ಸಾರಾಂಶ
ಕನ್ನಡಪ್ರಭ ವಾರ್ತೆ ನವದೆಹಲಿ
ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಉಳಿದ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮಾ.22ರಂದು ಘೋಷಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಈಗಾಗಲೇ ಬಾಕಿ ಉಳಿದಿರುವ ಐದು ಕ್ಷೇತ್ರಗಳ ಕುರಿತು ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಸುದೀರ್ಘ ಚರ್ಚೆಯಾಗಿದೆ.
ಮಾ.22ರಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಕುರಿತು ಚರ್ಚೆ ಮಾಡಿ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದರು.ಮೈತ್ರಿಯಿಂದಾಗಿ ಎನ್ಡಿಎ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಮಿತ್ ಶಾ ಮತ್ತು ಮೋದಿ ಅವರ ಜತೆಗೆ ಸಂಪರ್ಕದಲ್ಲಿದ್ದಾರೆ. ಟಿಕೆಟ್ ಘೋಷಣೆ ಪೂರ್ಣಗೊಂಡ ಬಳಿಕ ರಾಜ್ಯಾದ್ಯಂತ ನಾವು ಪ್ರವಾಸ ಆರಂಭಿಸುತ್ತೇವೆ ಎಂದು ಮಾಹಿತಿ ನೀಡಿದರು.
ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ಪುತ್ರನಿಗೆ ಟಿಕೆಟ್ ಕೈತಪ್ಪಿದ ಕುರಿತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ವಿರುದ್ಧ ಮಾಡುತ್ತಿರುವ ಟೀಕೆಗಳ ಕುರಿತ ಪ್ರಶ್ನೆಗೆ, ಅವರ ಬೇಜವ್ದಾರಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ.
ಚುನಾವಣಾ ಸಮಿತಿಯಲ್ಲಿ ಆ ಕುರಿತು ಎಲ್ಲವೂ ನಿರ್ಧಾರ ಆಗುತ್ತದೆ. ಟಿಕೆಟ್ ಹಂಚಿಕೆ ಯಡಿಯೂರಪ್ಪನ ವೈಯಕ್ತಿಕ ನಿರ್ಧಾರ ಅಲ್ಲ. ಅದೆಲ್ಲ ಅವರಿಗೆ ಎರಡ್ಮೂರು ದಿನದಲ್ಲಿ ಅರ್ಥ ಆಗಲಿದೆ. ಆಮೇಲೆ ಅವರೇ ಬರುತ್ತಾರೆ ಎಂದರು.
ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳಿಲ್ಲ: ಇದೇ ವೇಳೆ ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳಿಲ್ಲ ಎಂದು ಆರೋಪಿಸಿದ ಅವರು, ಇದೇ ಕಾರಣಕ್ಕೆ ಬಿಜೆಪಿ ಬಂಡಾಯ ನಾಯಕರನ್ನು ಸಂಪರ್ಕ ಮಾಡುತ್ತಿದ್ದಾರೆ. ಈಶ್ವರಪ್ಪ ಅವರನ್ನು ಸಮಧಾನಪಡಿಸುವ ಎಲ್ಲ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.