ವಕ್ಫ್ ಭೂ ವಿವಾದ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Nov 06 2024, 11:54 PM IST

ಸಾರಾಂಶ

ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ವಿವಿಧ ಜಮೀನುಗಳನ್ನು ವಕ್ಪ್ ಬೋರ್ಡ್ ಮುಖಾಂತರ ಕಬಳಿಕೆ ಮಾಡುತ್ತಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ರೈತರ ಜಮೀನುಗಳನ್ನು ಕಬಳಿಸುವ ಷಡ್ಯಂತ್ರ ಮಾಡುತ್ತಿದೆ. ಸಚಿವ ಜಮೀರ್‌ ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ವಕ್ಫ್ ಬೋರ್ಡ್‌ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನು ಕಬಳಿಕೆ ಮಾಡುತ್ತಿದೆ ಎಂದು ಖಂಡಿಸಿ ನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.

ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ರೈತರ ವಿರೋಧಿಯಾಗಿದ್ದು, ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಜಮೀನುಗಳು, ಮಠಮಾನ್ಯಗಳು, ಹಿಂದೂ ದೇವಾಲಯಗಳ ಜಮೀನುಗಳನ್ನು ಕಬಳಿಸಲು ಹೊರಟಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಿಜೆಪಿ ಕಾನೂನು ಪ್ರಕೋಷ್ಠದ ಪದಾದಿಕಾರಿಗಳು ಮುಖಂಡ ದೇವನಹಳ್ಳಿ ಜಿಎನ್ ವೇಣುಗೋಪಾಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ವಕ್ಫ್ ಬೋರ್ಡ್ ವಿರುದ್ದ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರು ನಗರದ ಆಜಾದ್ ಚೌಕದ ಹರಿಹರೇಶ್ವರ ದೇವಾಲಯದ ಬಳಿಯಿಂದ ಪ್ರತಿಭಟನಾ ಜಾಥಾ ನಡೆಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಂಗ್ರೆಸ್‌, ವಕ್ಫ್ ಬೋರ್ಡ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ಬಳಿಕ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಸರ್ಕಾರ ಕೂಡಲೇ ರೈತರ ಜಮೀನುಗಳು, ಮಠಮಾನ್ಯಗಳ ಜಮೀನು, ಹಿಂದೂ ದೇವಾಲಯಗಳ ಜಮೀನುಗಳ ಕಂಬಳಿಸುವುದನ್ನು ನಿಲ್ಲಿಸಬೇಕು, ಪಹಣಿ ಕಲಂ ೧೧ ರಲ್ಲಿ ವಕ್ಫ್ ಎಂದು ನಮೂದು ಮಾಡುತ್ತಿರುವುದನ್ನು ರದ್ದುಪಡಿಸಬೇಕು, ಮುಂದೇ ವಕ್ಪ್ ಬೋರ್ಡ್ ರೈತರ ಜಮೀನುಗಳು ಕಬಳಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಗ್ರೇಡ್-೨ ತಹಸಿಲ್ದಾರ್ ರಾಜೇಂದ್ರ ಮೂಲಕ ರಾಜ್ಯಪಾಲರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮುಖಂಡ ದೇವನಹಳ್ಳಿ ಜಿಎನ್ ವೇಣುಗೋಪಾಲ್ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು, ವಿವಿಧ ಜಮೀನುಗಳನ್ನು ವಕ್ಪ್ ಬೋರ್ಡ್ ಮುಖಾಂತರ ಕಬಳಿಕೆ ಮಾಡುತ್ತಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ರೈತರ ಜಮೀನುಗಳನ್ನು ಕಬಳಿಸುವ ಷಡ್ಯಂತ್ರ ಮಾಡುತ್ತಿದೆ. ಪಾಕಿಸ್ಥಾನದ ಏಜೆಂಟರಂತೆ ವರ್ತಿಸುತ್ತಿರುವ ಸಚಿವ ಜಮೀರ್‌ ಅಹಮ್ಮದ್‌ಖಾನ್‌ಗೆ ಸಿಎಂ ಸಿದ್ದರಾಮಯ್ಯ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಚಿಂತಾಮಣಿಯಲ್ಲೂ ವಕ್ಫ್‌ ಖಾತೆ

ರಾಜ್ಯದೆಲ್ಲಡೇ ರೈತರ ಜಮೀನುಗಳನ್ನು ಕಬಳಿಸಿರುವ ವಕ್ಫ್ ಬೋರ್ಡ್ ಚಿಂತಾಮಣಿ ತಾಲೂಕಿನಲ್ಲಿಯೂ ಕೂಡ ರೈತರ ಜಮೀನಿಗಳನ್ನು ಕಬಳಿಕೆ ಮಾಡುತ್ತಿದೆ. ಚಿಂತಾಮಣಿ ನಗರದ ವಾರ್ಡನ ೩೧ ರ ತಿಮ್ಮಸಂದ್ರ ಗ್ರಾಮದ ಸರ್ವೇ ನಂ ೧೩ರಲ್ಲಿ ೨ ಎಕರೆ ೧೪ ಗುಂಟೆ ಜಮೀನು ಹಾಗೂ ಆದೇ ಗ್ರಾಮದ ಸರ್ವೇ ನಂ ೨೦ ರಲ್ಲಿ ೨ ಎಕರೆ ೧೯ ಗುಂಟೆ ಜಮೀನನ್ನು ವಕ್ಪ್ ಆಸ್ತಿ ಎಂದು ಮುದ್ರಿತವಾಗಿದ್ದು, ಕೂಡಲೇ ರೈತರು ನೊಂದ ಸಾರ್ವಜನಿಕರು ಎಚ್ಚೇತುಕೊಂಡು ತಮ್ಮ ತಮ್ಮ ಪಹಣಿಗಳನ್ನು ಪರಿಶಿಲಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಗುಡರ‍್ಲಹಳ್ಳಿ ರಾಜಣ್ಣ, ಮಾಜಿ ಅಧ್ಯಕ್ಷ ಶಿವಾರೆಡ್ಡಿ, ನಗರ ಘಟಕ ಮಾಜಿ ಅಧ್ಯಕ್ಷ ಮಹೇಶ್‌ಬೈ, ಬಿಜೆಪಿ ಪಕ್ಷದ ಮುಖಂಡರಾದ ಸಿ.ಆರ್ ವೆಂಕಟೇಶ್, ಗುಟ್ಟೂರು ಜಯರಾಮರೆಡ್ಡಿ, ಡಾಬಾ ಮಂಜು, ಪ್ರಕಾಶಗುಪ್ತಾ, ನಾರಾಯಣರೆಡ್ಡಿ, ಕೋನಪಲ್ಲಿ ವೆಂಕಟಶಿವಪ್ಪ, ದೇವರಾಜ್, ಗೋಕುಲ್ ಶ್ರೀನಿವಾಸ್, ಸುರೇಶ್, ಸದಾಶಿವರೆಡ್ಡಿ, ಪ್ರದೀಪ್, ಮನೋಹರ್, ಮಾಡಿಕೆರೆ ಆರುಣ್,ಬಿಜೆಪಿ ಕಾನೂನು ಪ್ರಕೋಷ್ಠದ ವಕೀಲರಾದ ಚೌಡಪ್ಪ, ಮುನಿರಾಜು ಕೆ.ಪಿ, ವೆಂಕಟಶೀವಾರೆಡ್ಡಿ, ಆಶ್ವಥರೆಡ್ಡಿ, ಗಾಜಲುಶಿವ, ಪಂಕಜ, ಸೌಭಾಗ್ಯಮ್ಮ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

.