ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೆಹಲಿಯ ಅಂತಾರಾಷ್ಟ್ರೀಯ ಎಐ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ನೆಪದಲ್ಲಿ ನಕಲಿ ಕ್ಯೂಆರ್ ಕೋಡ್ ಬಳಸಿ ಪ್ರತಿಭಟಿಸಿದ ಯುವಕಾಂಗ್ರೆಸ್ ಕೃತ್ಯವನ್ನು ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿರುವ ಮೂಲಕ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ನೇತೃತ್ವದಲ್ಲಿ ಯುವ ಬಿಜೆಪಿಗರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಲ್ಲಿಂದ ಮೆರಣಿಗೆಯಲ್ಲಿ ಕಾಂಗ್ರೆಸ್ ವಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕೃತಿಯನ್ನು ಹೊತ್ತು ಭುವನೇಶ್ವರಿ ವೃತ್ತಕ್ಕೆ ಬರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪ್ರತಿಕೃತಿಯನ್ನು ಕಾರ್ಯಕರ್ತರಿಂದ ವಶಕ್ಕೆ ಪಡೆದುಕೊಂಡರು. ಬಿಜೆಪಿ ಕಾರ್ಯಕರ್ತರು, ಮುಖಂಡರು ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ನಂತರ ಸತ್ತಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಂತೆ ಡಿವೈಎಸ್ಪಿ ಸ್ನೇಹರಾಜ್ ಅವರ ನೇತೃತ್ವದ ತಂಡ ಎಲ್ಲರನ್ನು ವಶಕ್ಕೆ ಪಡೆಯಿತು.ಇದಕ್ಕೂ ಮುನ್ನಾ ಮಾತನಾಡಿದ ಬಿಜೆಪಿ ಯುವ ಅಧ್ಯಕ್ಷ ಸೂರ್ಯ ಬಾಲರಾಜ್, ‘ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುಜುಗರಕ್ಕೀಡು ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡಲೇ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.ಕಾಂಗ್ರೆಸ್ಸಿಗರು ಬಟ್ಟೆಬಿಚ್ಚಿ ದೇಶದ ಮಾನ ಹರಾಜು ಹಾಕಿದ್ದಾರೆ. ಈ ಕೂಡಲೇ ಬಂಧಿಸಿ, ಉಗ್ರ ಶಿಕ್ಷೆ ವಿಧಿಸಬೇಕು. ಕಾಂಗ್ರೆಸ್ ಕೃತ್ಯ ಖಂಡಿಸಿ ದೇಶದ್ಯಾಂತ ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಯುವ ಮೋರ್ಚಾ ಹಮ್ಮಿಕೊಂಡಿದೆ. ಈಗಾಗಲೇ ತೆಲಂಗಾಣದಲ್ಲಿ ಬಿಜೆಪಿಗರು, ಕಾಂಗ್ರೆಸ್ ಕಚೇರಿಗೆ ನುಗ್ಗಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪ್ರತಿಭಟನೆಯಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅನಂದ್ ಭಗೀರಥ, ಕಿರಣ್ ಕೆ.ಎಸ್. ಮಂಡಲದ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಯುವ ಮೊರ್ಚಾ ಮಾಜಿ ಅಧ್ಯಕ್ಷ ಪ್ರಣಯ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮುಖಂಡರಾದ ಮಂಜುಕೋಡಿ ಉಗನೆ ಜಿಲ್ಲಾ ಉಪಾಧ್ಯಕ್ಷ ವಿರಾಟ್ ಶಿವು, ಚುಡಾ ಮಾಜಿ ಅಧ್ಯಕ್ಷರಾದ ಎಸ್. ಬಾಲಸುಬ್ರಮಣ್ಯ, ಕುಲಗಾಣ ಶಾಂತಮೂರ್ತಿ, ಶಿವಣ್ಣ, ಬೋಗಾಪುರ ಕುಮಾರಸ್ವಾಮಿ ಸಹ ಪ್ರಮುಖ್ ಮಂಜುನಾಥ್, ಚಂದ್ರಶೇಖರ್, ಕೂಸಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್ ಕುಮಾರ್, ಮಹೇಶ್, ಮಂಜುನಾಥ್, ಗೋಪಾಲಕೃಷ್ಣ, ವೇಣುಗೋಪಾಲ್, ವೀರೇಂದ್ರ, ಪ್ರದೀಪ್, ಮಲ್ಲೇಶ್ ಸುಬ್ಬು, ಚಿರಂಜೀವಿ, ಕೋಟಂಬಳ್ಳಿ ಕುಮಾರ್, ಕೃಷ್ಣ, ಮಣಿ, ಪ್ರವೀಣ್, ರವಿ, ಬಂಗಾರು, ಶಿವರಾಜ್ ಶೆಟ್ಟಿ ಮೊದಲಾದವರು ಇದ್ದರು.---