ಜಾತಿಗಣತಿ: ಪ್ರಬಲ ಸಮುದಾಯಗಳ ವಿರೋಧಕ್ಕೆ ಮಣಿದ ಕೈ ಹೈಕಮಾಂಡ್‌

| N/A | Published : Jun 11 2025, 04:13 AM IST

Vidhan soudha

ಸಾರಾಂಶ

ಪ್ರಬಲ ಸಮುದಾಯಗಳ ಸಚಿವ ಸಂಪುಟದ ಸಚಿವರೂ ಒಟ್ಟಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಈ ಸಮೀಕ್ಷೆ ಜಾರಿಗೆ ಒಪ್ಪದ ಕಾಂಗ್ರೆಸ್‌ ಹೈಕಮಾಂಡ್‌ ಮರುಗಣತಿ ನಡೆಸಲು ಸೂಚಿಸಿದೆ.

ಬೆಂಗಳೂರು : ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆ ನಡೆಸಿದ್ದ ಜಾತಿ ಗಣತಿ ವರದಿಗೆ ಪ್ರಬಲ ಲಿಂಗಾಯತ, ಒಕ್ಕಲಿಗ ಸಮುದಾಯದ ಸಂಘ, ಸಂಸ್ಥೆಗಳ ಜತೆಗೆ ಆ ಸಮುದಾಯಗಳ ಸಚಿವ ಸಂಪುಟದ ಸಚಿವರೂ ಒಟ್ಟಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಣಾಮ ಈ ಸಮೀಕ್ಷೆ ಜಾರಿಗೆ ಒಪ್ಪದ ಕಾಂಗ್ರೆಸ್‌ ಹೈಕಮಾಂಡ್‌ ಮರುಗಣತಿ ನಡೆಸಲು ಸೂಚಿಸಿದೆ.

ಸರ್ಕಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ವರದಿಯನ್ನು ಸಚಿವ ಸಂಪುಟದ ಮುಂದೆ ತಂದು ಬಹಿರಂಗಪಡಿಸುತ್ತಿದ್ದಂತೆ ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಂದ ಅಸಮಾಧಾನ, ಆಕ್ರೋಶ ಬುಗಿಲೆದ್ದಿತ್ತು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಈಶ್ವರ್‌ ಖಂಡ್ರೆ ಸೇರಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಸಚಿವರೆಲ್ಲರೂ ಒಟ್ಟಾಗಿಯೇ ಸಚಿವ ಸಂಪುಟದ ಮುಂದೆ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನೇರವಾಗಿಯೇ ಈ ವರದಿಗೆ ಅಪಸ್ವರವೆತ್ತಿದ್ದರು. ಜಾತಿ ಗಣತಿ ವರದಿ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಮುಖ್ಯಮಂತ್ರಿಯವರು ತಮ್ಮ ಸಂಪುಟದ ಸಹದ್ಯೋಗಿಗಳಿಗೆ ಸೂಚಿಸಿದ್ದರು. ಉಳಿದ ಎಲ್ಲ ಸಮುದಾಯದ ಸಚಿವರು ವೈಯಕ್ತಿಕವಾಗಿ ಅಭಿಪ್ರಾಯ ನೀಡಿದ್ದರೆ, ಲಿಂಗಾಯತ ಸಚಿವರು ಮಾತ್ರ ಸಂಘಟಿತವಾಗಿ ಪತ್ರ ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಸಚಿವ ಸಂಪುಟ ಸಭೆಗಳಲ್ಲಿ ಒಕ್ಕಲಿಗ ಸಚಿವರು ನೇರವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.

