನೋಡಿಕೊಳ್ಳಬೇಕು ಬಸವಾದಿ ಶಿವಶರಣರ ತತ್ವಗಳು ಜಗತ್ತಿಗೆ ಮುಟ್ಟಬೇಕು ಎಂದರು.

ಈ ನಮ್ಮ ಮಹಾಮನೆ ಆವರಣದಲ್ಲಿ ಮಾಜಿ ಸಚಿವ ಡಾ.ಎ.ಬಿ ಮಾಲಕರೆಡ್ಡಿ ಮೂರ್ತಿ ಸ್ಥಾಪನೆ ಕಲ್ಯಾಣ ಮಂಟಪ ಕಾಮಗಾರಿಗಳು ನಡೆಯಬೇಕು ಇದಕ್ಕಾಗಿ ಟೆಂಡರ ಪ್ರಕ್ರೀಯೆ ಮುಗಿದಿದ್ದು ಅದಕ್ಕೆ ಹಣ ಬೀಡುಗಡೆಯಾಗಿಲ್ಲ ಎಂಬ ವಿಷಯವನ್ನು ಸಚಿವ ಮಹದೇವಪ್ಪನವರ ಗಮನಕ್ಕೆ ತರುವುದಾಗಿ ಹೇಳಿದರು.

ಸಚಿವ ರಹೀಂ ಖಾನ್, ಸಂಸದ ಸಾಗರ ಖಂಡ್ರೆ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ.ಬಿ ನಾರಾಯಣರಾವ, ಬಸವಕಲ್ಯಾಣ ಶಾಸಕ ಶರಣು ಸಲಗರ, ಮಾಜಿ ಸಚಿವ ರಾಜಶೇಖರ ಪಾಟೀಲ, ಹುಮನಾಬಾದ ಶಾಸಕ ಸಿದ್ದು ಪಾಟೀಲ, ವಿಧಾನ ಪರಿಷತ ಸದಸ್ಯ ತಿಪ್ಪಣ್ಣ ಕುಮಕೂರ, ಮಾಜಿ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌, ಅಬ್ದುಲ್ ಮನ್ನಾನ ಸೇಠ, ಧನರಾಜ ತಾಳಂಪಳ್ಳಿ ಮುಂತಾದವರು ಉಪಸ್ಥಿತರಿದ್ದರು.