ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಂ.ಕೇಶವ, ಬಿ.ಎಂ.ಕೃಷ್ಣ ಸೇರಿದಂತೆ ಹೊರಮಾವು ಬ್ಲಾಕ್‌ನ ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬಳಿಕ ಮಾತನಾಡಿದ ರಾಮಲಿಂಗಾರೆಡ್ಡಿ, ಸರ್ಕಾರದ ಉತ್ತಮ ಆಡಳಿತಕ್ಕೆ ರಾಜ್ಯದ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಚೇಳಕೇರೆ, ಬಾಬುಸಾಪಾಳ್ಯ, ಹೊರಮಾವು ವಾರ್ಡ್‌ಗಳಲ್ಲಿ ಇದು ಸಂಚಲನ ಮೂಡಿಸಿದೆ. ಗ್ಯಾರಂಟಿಗಳ ಅನುಷ್ಠಾನ ಸೇರಿದಂತೆ ರಾಜ್ಯದ ಜನತೆಯ ಭರವಸೆಯನ್ನು ಈಡೇರಿಸುವ ಮೂಲಕ ಅತಿಹೆಚ್ಚು ವಿಶ್ವಾಸನೀಯ ಪಕ್ಷವಾಗಿ ಕಾಂಗ್ರೆಸ್‌ ಹೆಸರು ಮಾಡಿದೆ ಎಂದು ಬಣ್ಣಿಸಿದರು.

ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ನೇತೃತ್ವದಲ್ಲಿ ಕೇಶವ ಹಾಗೂ ಬಿ.ಎಂ.ಕೃಷ್ಣ ಅವರ ಜೊತೆ ಸಾವಿರಾರು ಬೆಂಬಲಿಗರು ಸೇರ್ಪಡೆಯಾಗಿರುವುದು ನಮಗೆ ಬಲ ತಂದಿದೆ. ಬಾಬುಸಾಪಾಳ್ಯ, ಹೊರಮಾವು ಮತ್ತಿತರ ವಾರ್ಡ್‌ಗಳಲ್ಲಿ ಮುಂದಿನ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.

ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭೆ ಮಾಜಿ ಸದಸ್ಯ ಪ್ರೊ.ರಾಜೀವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್, ಬಾಬುಸಾಪಾಳ್ಯ ವಾರ್ಡ್‌ ಅಧ್ಯಕ್ಷ ಎಸ್.ಬಾಬು, ಹಿರಿಯ ಮುಖಂಡರಾದ ಹೊರಮಾವು ಅಗರ ಪ್ರಕಾಶ್, ಹೇಮಾವತಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.