ಮತ್ತೊಂದೆಡೆ ಕಾಂಗ್ರೆಸ್‌ನ ಹಿರಿಯ ಶಾಸಕರೂ ಆದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚೇಗೌಡ ಸೇರಿ ಪ್ರಬಲ ಸಮುದಾಯಗಳ ಮುಖಂಡರು, ಸಂಘಟನೆಗಳು, ಸ್ವಾಮೀಜಿಗಳೂ ಈ ವರದಿ ಅವೈಜ್ಞಾನಿಕ, ಮನೆ ಮನೆ ಸಮೀಕ್ಷೆ ನಡೆಸದೆ ಕೂತಲ್ಲಿಯೇ ವರದಿ ಸಿದ್ಧಪಡಿಲಾಗಿದೆ. ನಮ್ಮ ಸಮುದಾಯಗಳ ಅಸಲಿ ದತ್ತಾಂಶ ಇಲ್ಲ. ಇದನ್ನು ಜಾರಿಗೊಳಿಸಲು ಮುಂದಾದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಈ ವರದಿಯನ್ನು ತಿರಸ್ಕರಿಸಿ ಹೊಸ ಸಮೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಮನಗಂಡು ಹೈಕಮಾಂಡ್‌ ನಾಯಕರು ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರು ಗಣತಿ ನಡೆಸಲು ಸರ್ಕಾರದ ನಾಯಕತ್ವಕ್ಕೆ ಸೂಚಿಸಿದ್ದಾರೆ.

ವರದಿಗೆ ವಿರೋಧ

ಏಕೆ ಕೇಳಿಬಂದಿತ್ತು?

1 ರಾಜ್ಯ ಸರ್ಕಾರ 10 ವರ್ಷಗಳ ಹಿಂದೆ ಜಾತಿ ಗಣತಿ ನಡೆಸಿ ಈಗ ವರದಿ ಪಡೆದಿದೆ. 10 ವರ್ಷಗಳಲ್ಲಿ ಜನಸಂಖ್ಯೆ ಸಾಕಷ್ಟು ಬದಲಾಗಿದೆ

2 ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಜಾತಿ ಗಣತಿಯೇ ಅಪ್ರಸ್ತುತ, ಅವೈಜ್ಞಾನಿಕ ಎಂದು ಜಾತಿಗಳು ಆರೋಪ ಮಾಡಿದ್ದವು

3 ಗಣತಿದಾರರು ಎಲ್ಲ ಮನೆಗೂ ಭೇಟಿ ಕೊಟ್ಟಿಲ್ಲ. ಕುಳಿತಲ್ಲೇ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದ್ದಾರೆ ಎಂದು ಸತತ ದೂರು ನೀಡಿದ್ದವು

4 ತಮ್ಮ ಜಾತಿ ಜನಸಂಖ್ಯೆ ಇನ್ನೂ ಹೆಚ್ಚಿದೆ. ಆದರೆ ತಮ್ಮ ಸಮುದಾಯದ ಸಂಖ್ಯೆಯನ್ನು ಬೇಕಂತಲೇ ಗಣತಿಯಲ್ಲಿ ಕಮ್ಮಿ ತೋರಿಸಲಾಗಿದೆ

5 ನಿರ್ದಿಷ್ಟ ಸಮುದಾಯಗಳ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ತೋರಿಸಲಾಗಿದೆ ಎಂದು ಹಲವು ಜಾತಿ ಸಂಘಟನೆಗಳು ದೂರಿದ್ದವು

6 ಲಿಂಗಾಯತ, ಒಕ್ಕಲಿಗ ಸಂಘಟನೆಗಳು ಈ ಬಗ್ಗೆ ಹೋರಾಟ ನಡೆಸುವುದಾಗಿಯೂ ಘೋಷಣೆ ಮಾಡಿದ್ದವು. ಹಲವು ಸುತ್ತಿನ ಸಭೆ ನಡೆಸಿದ್ದವು

7 ಗಣತಿ ವರದಿಯನ್ನು ತಿರಸ್ಕರಿಸಿ ಹೊಸದಾಗಿ ಸಮೀಕ್ಷೆ ನಡೆಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದವು

8 ಹೀಗಾಗಿ ಸರ್ಕಾರ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿರಲಿಲ್ಲ. ಇದೀಗ ಪರಿಷ್ಕೃತ ಗಣತಿಗೆ ವರಿಷ್ಠರು ಅಸ್ತು ಎಂದಿದ್ದಾರೆ

Read more Articles on